ಬೆಂಗಳೂರು,ಮೇ 20- ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರಾವಧಿ ನಾಳೆಗೆ ಮುಗಿಯುವ ಬೆನ್ನಲ್ಲೇ ನೂತನ ಡಿಜಿಪಿಯ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಶಾಂತ್ಕುಮಾರ್ ಠಾಕೂರ್ ಮತ್ತು ಎಂ.ಎ.ಸಲೀಂ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಗಳಿವೆ.
ಏಪ್ರಿಲ್ ತಿಂಗಳ ಅಂತ್ಯಕ್ಕೆ ಡಿಜಿಪಿ ಅಲೋಕ್ಮೋಹನ್ರ ಅಧಿಕಾರಾವಧಿ ಮುಗಿದಿತ್ತು. ರಾಜ್ಯ ಸರ್ಕಾರ ಮೇ 21 ರವರೆಗೆ ಅವರ ಅಧಿಕಾರವಧಿಯನ್ನು ವಿಸ್ತರಿಸಿದೆ. ನಾಳೆಗೆ ವಿಸ್ತರಿಸಿದ ಗಡುವು ಕೂಡ ಮುಕ್ತಾಯಗೊಳ್ಳುತ್ತಿದ್ದು, ಹೊಸ ಡಿಜಿಪಿಯನ್ನು ನೇಮಕಾತಿ ಮಾಡುವ ಅನಿವಾರ್ಯತೆ ಎದುರಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಡಾ.ಎಂ.ಎ.ಸಲೀಂ ಅವರು ಸೇವಾ ಹಿರಿತನದ ಆಧಾರದ ಮೇಲೆ ಡಿಜಿಪಿ ಹುದ್ದೆಯ ರೇಸ್ನಲ್ಲಿದ್ದಾರೆ.ಮತ್ತೊಬ್ಬ ಅಧಿಕಾರಿ ಡಾ.ಕೆ.ರಾಮಚಂದ್ರರಾವ್ ಅವರು ಬಲವಂತದ ರಜೆ ಮೇಲೆ ತೆರಳಿರುವುದರಿಂದ ರೇಸ್ನಿಂದ ಹಿಂದೆ ಸರಿಯುವಂತಾಗಿದೆ.
ಹಿರಿತನದ ಆಧಾರದ ಮೇಲೆ ಪ್ರಶಾಂತ್ ಕುಮಾರ್ ಠಾಕೂರ್ ಜ್ಯೇಷ್ಠತೆ ಹೊಂದಿದ್ದಾರೆ. ಬಿಹಾರ ರಾಜ್ಯ ಬೇಗುಸರಾಯ್ ಮೂಲದವರಾದ ಅವರು 1992ರ ಅಕ್ಟೋಬರ್ 11ರಂದು ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾಗಿದ್ದಾರೆ. ಸಲೀಂ ಹಾಗೂ ಮಾಲಿನಿ ಕೃಷ್ಣಮೂರ್ತಿ ಅವರಿಬ್ಬರಿಗಿಂತಲೂ 11 ತಿಂಗಳು ಹೆಚ್ಚು ಹಿರಿತನ ಹೊಂದಿದ್ದಾರೆ. ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ರಾಮೇಶ್ವರ್ ಠಾಕೂರ್ ಅವರ ಹತ್ತಿರದ ಸಂಬಂಧಿಯೂ ಹೌದು.
ಉಳಿದಂತೆ ಕನ್ನಡಿಗರೇ ಆದ ಡಾ.ಎಂ.ಎ.ಸಲೀಂ 1993ರ ಸೆಪ್ಟೆಂಬರ್ 5 ರಂದು ಐಪಿಎಸ್ ಸೇವೆಗೆ ಸೇರ್ಪಡೆಯಾಗಿದ್ದಾರೆ. ರಾಜ್ಯ ಸರ್ಕಾರ ಬಹುತೇಕ ಸಲೀಂರನ್ನೇ ಮುಂದಿನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲು ಆಸಕ್ತಿ ಹೊಂದಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಇದು ಸಾಕಾರಗೊಂಡಿದ್ದೇ ಆದರೆ ಶಂಕರ ಬಿದರಿ ಅವರ ಬಳಿಕ ಕನ್ನಡಿಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಮಹಾನಿರ್ದೇಶಕರಾಗಿ ನಿಯುಕ್ತಿಗೊಂಡಂತಾಗುತ್ತದೆ.
ಆಂಧ್ರ ಪ್ರದೇಶದ ಆದೋನಿಯವರಾದ ಮಾಲಿನಿ ಕೃಷ್ಣಮೂರ್ತಿ 1993ರ ಸೆಪ್ಟೆಂಬರ್ 10ರಂದು ಐಪಿಎಸ್ ಸೇವೆ ಆರಂಭಿಸಿದ್ದು, ಸಲೀಂ ಅವರಿಗಿಂತ ಐದು ದಿನ ಕಿರಿಯರಿದ್ದಾರೆ. ಈ ಮೂವರನ್ನು ಹೊರತು ಪಡಿಸಿದರೆ ಡಾ.ಕೆ.ರಾಮಚಂದ್ರರಾವ್ 1994ರ ಸೆಪ್ಟೆಂಬರ್ 4ರಂದು ಐಪಿಎಸ್ ಪಡೆದಿದ್ದಾರೆ.
ರಾಮಚಂದ್ರರಾವ್ ಮಲಮಗಳು ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಲುಕಿಬಿದ್ದಿದ್ದು, ಈ ಪ್ರಕರಣದಲ್ಲಿ ಶಿಷ್ಟ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ರಾಮಚಂದ್ರರಾವ್ ಅವರನ್ನು ಬಲವಂತದ ರಜೆಯ ಮೇಲೆ ಕಳುಹಿಸಲಾಗಿದೆ. ಪ್ರಣವ್ ಮೊಹಾಂತಿ, ಅಲೋಕ್ ಕುಮಾರ್ ಅವರು 1994ರ ಸೆಪ್ಟೆಂಬರ್ 4ರಂದು ಐಪಿಎಸ್ ಸೇವೆಗೆ ಸೇರಿದವರಾಗಿದ್ದಾರೆ. ಸದ್ಯಕ್ಕೆ ಅವರ ಹೆಸರುಗಳು ಪೊಲೀಸ್ ಮಹಾನಿರ್ದೇಶಕರ ರೇಸ್ನಲ್ಲಿ ಕೇಳಿ ಬಂದಿಲ್ಲ.
ಒಂದು ವೇಳೆ ರಾಜ್ಯ ಸರ್ಕಾರ ಹಿರಿತನವನ್ನು ಬದಿಗಿರಿಸಿ ಕನ್ನಡಿಗರನ್ನು ಪ್ರಮುಖ ಹ್ದುೆಯಲ್ಲಿ ಕೂರಿಸಲು ಬಯಸಿದರೆ ಭಿನ್ನ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಸದ್ಯಕ್ಕಂತೂ ಸಲೀಂ ಅವರು ಮುಂದಿನ ಪೊಲೀಸ್ ಮಹಾನಿರ್ದೇಶಕರಾಗುವ ಸಾಧ್ಯತೆಗಳು ದಟ್ಟವಾಗಿವೆ.