ಬೆಂಗಳೂರು, ಮೇ 31- ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯದ ಹಲವೆಡೆ ಮಿಂಚಿನ ದಾಳಿ ನಡೆಸಿದ್ದಾರೆ. 7 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳು, ವಾಣಿಜ್ಯ ಕೇಂದ್ರಗಳು ಹಾಗೂ ಅವರ ವ್ಯಾಪಾರಿತಾಣಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಕಲಬುರಗಿ, ಧಾರವಾಡ, ಬಾಗಲಕೋಟೆ, ಗದಗ, ಹುನಗುಂದ, ಹಾವೇರಿ, ಬಳ್ಳಾರಿ, ಉಡುಪಿ, ದಾವಣಗೆರೆ ಸೇರಿದಂತೆ ರಾಜ್ಯದ 35ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಗದಗದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರ ಮನೆ, ಕಚೇರಿ ಸೇರಿದಂತೆ ಆರು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಅವರ ಅಳಿಯ ಹಾಗೂ ಅವರ ಭಾವನ ಮನೆ ಮೇಲೂ ಕೂಡ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಳಗಾವಿ
ದೇವರಾಜ್ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗಪ್ಪ ಬಾನಸಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬನಸಿ ಅವರ ರಾಯಬಾಗ ತಾಲೂಕಿನ ಸ್ವಗ್ರಾಮ ಬೆಕ್ಕೇರಿಯ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ.
ನಗರದ ವಿದ್ಯಾನಗರದಲ್ಲಿರುವ ಸಿದ್ದಲಿಂಗಪ್ಪ ಜಾನಸಿ ಮನೆ ಮೇಲೆ ಬೆಳಗಾವಿ ವಿಭಾಗದ ಲೋಕಾಯುಕ್ತ ವ್ಯಾಪ್ತಿಯ ಮೂರು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಇಹನುಮಂತರಾಯಪ್ಪ ನೇತೃತ್ವದಲ್ಲಿ ತಪಾಸಣೆ ಮುಂದುವರೆದಿದೆ.
ಕಲಬುರಗಿ
ಬಳ್ಳಾರಿಯ ಪಿಡಬ್ಲ್ಯೂಡಿ ಸೂಪರಿಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ಅವರ ಮನೆ ಮೇಲೆ ದಾಳಿ ನಡೆದಿದ್ದು, ಕೋಟಿ ರೂ. ಮೌಲ್ಯದ ಆಸ್ತಿಪತ್ರಗಳು ಪತ್ತೆಯಾಗಿವೆ. ಜೊತೆಗೆ ಕಲಬುರಗಿ ಹೊರವಲಯದಲ್ಲಿ ಜಮೀನು ಕಲಬುರಗಿ ವಿಮಾನನಿಲ್ದಾಣ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಸೇರಿದಂತೆ ಇತರೆ ಆಸ್ತಿಪತ್ರಗಳು ಪತ್ತೆಯಾಗಿವೆ.
ಧಾರವಾಡ
ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಎಚ್.ಸುರೇಶ್ ಅವರ ನಿವಾಸ ಹಾಗೂ ಸರ್ಕಾರಿ ಕ್ವಾರ್ಟಸ್ ಮೇಲೆ ದಾಳಿ ಮಾಡಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮಪಂಚಾಯಿತಿಯ ಪಿಡಿಒ ಕಚೇರಿ ಮತ್ತು ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ದಾವಣಗೆರೆ ಮತ್ತು ಹಾವೇರಿ ಲೋಕಾಯುಕ್ತ ಸಿಬ್ಬಂದಿಗಳಿಂದ ಜಂಟಿ ಕಾರ್ಯಾಚರಣೆ ಮಾಡಲಾಗಿದ್ದು, ರಾಮಕೃಷ್ಣಪ್ಪ ಗುಡಗೇರಿ ಗ್ರಾ.ಪಂ. ಅಧಿಕಾರಿ ಕಚೇರಿ ಮತ್ತು ಧಾರವಾಡದ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಉಡುಪಿಯ ಕಾರ್ಕಳ ಮೆಸ್ಕಾಂ ವಿಭಾಗದ ಅಕೌಂಟೆಂಟ್ ಅಧಿಕಾರಿ ಗಿರೀಶ್ ರಾವ್ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಟಿ.ಮಂಜುನಾಥ್ ನೇತೃತ್ವದಲ್ಲಿ ಕಚೇರಿ ನಿವಾಸ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಐದು ಕಡೆ ತಪಾಸಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ಕೈಗೊಂಡು ನಂತರ ಇಂದು 7 ಸರ್ಕಾರಿ ಅಧಿಕಾರಿಗಳ ಅಕ್ರಮ ಬಯಲಿಗೆಳೆದಿದ್ದಾರೆ.
ತಪಾಸಣೆ ಸಂದರ್ಭದಲ್ಲಿ ಕೋಟ್ಯಂತರ ನಗದು, ಚಿನ್ನಾಭರಣಗಳು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹೂಡಿರುವ ಹಣ, ನಿವೇಶನಗಳು, ಫ್ಲ್ಯಾಟ್ಗಳು, ಕೃಷಿ-ಜಮೀನು ಸೇರಿದಂತೆ ಹಲವಾರು ಚರಚಿರಾಸ್ತಿಗಳನ್ನು ಅಕ್ರಮವಾಗಿ ಸಂಪಾದನೆ ಮಾಡಿರುವುದು ಪತ್ತೆಯಾಗಿದೆ.