ಬೆಂಗಳೂರು,ಮಾ.29- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿ ನಿರ್ವಹಿಸಲ್ಪಡುತ್ತಿದೆ. ಹನಿಟ್ರಾಪ್ ಪ್ರಕರಣಕ್ಕೆ ಕಾನೂನು ಸುವ್ಯವಸ್ಥೆ ಸಂಬಂಧವಿಲ್ಲ ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಉಪಹಾರ ಕೂಟ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಣ್ಣ ದೂರು ನೀಡಿದ್ದಾರೆ. ಅದರ ತನಿಖೆಯಾಗುತ್ತಿದೆ. ಈ ಹಂತದಲ್ಲಿ ಯಾವುದೇ ವಿಚಾರ ಚರ್ಚಿಸುವುದಿಲ್ಲ ಎಂದರು.
ಮುಖ್ಯಮಂತ್ರಿ ಆಪ್ತರಿಗೆ ರಕ್ಷಣೆ ಇಲ್ಲ, ಸಚಿವರ ಪುತ್ರನಿಗೆ ಪ್ರಾಣ ಬೆದರಿಕೆ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಮಹದೇವಪ್ಪ, ಹನಿಟ್ರ್ಯಾಪ್ ಪ್ರಕರಣಕ್ಕೂ ಕಾನೂನು ಸುವ್ಯವಸ್ಥೆಗೂ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದರು.
ಸಚಿವ ಸಂಪುಟ ಪುನರ್ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಯಾವುದೇ ವಿಚಾರಗಳಾಗಿದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ನಾವು ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದರು.
ಸತೀಶ್ ಜಾರಕಿಹೊಳಿ ಮತ್ತು ತಾವು 30 ವರ್ಷದ ಸ್ನೇಹಿತರಾಗಿದ್ದು, ಪದೇಪದೇ ಭೇಟಿ ಮಾಡುತ್ತಿರುತ್ತೇವೆ. ಇಂದು ಬೆಳಿಗ್ಗೆ ಸಹಜವಾಗಿಯೇ ಉಪಹಾರಕ್ಕೆ ಆಹ್ವಾನಿಸಿದ್ದಾಗಿ ತಿಳಿಸಿದರು.