ಮಂಗಳೂರು,ಜೂ.1- ಸರಣಿ ಹತ್ಯೆಗಳಿಂದ ಕುಖ್ಯಾತಿಗೆ ಒಳಗಾಗಿದ್ದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಮಂಗಳೂರು ನೂತನ ಪೊಲೀಸ್ ಆಯುಕ್ತ ಸುಧೀರ್ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊಲೆ ಹಾಗೂ ಇತರ ಅಪರಾಧದಲ್ಲಿ ತೊಡಗಿಸಿಕೊಳ್ಳುವ ಆರೋಪಿಗಳಿಗೆ ಸಹಾಯ ಮಾಡುವವರನ್ನು ಆರೋಪಿಗಳನ್ನಾಗಿ ಪರಿಗಣಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅಪರಾಧದಲ್ಲಿ ಆರೋಪಿತರಾಗಿ ರುವವರಿಗೆ ಉಳಿದುಕೊಳ್ಳಲು ಮನೆ ನೀಡುವುದು, ಮೊಬೈಲ್ ಒದಗಿಸುವುದು, ಓಡಾಟಕ್ಕೆ ಕಾರು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ.
ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಆರೋಪಿತರಿಗೆ ಸಹಾಯ ಮಾಡುವ ಸಂಬಂಧಿಕರು, ಸ್ನೇಹಿತರನ್ನು ಕೂಡ ಗಮನಿಸಲಾಗುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವವರನ್ನು ಕೊಲೆ ಮಾಡಿ ಬಂದವರ ಬಗ್ಗೆ ಅನುಕಂಪ ತೋರಿಸಿ ಸಹಾಯ ಮಾಡಿದರೂ ಕೂಡ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವನೇ, ಎಂತಹುದೇ ಅಪರಾಧ ಮಾಡಿದರೂ ಆತ ಬಂದು ಮನೆಯಲ್ಲಿದ್ದರೆ ಮನೆಯ ಮಾಲೀಕರು ಅಥವಾ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೊಲೆ ಮಾಡಿದವನನ್ನು ಮನೆಯಲ್ಲಿಟ್ಟುಕೊಳ್ಳುವುದು ಬಿಎನ್ಎಸ್ ಕಾಯ್ದೆಯ ಪ್ರಕಾರ ಅಪರಾಧವಾಗಿರುತ್ತದೆ. ಅಪರಾಧ ಮಾಡುವ ಮೊದಲು ಮಾಹಿತಿ ಇರಲಿಲ್ಲ ಎಂದು ಹೇಳಿ ಜಾರಿಕೊಳ್ಳಬಹುದು. ಆದರೆ ಅಪರಾಧ ಮಾಡಿದ ಮೇಲೆ ಆಶ್ರಯ ನೀಡುವುದು ಅಪರಾಧವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರು, ಏನು ಮಾಡಿದರು ಅಥವಾ ಏನು ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಇನ್ನು ಮುಂದೆ ಆರೋಪಿಗಳಿಗೆ ಹಣ ಸೇರಿದಂತೆ ಯಾವುದೇ ರೀತಿಯ ಸಹಾಯ ಮಾಡುವವರ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.