ಮಂಡ್ಯ,ಜೂನ್.12-ಕೆಆರ್ಎಸ್ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿಗೆ ಆರತಿ ಮಾಡುವ ಸರಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಅಣೆಕಟ್ಟೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಗಳಿಂದ ಅಣೆಕಟ್ಟೆ ಸುತ್ತಮುತ್ತಲಿನ ಪರಿಸರಕ್ಕೆ ಅಪಾಯವಿದ್ದು ಇದನ್ನು ವಿರೋಧಿಸಿ ತಿಂಗಳಿಂದಲೂ ಹಲವು ಹಂತಗಳಲ್ಲಿ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ, ಸರಕಾರ ಕಿವಿಗೊಡದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿಯಿಂದ ರೈತರಿಗಾಗಲೀ ಅಥವಾ ಸಾರ್ವಜನಿಕರಿಗಾಗಲೀ ಏನೂ ಉಪಯೋಗವಿಲ್ಲ. ಸದರಿ ಯೋಜನೆಗಳಿಗೆ ವ್ಯಯಿಸುವ ನೂರಾರು ಕೋಟಿ ರೂ.ಗಳನ್ನು ನಾಲೆಗಳ ದುರಸ್ತಿಗೆ ಬಳಸಿ ರೈತರ ಜಮೀನಿಗೆ ಸಮರ್ಪಕವಾಗಿ ನೀರುಹರಿಸಬೇಕು ಎಂದು ಅವರು ಒತ್ತಾಯಿಸಿದರು. ಶಾಸಕ ರವಿಕುಮಾರ್ ಹೇಳಿಕೆಗೆ ಖಂಡನೆ: ಇದಕ್ಕೂ ಮುನ್ನ ಸಂಘಟನೆಗಳ ಕಾರ್ಯಕರ್ತರು ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಯೋಜನೆಗಳ ವಿರುದ್ದ ಹೋರಾಟ ಕುರಿತಂತೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಹೋರಾಟದ ಬಗ್ಗೆ ವಿವೇಕವಿಲ್ಲದೆ ಹಗುವಾಗಿ ಮಾತನಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಹದ್ದುಮೀತಿ ಮಾತನಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಹರಿಹರಪ್ರಿಯ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಸಂಚಾಲಕಿ ಸುನಂದಾ ಜಯರಾಂ, ಕೆಆರ್ಎಸ್ ಗ್ರಾಪಂ ಅಧ್ಯಕ್ಷೆ ಜಯಂತಿ, ರೈತ, ದಲಿತ, ಮಹಿಳಾ, ಕಾರ್ಮಿಕ, ಕನ್ನಡಪರ ಸಂಘಟನೆಗಳ ಮುಖಂಡರಾದ ಕೆಂಪೂಗೌಡ, ಮಂಜೇಶ್ ಗೌಡ, ಮುದ್ದೇಗೌಡ, ಸೊ.ಸಿ.ಪ್ರಕಾಶ್, ಕೆ.ಬೋರಯ್ಯ, ಕೀಳಘಟ್ಟನಂಜುಂಡಯ್ಯ, ಎಚ್.ಡಿ.ಜಯರಾಂ, ಎಂ.ಬಿ.ನಾಗಣ್ಣಗೌಡ, ಶಿವರಾಮೇಗೌಡ, ಎಂ.ವಿ.ಕೃಷ್ಣ ಎಸ್.ನಾರಾಯಣ್, ಕೆ.ಆರ್.ರವಿಚಂದ್ರ ಮತ್ತಿತರಿದ್ದರು