Friday, May 30, 2025
Homeರಾಜ್ಯಮದ್ದೂರಿನ ಘಟನೆಯಿಂದ ಪೊಲೀಸ್‌‍ ಇಲಾಖೆ ತಲೆ ತಗ್ಗಿಸುವಂತಾಗಿದೆ : ಪರಮೇಶ್ವರ್‌

ಮದ್ದೂರಿನ ಘಟನೆಯಿಂದ ಪೊಲೀಸ್‌‍ ಇಲಾಖೆ ತಲೆ ತಗ್ಗಿಸುವಂತಾಗಿದೆ : ಪರಮೇಶ್ವರ್‌

Parameshwar On Maddur incident

ಬೆಂಗಳೂರು, ಮೇ 27- ಮಂಡ್ಯದಲ್ಲಿ ನಡೆದಿರುವ ಘಟನೆ ನಿಜಕ್ಕೂ ದುರದೃಷ್ಟಕರ, ಇಲಾಖೆ ತಲೆ ತಗ್ಗಿಸುವಂತಾಗಿದೆ. ಇನ್ನೂ ಮುಂದೆ ಪೊಲೀಸರು ವಾಹನ ತಪಾಸಣೆಯ ವೇಳೆ ಅನುಸರಿಸಬೇಕಾದ ಪ್ರಮಾಣಿಕ ಮಾರ್ಗಸೂಚಿಗಳ ಬಗ್ಗೆ ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಿಯೂ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗುವುದು. ಇಂದು ನಡೆಯುವ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಕಠಿಣ ಸಂದೇಶ ರವಾನಿಸಲಾಗುತ್ತದೆ ಎಂದರು.

ಸ್ಥಳೀಯ ಪೊಲೀಸರು ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ಮದ್ದೂರಿನ ಘಟನೆಯಲ್ಲಿ ಮಗು ಸಾಯುತ್ತಿರಲಿಲ್ಲ. ತಂದೆ ತಾಯಿಗೂ ಪೆಟ್ಟಾಗುತ್ತಿರಲಿಲ್ಲ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವರನ್ನು ಅಮಾನತುಗೊಳಿಸಲಾಗಿದೆ ಎಂದರು.

ಮದ್ದೂರಿನ ಘಟನೆಯಲ್ಲಿ ವೈಯಕ್ತಿಕವಾಗಿ ನನಗೆ ಬೇಸರವಾಗಿದ್ದು, ಮಗುವಿಗೆ ನಾಯಿ ಕಚ್ಚಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ತಂದೆ ತಾಯಿ ಹೇಳಿದ್ದಾರೆ. ಆದರೂ ಪೊಲೀಸರು ಮಾನವೀಯತೆ ತೋರಿಸದೆ ನಿರ್ಧಯಿಯಾಗಿ ವರ್ತಿಸಿರುವುದು ಸರಿಯಲ್ಲ. ಆ ತಂದೆ ತಾಯಿಗಳನ್ನು ಬಿಟ್ಟು ಕಳುಹಿಸಿದ್ದರೆ ದೇಶದ ಕಾನೂನು ಉಲ್ಲಂಘನೆಯಾಗಿ ಬಿಡುತ್ತಿರಲಿಲ್ಲ. ಸೂಕ್ಷ್ಮ ಸಂದರ್ಭದಲ್ಲಿ ನಮ ಪೊಲೀಸರು ಸ್ವಂತ ವಿವೇಚನೆ ಬಳಸಿ ಕೆಲಸ ಮಾಡಬೇಕು ಎಂದು ಅಸಮಧಾನ ವ್ಯಕ್ತ ಪಡಿಸಿದರು.

ಪೊಲೀಸರು ತಪಾಸಣೆ ಮಾಡಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಅದಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೆಲವರು ಮೂಲೆಯಲ್ಲಿ ಅಥವಾ ಮರೆಯಲ್ಲಿ ನಿಂತು ದಿಢೀರ್‌ ಎಂದು ಅಡ್ಡ ಬಂದು ವಾಹನ ಸವಾರರು ವಿಚಲಿತರಾಗುವಂತೆ ಮಾಡುವುದು ಸೂಕ್ತವಲ್ಲ. ವಾಹನ ಸವಾರರಿಗೆ ಮುಂದೆ ಪೊಲೀಸರು ನಿಂತಿದ್ದಾರೆ ಎಂದು ಅರಿವಾಗಬೇಕು. ವಾಹನಗಳನ್ನು ನಿಲ್ಲಿಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕು ಎಂದರು.

ಕುಡಿದು ವಾಹನ ಚಾಲನೆ ಮಾಡುವುದು, ಹೆಲೆಟ್‌ ಹಾಕದಿರುವುದು, ಸಂಚಾರ ನಿಯಮಗಳನ್ನು ಪಾಲನೆ ಮಾಡದಿರುವುದು ಸೇರಿದಂತೆ ಅನೇಕ ವಿಚಾರಗಳಿಗೆ ತಪಾಸಣೆ ನಡೆಸಬೇಕಾಗುತ್ತದೆ. ಆದರೆ ಅನವಶ್ಯಕವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಹೆಲೆಟ್‌ ಇಲ್ಲದೆ ಪ್ರಯಾಣಿಸುವುದು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಇದೆ. ಇಂತಹ ವಿಚಾರಗಳನ್ನು ಪ್ರಚಾರ ಮಾಡಿ, ಜನರಿಗೆ ತಿಳಿ ಹೇಳಬೇಕಿದೆ ಎಂದರು.

ವಾಹನ ಸವಾರರು ವೇಗವಾಗಿ ಬರುತ್ತಿದ್ದಾಗ ಏಕಾಏಕಿ ಅಡ್ಡ ಹೋದರೆ ಬ್ರೇಕ್‌ ಹಾಕಬೇಕಾಗುತ್ತದೆ. ಅದರಿಂದ ದೊಡ್ಡ ಅಪಾಯವಾಗುತ್ತದೆ ಎಂಬುದಕ್ಕೆ ಮದ್ದೂರಿನ ಘಟನೆಯೇ ಉದಾಹರಣೆ ಎಂದರು.

ಬೆಂಗಳೂರು ನಗರಕ್ಕೆ ಸಂಬಂಧ ಪಟ್ಟಂತೆ ಎಸಿಪಿ ಹುದ್ದೆಗೆ ಮೇಲ್ಪಟ್ಟ ಅಧಿಕಾರಿಗಳ ಜೊತೆ ಇಂದು ಸಭೆ ಕರೆಯಲಾಗಿದೆ. ಮಳೆ ಅನಾಹುತಗಳು ಹೆಚ್ಚಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿತ್ತು, ಆ ರೀತಿ ನಿರ್ಲಕ್ಷ್ಯವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಂಚಾರ ನಿರ್ವಹಣೆ ಸೇರಿದಂತೆ ಅನೇಕ ವಿಚಾರಗಳು ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ವಾಹನಗಳ ಟೋಯಿಂಗ್‌ ಪುನರ್‌ ಆರಂಭಿಸುವ ಕುರಿತಂತೆ ಚರ್ಚೆ ನಡೆಸಲಾಗಿದೆ. ಜನರಿಗೆ ತೊಂದರೆಯಾಗದಂತೆ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು. ಪಮುಖ್ಯಮಂತ್ರಿಯವರು ಟೋಯಿಂಗ್‌ ಆರಂಭಿಸುವ ಬಗ್ಗೆ ಹೇಳಿದ್ದಾರೆ. ಆದರೆ ಅದರ ಸಾಧಕ-ಭಾದಕಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೋವಿಡ್‌ ಸೋಂಕಿಗೆ ಸಂಬಂಧ ಪಟ್ಟಂತೆ ಆರೋಗ್ಯ ಸಚಿವರು ಸದ್ಯಕ್ಕೆ ಆತಂಕದ ವಾತಾವರಣ ಇಲ್ಲ. ಎಚ್ಚರಿಕೆ ವಹಿಸಿ ಸಾಕು ಎಂದು ಹೇಳಿದ್ದಾರೆ. ಸರ್ಕಾರ ಯಾವ ಸಲಹೆ ನೀಡುತ್ತದೆಯೋ ಅದನ್ನು ಎಲ್ಲ ಕಡೆ ಪಾಲನೆ ಮಾಡಲಾಗುವುದು ಎಂದರು.ಸಚಿವ ಸಂಪುಟ ವಿಸ್ತರಣೆಯ ಕುರಿತು ಮುಖ್ಯಮಂತ್ರಿಯವರಿಗೆ ವಿವೇಚನಾಧಿಕಾರ ಇದೆ. ಆ ಕುರಿತು ತಮಗೆ ಮಾಹಿತಿ ಇರುವುದಿಲ್ಲ ಎಂದರು.

ರಾಜ್ಯ ಸರ್ಕಾರದ ಎರಡು ವರ್ಷ ಸಾಧನೆಗಳ ಕುರಿತು ಬಿಜೆಪಿ ಸುಳ್ಳು ಮಾಹಿತಿ ನೀಡಿ, ಅಪಪ್ರಚಾರ ನಡೆಸಿರುವ ಕುರಿತು ಮೊಕದ್ದಮೆ ದಾಖಲಿಸುವ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

ಸಂಚಾರಿ ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಿ
ಅಪರಾಧ ಹಾಗೂ ಅಪಘಾತ ಪ್ರಕರಣಗಳನ್ನು ತಡೆಗಟ್ಟಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಬೆಂಗಳೂರು ನಗರ ಪೊಲೀಸ್‌‍ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪೊಲೀಸ್‌‍ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ಅಪರಾಧ ಪ್ರಕರಣಗಳ ಪರಾಮಶೆ ಸಭೆಯಲ್ಲಿ ಅವರು ಮಾತನಾಡುತ್ತಾ ನಿನ್ನೆ ಮಂಡ್ಯದಲ್ಲಿ ನಡೆದ ಘಟನೆಯನ್ನು ವಿವರಿಸಿದರು.
ಸಂಚಾರಿ ವಿಭಾಗದ ಪೊಲೀಸರು ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು,ದಂಡ ಹಾಕುವುದೊಂದೇ ಕೆಲಸವಲ್ಲ,ಸುಗಮ ಸಂಚಾರಕ್ಕೂ ಅನುವು ಮಾಡಿಕೊಡಬೇಕು ಎಂದರು.
ನಗರದಲ್ಲಿ ಸಣ್ಣಪುಟ್ಟ ಘಟನೆಗಳು ದೊಡ್ಡದಾಗುತ್ತದೆ ಅಂತಹ ಘಟನೆಗಳನ್ನು ಆರಂಭದಲ್ಲೇ ಹತ್ತಿಕ್ಕಿ ಘಟನೆಯನ್ನು ತಿಳಿಗೊಳಿಸಿ,ಸಮಾಧಾನ ಪಡಿಸಬೇಕು ಎಂದು ಅವರು ಹೇಳಿದರು.

RELATED ARTICLES

Latest News