Wednesday, July 23, 2025
Homeರಾಜ್ಯಆ.11ರಿಂದ ವಿಧಾನಮಂಡಲ ಅಧಿವೇಶನ : ಕದನದ ಕಣವಾಗಲಿದೆಯೇ ಸದನ..?

ಆ.11ರಿಂದ ವಿಧಾನಮಂಡಲ ಅಧಿವೇಶನ : ಕದನದ ಕಣವಾಗಲಿದೆಯೇ ಸದನ..?

Legislative session from August 11: Will the House become a battlefield..?

ಬೆಂಗಳೂರು,ಜು.23- ಮುಂಬರುವ ಆಗಸ್ಟ್ 11 ರಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳಲು ವಿಪಕ್ಷ ಸಜ್ಜಾಗಿದೆ. ಬಿಜೆಪಿ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳಿವೆ. ಆದರೆ ಅದನ್ನು ಯಾವ ರೀತಿಯಲ್ಲಿ ಪ್ರಯೋಗ ಮಾಡಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಆಗಸ್ಟ್ 11 ರಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ. ಈ ಬಾರಿಯ ಅಧಿವೇಶನದಲ್ಲಿ ಸಾಕಷ್ಟು ವಿವಾದಿತ ಮಸೂದೆಗಳನ್ನು ಜಾರಿಗೆ ತರಲು ಆಡಳಿತ ಪಕ್ಷ ಮುಂದಾಗಿದೆ. ರೋಹಿತ್ ವೆಮುಲಾ, ಸುಳ್ಳು ಸುದ್ದಿ ತಡೆ, ಕೋಮು ಪ್ರಚೋದನಾ ಭಾಷಣಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಮಹತ್ವದ ಮಸೂದೆಗಳನ್ನು ಸರ್ಕಾರ ಜಾರಿಗೊಳಿಸಲಿದೆ. ಹೀಗಾಗಿ ಸದನದಲ್ಲಿ ಚರ್ಚೆ ಬಿಸಿ ಏರುವ ಸಾಧ್ಯತೆ ಇದೆ.

ವಿಪಕ್ಷದ ಬತ್ತಳಿಕೆಯಲ್ಲಿ ಅಸ್ತ್ರಗಳು :
ಗ್ರೇಟರ್ ಬೆಂಗಳೂರು ಕಾಯ್ದೆ
ಗ್ರೇಟರ್ ಬೆಂಗಳೂರು ಕಾಯ್ದೆಗೆ ವಿಧಾಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಈಗಾಗಲೇ ಹೇಳಿದ್ದಾರೆ. ಕಾಯ್ದೆ ಜಾರಿಯಿಂದ ಬೆಂಗಳೂರು ಅಭಿವೃದ್ಧಿ ಸಚಿವರ ಕೈಯಲ್ಲಿ ಕೇಂದ್ರೀಕರಿಸುತ್ತದೆ ಹಾಗೂ ಚುನಾಯಿತ ನಗರ ಪಾಲಿಕೆಗಳಿಗೆ ಇರುವ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂಬುದು ವಾದವಾಗಿದೆ.

ಬಿಬಿಎಂಪಿಯನ್ನು ವಿಭಜಿಸಿದರೆ, ಬೆಂಗಳೂರಿನ ಪೂರ್ವ ಭಾಗದಲ್ಲಿ ಕನ್ನಡಿಗೇತರರ ಪ್ರಭಾವ ಹೆಚ್ಚಾಗಿ, ಕನ್ನಡಿಗೇತರರು ಮೇಯರ್ ಆಗುವ ಸಾಧ್ಯತೆ ಹೆಚ್ಚುತ್ತದೆ ಮತ್ತು ಕನ್ನಡ ಅಸ್ಥಿತೆಗೆ ಧಕ್ಕೆಯಾಗುತ್ತದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರನ್ನು ವಿಭಜಿಸಿದರೆ, ಮಹದೇವಪುರ, ಕೆ.ಆರ್.ಪುರಂ, ಹೆಬ್ಬಾಳದಂತಹ ಐಟಿ-ಬಿಟಿ ಪ್ರದೇಶಗಳು ಹೆಚ್ಚು ಆದಾಯ ಗಳಿಸಿ ಅಭಿವೃದ್ಧಿ ಹೊಂದಬಹುದು. ಆದರೆ ಪಶ್ಚಿಮ ಭಾಗದಂತಹ ಕಡಿಮೆ ಆದಾಯವಿರುವ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಬಹುದು ಎಂಬುದು ಬಿಜೆಪಿ ವಾದವಾಗಿದೆ.

ಅಷ್ಟೇ ಅಲ್ಲದೆ, ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರಲ್ಲೇ ಮುಗಿದಿದ್ದು, ಐದು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿದೆ. ಈ ಕಾಯ್ದೆಯ ಜಾರಿಯು ಚುನಾವಣೆಗಳನ್ನು ಮತ್ತಷ್ಟು ವಿಳಂಬಗೊಳಿಸುವ ಉದ್ದೇಶ ಹೊಂದಿದೆ ಎಂಬುವುದು ಆರೋಪವಾಗಿದೆ. ಈ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದೆ.

ಸ್ಟಾರ್ಟ್ ಮೀಟರ್ ಹಗರಣ:
ಸದನದಲ್ಲಿ ಈ ಬಾರಿ ಸ್ಟಾರ್ಟ್ ಮೀಟರ್ ಹಗರಣ ಸದ್ದು ಮಾಡಲಿದೆ. ಈಗಾಗಲೇ ನ್ಯಾಯಾಲಯದ ಕದವನ್ನು ಬಿಜೆಪಿ ತಟ್ಟಿದೆ. ಡಾ. ಸಿ.ಎನ್.ಅಶ್ವತ್ಥನಾರಾಯಣ ಮತ್ತು ಜೆಡಿ(ಎಸ್) ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ವೆಚ್ಚ ಪ್ರತಿ ಮೀಟರ್‌ಗೆ 900 ರಿಂದ 7,000-8,000 ವರೆಗೆ ಇದೆ. ಆದರೆ, ಕರ್ನಾಟಕದಲ್ಲಿ ಇದೇ ಮೀಟರ್‌ಗಳಿಗೆ ಪ್ರತಿ ಮೀಟರ್‌ಗೆ 8,510 ರಿಂದ 17,000 ವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಅಲ್ಲದೆ, ಸ್ಟಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯು ಕರ್ನಾಟಕ ಪಾರದರ್ಶಕತೆ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬುವುದು ಬಿಜೆಪಿ ಆರೋಪವಾಗಿದೆ. 200 ಕೋಟಿಗಿಂತ ಹೆಚ್ಚು ಮೊತ್ತದ ಟೆಂಡ‌ರ್ಗಳಿಗೆ ಜಾಗತಿಕ ಟೆಂಡ‌ರ್ ಕರೆಯಬೇಕಾಗಿತ್ತು. ಆದರೆ ಇಲ್ಲಿ ಅರ್ಹತೆ ಇಲ್ಲದ ಕಂಪನಿಗಳಿಗೆ 10,000 ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆ ನೀಡಲಾಗಿದೆ ಎಂಬ ಆರೋಪವಿದೆ. ಸದನದಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ.

ಕಾನೂನು ಸುವ್ಯವಸ್ಥೆ:
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ಬಿಜೆಪಿ ವಾದವಾಗಿದೆ. ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಮುಂದಾಗಿದೆ. ರಾಜ್ಯದಲ್ಲಿ ಕೊಲೆ, ದೌರ್ಜನ್ಯ,ಅಮಾನುಷ ಕೃತ್ಯಗಳು ಹೆಚ್ಚಾಗಿವೆ ಮತ್ತು ಸಮಾಜದಲ್ಲಿ ಕಾನೂನಿನ ಭಯ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂಬುವುದು ಬಿಜೆಪಿ ವಾದವಾಗಿದೆ.

ದಕ್ಷಿಣ ಕನ್ನಡದಂತಹ ಕರಾವಳಿ ಪ್ರದೇಶಗಳಲ್ಲಿನ ಕೋಮು ಸಂಘರ್ಷ ಪ್ರಕರಣಗಳು ಹೆಚ್ಚಾಗಿವೆ. ಆಶ್ರಫ್, ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರೆಹ್ವಾನ್ ಹತ್ಯೆಯಾಗಿದೆ. ಅಲ್ಲದೆ, ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.

ಗ್ಯಾರಂಟಿ ಯೋಜನೆಗಳು :
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾಗುವಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸದನದಲ್ಲಿ ಬಿಜೆಪಿ ಪ್ರಸ್ತಾಪ ಮಾಡಲಿದೆ. ಗೃಹಲಕ್ಷ್ಮೀ ಯೋಜನೆಗಳು ಸೂಕ್ತ ಸಮಯಕ್ಕೆ ಫಲಾನುಭವಿಗಳ ಕೈಸೇರುತ್ತಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಸದನದಲ್ಲಿ ಇದನ್ನೇ ಪ್ರಸ್ತಾಪ ಮಾಡಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಲಿದೆ. ಅಲ್ಲದೆ, ಅಭಿವೃದ್ಧಿ ಯೋಜನೆಗಳಲ್ಲಿ ಆಗುತ್ತಿರುವ ಹಿನ್ನಡೆ, ಶಾಸಕರಿಗೆ ಅನುದಾನ ಸಿಗದೆ ಇರುವುದು ಮುಂತಾದ ವಿಚಾರಗಳನ್ನು ಪ್ರಸ್ತಾಪ ಮಾಡಲಿದೆ. ಜೊತೆಗೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯ ವಿರುದ್ಧ ಮಾಡಿರುವ ಆರೋಪಗಳು ಬಿಜೆಪಿ ಬತ್ತಳಿಕೆಯ ಅಸ್ತ್ರಗಳಾಗಿವೆ.

RELATED ARTICLES

Latest News