ನವದೆಹಲಿ,ಫೆ.8- ಇನ್ನು ಒಂದು ಜನ್ಮ ಎತ್ತಿ ಬಂದರೂ ಪ್ರಧಾನಿ ನರೇಂದ್ರಮೋದಿ ಅವರು ನಮನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಅಬ್ಬರಿಸಿ ಭಾಷಣ ಮಾಡಿದ್ದ ಎಎಪಿ ಸಂಸ್ಥಾಪಕ ಅಧ್ಯಕ್ಷ ರಾಷ್ಟ್ರೀಯ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಲು ಕಂಡಿದ್ದಾರೆ.
ದೆಹಲಿಯ ನ್ಯೂಡೆಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಅಭ್ಯರ್ಥಿ ಫರ್ವೇಜ್ ವರ್ಮ ಅವರು 3182 ಮತಗಳ ಅಂತರದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ.
ವಿಶೇಷವೆಂದರೆ ಈ ಹಿಂದೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲ ದೀಕ್ಷಿತ್ ಅವರನ್ನು 2013ರ ಚುನಾವಣೆಯಲ್ಲಿ ಪರಾಭವಗೊಳಿಸಿ ಮೊದಲ ಬಾರಿಗೆ ಗೆಲುವು ಕಂಡಿದ್ದರು. ಅಂದಹಾಗೆ ಈಗ ಕೇಜ್ರಿವಾಲ್ಗೆ ಸೋಲಿನ ರುಚಿ ತೋರಿಸಿರುವ ಫರ್ವೇಜ್ ವರ್ಮ, ದೆಹಲಿ ಮಾಜಿ ಮುಖ್ಯಮಂತ್ರಿಯಾಗಿದ್ದ ಸಾಹೀಬ್ ಸಿಂಗ್ ವರ್ಮ ಅವರ ಪುತ್ರ. ದೆಹಲಿಯಲ್ಲೇ ಅತ್ಯಂತ ಪ್ರತಿಷ್ಠಿತೆಯ ಕಣವಾಗಿದ್ದ ನ್ಯೂಡೆಲ್ಲಿ ಕ್ಷೇತ್ರದಲ್ಲಿ ಪ್ರತಿಷ್ಟೆಯನ್ನು ಕಣಕ್ಕಿಟ್ಟಿದ್ದ ಬಿಜೆಪಿ ಫರ್ವೇಜ್ ವರ್ಮ ಅವರನ್ನು ಕಣಕ್ಕಿಳಿಸಿತ್ತು.
ಅರವಿಂದ್ ಕೇಜ್ರಿವಾಲ್ ಸೋಲು ಬಿಜೆಪಿಗೆ ಭಾರೀ ಮುಖಭಂಗ ಉಂಟು ಮಾಡಿದೆ. ಇದು ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಅಬಕಾರಿ ಹಗರಣ ಹಾಗೂ ಭ್ರಷ್ಟಾಚಾರದ ಆರೋಪಗಳು ಅವರ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ ಒಂದು ಕಾಲದಲ್ಲಿ ವಾಗನರ್ ಕಾಲಿನ ಮೂಲಕ ಮುಖ್ಯಮಂತ್ರಿಯಾಗಿ ಯಾವುದೇ ಅಂಗರಕ್ಷಕರೂ ಇಲ್ಲದೆ ಒಬ್ಬ ಸಾಮಾನ್ಯ ಪ್ರಜೆಯಂತೆ ಆಡಳಿತ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಕೇಜ್ರಿವಾಲ್ ಅವರ ಭವ್ಯ ಬಂಗಲೆಯ ನಿರ್ಮಾಣ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು.
ಪ್ರಧಾನಿ ನರೇಂದ್ರಮೋದಿ ಅವರು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಶೇಷ ಮಹಲ್ ಮಾಲೀಕನನ್ನು ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ನೋಡುತ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ಜೈಲು ಪಾಲಾಗಿದ್ದರೂ ರಾಜೀನಾಮೆ ನೀಡದೆ ತಿಹಾರ್ ಜೈಲಿನ ಮೂಲಕ ಆಡಳಿತ ನಡೆಸಿದ್ದೂ ಕೂಡ ವಿವಾದಕ್ಕೆ ಕಾರಣವಾಗಿತ್ತು.
ಎಎಪಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಹಲವರು ಸಮರ್ಥ ಅಭ್ಯರ್ಥಿಗಳಿದ್ದರೂ ಕೇಜ್ರಿವಾಲ್ ಯಾರಿಗೂ ಅವಕಾಶ ಕೊಡದೆ ಜೈಲಿನಿಂದಲೇ ಆಡಳಿತ ನಿಯಂತ್ರಣ ಮಾಡಿದ್ದು ಕಾರ್ಯಕರ್ತರೇ ಬೇಸರಗೊಂಡಿದ್ದರು. ತಮ ಅಣತಿಯಂತೆ ನಡೆದುಕೊಳ್ಳುವ ಆತಿಶಿ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕೂಡ ಹಲವರಲ್ಲಿ ಅಸಮಾಧಾನ ಉಂಟುಮಾಡಿತ್ತು. ಇದೆಲ್ಲದರ ಫಲಿತಾಂಶವೇ ಚುನಾವಣೆಯಲ್ಲಿ ಅವರಿಗೆ ಸೋಲು ಉಂಟಾಗಿದೆ.