ಬೆಂಗಳೂರು,ಜೂ.30- ಕಾಂಗ್ರೆಸ್ನಲ್ಲಿ ಸೃಷ್ಟಿಯಾಗಿ ರುವ ರಾಜಕೀಯ ಕ್ರಾಂತಿಯ ಚರ್ಚೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಮಹತ್ವದ ಸಭೆ ನಡೆಸಿದ್ದಾರೆ.ಮಧ್ಯಾಹ್ನ ಕಾಂಗ್ರೆಸ್ ಕಚೇರಿಯಲ್ಲಿ ಅತೃಪ್ತ ಹಾಗೂ ಅಸಮಾಧಾನಿತ ಶಾಸಕರ ಜೊತೆ ಪ್ರತ್ಯೇಕ ಚರ್ಚೆಗಳನ್ನು ನಡೆಸುವ ಮೂಲಕ ಅಸಮಾಧಾನವನ್ನು ಸರಿಪಡಿಸಲು ಮೂರು ದಿನಗಳ ಸರಣಿ ಸಭೆಗಳನ್ನು ಸುರ್ಜೇವಾಲ ನಡೆಸಲಿದ್ದಾರೆ.
ಮೊದಲ ದಿನವಾದ ಇಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 8 ಶಾಸಕರ ಜೊತೆ ಮೊದಲ ಸುತ್ತಿನ ಸಭೆ ನಡೆದಿದೆ. ನಾಳೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ, ಕೊಡಗು ಜಿಲ್ಲೆಗಳ ಶಾಸಕರು ಹಾಗೂ ನಾಯಕರುಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಜು.3 ರಂದು ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳ ಶಾಸಕರ ಜೊತೆ ಸಭೆ ನಿಗದಿಯಾಗಿದೆ.
ಉತ್ತರಕರ್ನಾಟಕ ಭಾಗದ ಜಿಲ್ಲೆಗಳ ಶಾಸಕರ ಜೊತೆ ಮುಂದಿನ ವಾರ ಸಭೆ ನಡೆಸಲು ಮತ್ತೊಂದು ಸುತ್ತಿನ ಪ್ರವಾಸ ಕೈಗೊಳ್ಳುವುದಾಗಿ ಸುರ್ಜೇವಾಲ ತಿಳಿಸಿದ್ದಾರೆ. ಶಾಸಕರ ಜೊತೆ ವ್ಯಕ್ತಿಗತ ಚರ್ಚೆ ನಡೆಸುತ್ತಿರುವ ಸುರ್ಜೇವಾಲ, ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳ ನಮೂನೆಯನ್ನು ಸಿದ್ಧಪಡಿಸಿಕೊಂಡಿದ್ದು, ಪ್ರತಿಯೊಬ್ಬರಿಂದಲೂ ಅದಕ್ಕೆ ವಿವರಣೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಶಾಸಕರ ಅಭಿಪ್ರಾಯಗಳನ್ನು ಖುದ್ದು ಆಲಿಸಲಿದ್ದಾರೆ.
ಸಚಿವರು ತಮ ಕ್ಷೇತ್ರಗಳಿಗೆ ಎಷ್ಟು ಬಾರಿ ಬಂದಿದ್ದಾರೆ, ಯಾರ್ಯಾರು ಬಂದಿದ್ದಾರೆ, ಯಾರೆಲ್ಲಾ ಬಂದಿಲ್ಲ, ಮನವಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಶಾಸಕರ್ಯಾರು, ಸ್ಪಂದಿಸದೇ ಇರುವವರ್ಯಾರು ಎಂಬ ವಿಚಾರವನ್ನು ಸುರ್ಜೇವಾಲ ಪ್ರಮುಖವಾಗಿ ಚರ್ಚೆ ನಡೆಸಿದ್ದಾರೆ.
ಇಲಾಖಾವಾರು ತಮ ಕ್ಷೇತ್ರಕ್ಕೆ ಬಂದಿರುವ ಅನುದಾನವೆಷ್ಟು?, ಅದರಲ್ಲಿ ಬಿಡುಗಡೆಯಾದ ಹಣ, ಖರ್ಚಾಗಿರುವ ಹಣವೆಷ್ಟು?, ಬಾಕಿ ಬಿಡುಗಡೆಯಾಗಬೇಕಿರುವ ಹಣ ಮತ್ತು ಅನುಮತಿ ದೊರೆಯಬೇಕಾದ ಬಾಕಿ ಪ್ರಸ್ತಾವನೆಗಳೆಷ್ಟು? ಎಂಬ ಪ್ರಶ್ನೆಗಳನ್ನು ಕೇಳಲಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ತಮ ಕ್ಷೇತ್ರಕ್ಕೆ ಎಷ್ಟು ಫಲಾನುಭವಿಗಳಿಗೆ ಸೌಲಭ್ಯ ದೊರಕಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಮತದಾರರು ನಂತರ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಹೊಂದಿರುವ ಅಭಿಪ್ರಾಯಗಳೇನು?, ಗ್ಯಾರಂಟಿ ಯೋಜನೆಗಳು ಜನರನ್ನು ಖುಷಿ ಪಡಿಸಲಿವೆಯೇ?, ಇವು ಕಾಂಗ್ರೆಸ್ಗೆ ರಾಜಕೀಯ ಲಾಭ ತಂದುಕೊಡಲಿವೆಯೇ? ಎಂಬ ಪ್ರಶ್ನೆಗಳನ್ನು ಶಾಸಕರ ಮುಂದಿಟ್ಟಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರಗಳಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೀರ?, ಹಿಂದಿನ ಕಾಮಗಾರಿಗಳು ಎಷ್ಟು ಮುಗಿದಿವೆ?, ಹೊಸ ಯೋಜನೆಗಳನ್ನು ಯಾವ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ? ಎಂಬ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕುವ ಮೂಲಕ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದೆಯೇ?, ಇಲ್ಲವೇ ಎಂಬ ಸ್ಪಷ್ಟನೆ ಪಡೆದುಕೊಳ್ಳಲು ಸುರ್ಜೇವಾಲ ಯತ್ನಿಸಿದ್ದಾರೆ.
ಜಿಲ್ಲಾವಾರು ಪಕ್ಷ ಸಂಘಟನೆಯಲ್ಲಿ ಶಾಸಕರ ಪಾತ್ರ ಏನು, ಜಿಲ್ಲೆ, ಬ್ಲಾಕ್ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಿದ್ದಾರೆ, ಶಾಸಕರು ಮತ್ತು ಪಕ್ಷದ ನಡುವಿನ ಸೌಹಾರ್ದತೆಯ ಸಂಬಂಧ ಯಾವ ಮಟ್ಟಿಗಿದೆ ಎಂಬುದನ್ನು ಸುರ್ಜೇವಾಲ ಪ್ರಶ್ನೆಗಳ ಮೂಲಕ ತಿಳಿದುಕೊಂಡಿದ್ದಾರೆ.
ಕೆಲವು ಶಾಸಕರ ಜೊತೆ ವ್ಯಕ್ತಿಗತ ಚರ್ಚೆಯಲ್ಲಿ ಕ್ಷೇತ್ರದ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಸಮಾಲೋಚನೆ ನಡೆಸುವುದಾಗಿ ಮೂಲಗಳು ತಿಳಿಸಿವೆ.ಯಾವುದೇ ಸಂದರ್ಭದಲ್ಲೂ ಶಿಸ್ತು ಉಲ್ಲಂಘನೆ ಮಾಡದಂತೆಯೂ ಸುರ್ಜೇವಾಲ ಶಾಸಕರಿಗೆ ತಾಕೀತು ಮಾಡಿದ್ದಾರೆ.
ಅಸಮಾಧಾನಿತರ ಜೊತೆ ಚರ್ಚೆ :
ಬಹಿರಂಗ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಶಾಸಕರಾದ ಬಿ.ಆರ್.ಪಾಟೀಲ್, ರಾಜುಕಾಗೆ, ಇಕ್ಬಾಲ್ ಹುಸೇನ್, ಕೆ.ವೈ.ನಂಜೇಗೌಡ, ಬೇಳೂರು ಗೋಪಾಲಕೃಷ್ಣ, ಶ್ರೀನಿವಾಸ್, ಎಚ್.ಸಿ.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ರವಿಕುಮಾರ ಗಣಿಗ, ಬಸವರಾಜ್ ಶಿವಗಂಗ ಸೇರಿದಂತೆ ಇನ್ನೂ ಕೆಲವರ ಜೊತೆ ಸುರ್ಜೇವಾಲ ಖಾಸಗಿ ಸಮಾಲೋಚನೆ ನಡೆಸಿದ್ದಾರೆ.
ಹಿನ್ನೆಲೆ :
ಖುದ್ದು ಸುರ್ಜೇವಾಲ ಅವರು ಶಾಸಕರುಗಳಿಗೆ ಕರೆ ಮಾಡಿ ಸಭೆಗೆ ಆಗಮಿಸುವಂತೆ ಬುಲಾವು ನೀಡಿದ್ದರು. ಬಿ.ಆರ್.ಪಾಟೀಲ್, ರಾಜು ಕಾಗೆ ಅವರ ಹೇಳಿಕೆಗಳು ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟುಮಾಡಿದೆ. ಸಚಿವ ಕೆ.ಎನ್.ರಾಜಣ್ಣ ಅವರು ರಾಜಕೀಯ ಕ್ರಾಂತಿಯ ಬಗ್ಗೆ ಹೇಳಿದ ನಂತರವಂತೂ ಕಾಂಗ್ರೆಸ್ನಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ.
ಅದಕ್ಕೆ ಪೂರಕವಾಗಿ ಹಲವಾರು ಶಾಸಕರು ಹೇಳಿಕೆಗಳ ಮೇಲೆ ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ. ಸೆಪ್ಟೆಂಬರ್ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗುತ್ತಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಅವರವರ ಬಣದ ಮುಖಂಡರುಗಳು ಪ್ರತಿಪಾದಿಸಲಾರಂಭಿಸಿದ್ದಾರೆ. ಹೀಗಾಗಿ ಇದು ಪಕ್ಷಕ್ಕೆ ಭಾರೀ ಮುಜುಗರ ಉಂಟುಮಾಡುತ್ತಿದೆ.
ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿರೋಧಪಕ್ಷಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ನ ಶಾಸಕರು, ನಾಯಕರುಗಳ ಟೀಕೆ ಮಾಡುತ್ತಿರುವುದು ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಸಭೆ ಮಹತ್ವ ಪಡೆದುಕೊಂಡಿದೆ.