Saturday, June 28, 2025
Homeರಾಜ್ಯಕೋಡಿಶ್ರೀಗಳ ಚಿನ್ನಾಭರಣವಿದ್ದ ಬ್ಯಾಗ್‌ಗೆ ಕನ್ನ ಹಾಕಿದ್ದ ಖದೀಮನ ಬಂಧನ

ಕೋಡಿಶ್ರೀಗಳ ಚಿನ್ನಾಭರಣವಿದ್ದ ಬ್ಯಾಗ್‌ಗೆ ಕನ್ನ ಹಾಕಿದ್ದ ಖದೀಮನ ಬಂಧನ

Man Arrested For Stealing Kodi Mutt Swamiji Jewellery bag

ಬೆಂಗಳೂರು,ಜೂ.28- ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಕೋಡಿಮಠದ ಸ್ವಾಮೀಜಿ ಅವರ ಬ್ಯಾಗ್‌ನಿಂದ ಹಣ-ಆಭರಣ ದೋಚಿದ್ದ ಉತ್ತರಖಂಡ್‌ನ ಆರೋಪಿಯೊಬ್ಬನನ್ನು ಅರಸೀಕೆರೆ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಖಂಡ್‌ ರಾಜ್ಯದ ನೈನಿತಾಲ್‌ನ ಜಿತೇಂದ್ರಕುಮಾರ್‌ ಚಾವ್ಲಾ(37) ಬಂಧಿತ ಆರೋಪಿ. ಈತ ವಾಹನಗಳ ಡೀಲರ್‌ ಆಗಿದ್ದು, ಈತನಿಂದ 18.20 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನದಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.

ಹಾರನಹಳ್ಳಿ ಕೋಡಿ ಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು 2018, ಜೂ.11ರಂದು ಸಂಜೆ ಎಕ್‌್ಸಪ್ರೆಸ್‌‍ ರೈಲಿನಲ್ಲಿ ಬಾಗಲಕೋಟೆಯಿಂದ ಅರಸೀಕೆರೆಗೆ ಪ್ರಯಾಣಿಸುತ್ತಿದ್ದರು.

ಪ್ರಯಾಣದ ವೇಳೆ ಚಿನ್ನದ ಆಭರಣಗಳು ಹಾಗೂ ಹಣವಿದ್ದ ಕಪ್ಪು ಬಣ್ಣದ ಲೆದರ್‌ ಬ್ಯಾಗ್‌ನ್ನು ತಲೆಯ ಹತ್ತಿರ ಇಟ್ಟುಕೊಂಡು ನಿದ್ರೆಗೆ ಜಾರಿದ್ದಾರೆ. ಮಧ್ಯರಾತ್ರಿ 2.15ರ ಸಮಯದಲ್ಲಿ ಮೂತ್ರವಿಸರ್ಜನೆಗೆ ಎಚ್ಚರವಾದಾಗ ಲೆದರ್‌ ಬ್ಯಾಗ್‌ ಸ್ಥಾನಪಲ್ಲಟವಾದಂತೆ ಕಂಡುಬಂದಿದೆ. ಅನುಮಾನಗೊಂಡು ಸ್ವಾಮೀಜಿಯವರು ಬ್ಯಾಗ್‌ ತೆಗೆದು ನೋಡಿದಾಗ ಅದರಲ್ಲಿದ್ದ ಹಣ ಹಾಗೂ ಆಭರಣ ಇರಲಿಲ್ಲ.

ಸ್ವಾಮೀಜಿ ಜೊತೆ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕ ಸಹ ಇರಲಿಲ್ಲ. ಬ್ಯಾಗ್‌ನಲ್ಲಿದ್ದ 250 ಗ್ರಾಂ ತೂಕದ ಗೌರಿಶಂಕರ ರುದ್ರಾಕ್ಷಿ ಪದಕ ಹೊಂದಿದ ಚಿನ್ನದ ಸರ, ಎರಡು ಚಿನ್ನದ ನಾಗರ ಉಂಗುರಗಳು, 1.62 ಲಕ್ಷ ರೂ.ಗಳು ಇರಲಿಲ್ಲ. ಈ ಬಗ್ಗೆ ಅವರು ಅರಸೀಕೆರೆ ರೈಲ್ವೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಪತ್ತೆಗಾಗಿ ರೈಲ್ವೆ ಪೊಲೀಸ್‌‍ ಅಧೀಕ್ಷಕರಾದ ಡಾ.ಸೌಮ್ಯಲತ ಹಾಗೂ ಪೊಲೀಸ್‌‍ ಉಪಾಧೀಕ್ಷಕರಾದ ಸತೀಶ್‌ಕುಮಾರ್‌ ಅವರ ನೇತೃತ್ವದಲ್ಲಿ ಮೈಸೂರು ರೈಲ್ವೆ ಸಿಪಿಐ ಚೇತನ್‌, ಅರಸೀಕೆರೆ ಪಿಎಸ್‌‍ಐ ಮಹೇಶ್‌, ಎಎಸ್‌‍ಐ ಫಯಾಜ್‌ಖಾನ್‌ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡ ಹಲವು ಮಾಹಿತಿಗಳನ್ನು ಕಲೆ ಹಾಕಿ ಏಳು ವರ್ಷಗಳ ನಂತರ ಆರೋಪಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 200 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News