ಕೊಳ್ಳೇಗಾಲ,ಜೂ.29- ಮಲೈಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಪ್ರದೇಶದಲ್ಲಿ ನಡೆದಿರುವ ಐದು ಹುಲಿ ಸಾವಿನ ಪ್ರಕರಣದ ಮೂವರು ಆರೋಪಿಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗೂ ಹೂಗ್ಯಂ ಅರಣ್ಯ ವಲಯಾಧಿಕಾರಿ ಮಾದೇಶ್ ಅವರನ್ನೊಳಗೊಂಡ ತಂಡದೊಂದಿಗೆ ಆರೋಪಿಗಳಾದ ಹನೂರಿನ ಮಿಣ್ಯ ವ್ಯಾಪ್ತಿಯ ಕೊಪ್ಪ ಗ್ರಾಮದ ಮಾಧುರಾಜ್, ನಾಗರಾಜ್, ಕೊನ್ನಪ್ಪ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರಾದ ಕಾವ್ಯಶ್ರೀ ಅವರು ಆರೋಪಿಗಳನ್ನು ಮೂರು ದಿನಗಳ ಕಾಲ (ಸೋಮವಾರ ತನಕ) ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಪ್ರದೇಶದಲ್ಲಿ ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದುರ್ಘಟನೆ ನಡೆದಿತ್ತು. ಈ ದುರ್ಘಟನೆಯು ರಾಜ್ಯದ ವನ್ಯಜೀವಿ ಸಂರಕ್ಷಣೆಗೆ ಗಂಭೀರ ಎಚ್ಚರಿಕೆಯನ್ನು ನೀಡಿದಂತಾಗಿತ್ತು.
5 ಹುಲಿಗಳ ಮೃತ ದೇಹಗಳು ಬುಧವಾರ ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದವು. ವಿಷಯ ತಿಳಿದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆರವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕಅಅಈ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ, ಸತ್ಯಾಂಶ ತಿಳಿಯುವಂತೆ ಆದೇಶ ನೀಡಿದ್ದರು. ಈ ವೇಳೆ ವನ್ಯಜೀವಿ ತಜ್ಞರು ವಿಷ ಪ್ರಶಾಣದಿಂದ ಹುಲಿಗಳು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ಅದೇ ರೀತಿ, ಈ ಸಾವು ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಂಭವಿಸಿದ್ದರೆ, ಅವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಜೊತೆಗೆ, ವಿದ್ಯುತ್ ಸ್ಪರ್ಶ ಅಥವಾ ವಿಷ ಪ್ರಾಯೋಗದಿಂದ ಸಾವಾಗಿದ್ದರೆ, ಅದಕ್ಕೆ ಹೊಣೆವಾಹಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದ ಸಚಿವರು ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ ಮೂರು ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಇಲಾಖೆಗೆ ಕಟ್ಟು ನಿಟ್ಟಾದ ಸೂಚನೆ ನೀಡಿದ್ದರು.
ಕಳೆದ ಐದಾರು ದಿನಗಳ ಹಿಂದೆ ಶಿವಣ್ಣೆಗೌಡ ಎಂಬುವರ ದನವೊಂದು ಹುಲಿಗೆ ಆಹಾರವಾಗಿ ಸಿಕ್ಕಿ ಅದನ್ನು ವಧೆಮಾಡಿತ್ತು. ಅದರಂತೆ ದನವನ್ನು ಕೊಂದ ಹುಲಿಯನ್ನು ಕೊಂದೆ ತೀರಬೇಕೆನ್ನುವ ಹಠಕ್ಕೆ ಬಿದ್ದು ಅಲ್ಲಿ ಸತ್ತು ಬಿದ್ದಿದ್ದ ದನದ ಮಾಂಸಕ್ಕೆ ವಿಷಕಾರಿ ವಸ್ತು ಬಳಸಿದ್ದರು ಆರೋಪಿಗಳು.
ಅದರಂತೆ ಹುಲಿಯಿಂದ ಹತ್ಯೆಯಾದ ದನದ ಮಾಲೀಕ ಶಿವಣ್ಣೆಗೌಡ ಎಂಬುವವರ ಮಗ ಮಾದುರಾಜ್ ಹುಲಿಗಳ ಕೊಲ್ಲಲು ತೀರ್ಮಾನಿಸಿದಂತಿದೆ. ಅದಕ್ಕಾಗಿ ಹುಲಿಗಳು ತಿಂದು ಬಿಟ್ಟಿದ್ದ ದನದ ಮಾಂಸಕ್ಕೆ ವಿಷಕಾರಿ ವಸ್ತುವಿಟ್ಟು ದೇಶವೇ ಬೆರಗಾಗುವವಂತಹ ನೀಚಕೃತ್ವಕ್ಕೆ ಕೈಯಾಕಿದ್ದಾನೆ.
ಮಾದುರಾಜ್ ಇಟ್ಟ ವಿಷಕ್ಕೆ ಐದು ಹುಲಿಗಳು ಒಮ್ಮೆಲೆ ಸಾವುಗೀಡಾಗಿದೆ. ಈತನ ಬಗ್ಗೆ ಅನುಮಾನಗೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳಗ್ಗೆಯಿಂದಲೆ ಇವನ ಚಲನವಲನಗಳನ್ನ ಗಮನಿಸಿ ಬಂಧಿಸುವ ಕಾರ್ಯವನ್ನು ಮಾತ್ರ ಬಿಟ್ಟುಕೊಂಡಿದ್ದರು. 5 ಜನರನ್ನು ವಿಚಾರಣೆಗೆ ಕರೆತಂದಿದ್ದವರ ಪೈಕಿ ಈತನ ತಂದೆ ಶಿವಣ್ಣಗೌಡ ಸಹ ಒಬ್ಬನಾಗಿದ್ದ.
ವಿಚಾರಣೆಯ ವೇಳೆಯಲ್ಲಿ 5 ಜನರು ಸಹ ಮಾಧುರಾಜನ ಮೇಲೆ ಅನುಮಾನ ಹುಟ್ಟಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅದರಂತೆ ಆತನ ತಂದೆಯ ಹೇಳಿಕೆಯು ಅದೆ ರೀತಿ ಇದ್ದೂ ಇತ್ತ ಅರಣ್ಯ ಸಚಿವರು ಸ್ಥಳದಿಂದ ಹೊರ ಬೀಳುತ್ತಿದ್ದಂತೆ ಕೊಪ್ಪ ಗ್ರಾಮದಲ್ಲಿ ತನ್ನದೆ ಮನೆಯಲ್ಲಿ ಅಡಗಿ ಕೂತಿದ್ದ ಹುಲಿಗಳ ಹಂತಕ ಮಾಧುರಾಜನನ್ನು ಪೊಲೀಸರ ಸಹಾಯದಿಂದ ಅರಣ್ಯ ಇಲಾಖೆಯವರು ರಾತ್ರಿ 8ರ ಸಮಯದಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಒಟ್ಟಿನಲ್ಲಿ ಹುಲಿಗಳ ಹಂತಕರು ಲಾಕ್ ಆಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.