ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಭೂಗತ (ಯುಜಿ) ಕೇಬಲ್ ಕಾಮಗಾರಿ ನೈಜ ಸಮಯದ ಮಾಹಿತಿಗಾಗಿ ‘ಜಿಐಎಸ್ ಮ್ಯಾಪಿಂಗ್’ ಮೊಬೈಲ್ ಅಪ್ಲಿಕೇಶ್ ಅಭಿವೃದ್ಧಿ ಪಡಿಸಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ಬಿಡುಗಡೆಗೊಳಿಸಿದ್ದಾರೆ.
ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್) ಜತೆಗೆ ಸಂಯೋಜಿಸಲಾದ ಮ್ಯಾಪಿಂಗ್ ಅಪ್ಲಿಕೇಷನ್ ರಾಜ್ಯಾದ್ಯಂತ ನಡೆಯುವ ಭೂಗತ ಕೇಬಲ್ ಕಾಮಗಾರಿಗಳ ನೈಜ ಸಮಯದ ಮಾಹಿತಿ ಒದಗಿಸಲಿದೆ. ಸಾರ್ವಜನಿಕರು ಈ ಅಪ್ಲಿಕೇಷನ್ ನಲ್ಲಿ ಲಭ್ಯವಾಗುವ ಮಾಹಿತಿ ಆಧರಿಸಿ ತಮ್ಮ ದೈನಂದಿನ ಮತ್ತು ದೀರ್ಘಕಾಲದ ಚಟುವಟಿಕೆಗಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳಬಹುದು.
ಕಾಮಗಾರಿಗಳ ಕುರಿತು ಅಪ್ಲೀಕೇಷನ್ ಪೂರ್ವಭಾವಿ ಮಾಹಿತಿ ಒದಗಿಸುವುದರಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳು ಕಡಿಮೆಯಾಗಲಿದೆ.
ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, “ವಿದ್ಯುತ್ ಪ್ರಸರಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳೊಂದಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಅವಕಾಶ ಮಾಡುವ ದೃಷ್ಟಿಯಿಂದ ಕೆಪಿಟಿಸಿಎಲ್ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಈ ವೇಳೆ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಿದೆ. ಅದರ ಭಾಗವೇ ‘ಜಿಐಎಸ್ ಮ್ಯಾಪಿಂಗ್’ ಮೊಬೈಲ್ ಅಪ್ಲಿಕೇಶ್ ಆಗಿದೆ”, ಎಂದರು.
“ಅತ್ಯಾಧುನಿಕ ಜಿಐಎಸ್ ತಂತ್ರಜ್ಞಾನದೊಂದಿಗೆ ಕೆಪಿಟಿಸಿಎಲ್ ನಿಂದ ಅಭಿವೃದ್ಧಿಪಡಿಸಲಾದ ಈ ಅಪ್ಲೀಕೇಷನ್, ಪಾರದರ್ಶಕತೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಮತ್ತು ತಾಂತ್ರಿಕ ಮುನ್ನಡೆಗೆ ನಿಗಮದ ಬದ್ಧತೆಯನ್ನು ಸಾಬೀತುಪಡಿಸುತ್ತದೆ. ಆಂತರಿಕ ದಕ್ಷತೆ ಸುಧಾರಿಸವುದರ ಜತೆಗೆ ಸಾರ್ವಜನಿಕವಾಗಿಯೂ ಪಾರದರ್ಶಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ತಾಂತ್ರಿಕ ವ್ಯವಸ್ಥೆಯು ಕರ್ನಾಟಕದ ವಿದ್ಯುತ್ ಪ್ರಸರಣ ಜಾಲವನ್ನು ಆಧುನೀಕರಿಸುವ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸೇವೆಯನ್ನು ಸುಧಾರಿಸುವ ಕೆಪಿಟಿಸಿಎಲ್ನ ಕಾರ್ಯತಂತ್ರದ ಭಾಗವಾಗಿದೆ”, ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕೆಪಿಟಿಸಿಎಲ್ ಯೋಜನೆಗಳು ವಿಭಾಗದ ನಿರ್ದೇಶಕರಾದ ಎಸ್.ವಿ.ಮಂಜುನಾಥ್, ಮಾಹಿತಿ ತಂತ್ರಜ್ಞಾನ ವಿಭಾಗದ ಅಧೀಕ್ಷಕ ಇಂಜಿನಿಯರ್ ಅನಿಲ್ ಡಿ’ಸೋಜಾ ಹಾಗೂ ನಿಗಮದ ಅಧಿಕಾರಿಗಳು ಉಪ್ಥಿತರಿದ್ದರು.