ತುಮಕೂರು, ಜೂ.9- ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಮೃತಪಟ್ಟ ಜಿಲ್ಲೆಯ ಯಡಿಯೂರು ಹೋಬಳಿಯ ನಾಗಸಂದ್ರ ನಿವಾಸಿ ಮನೋಜ್ ಅವರ ಅಜ್ಜಿ ಮೊಮ್ಮಗನ ಸಾವಿನಿಂದ ನೊಂದು ನಿಧನರಾಗಿದ್ದಾರೆ. ದೇವಿರಮ (70) ಮೃತಪಟ್ಟ ವೃದ್ಧೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ ಮೃತಪಟ್ಟ 11 ಮಂದಿ ಆರ್ಸಿಬಿ ಅಭಿಮಾನಿಗಳ ಪೈಕಿ ನಾಗಸಂದ್ರದ ಮನೋಜ್ ಕೂಡ ಒಬ್ಬರು. ಬೆಂಗಳೂರಿನ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ಮನೋಜ್, ಸ್ನೇಹಿತರೊಂದಿಗೆ ಆರ್ಸಿಬಿ ವಿಜಯೋತ್ಸವಕ್ಕಾಗಿ ಸ್ಟೇಡಿಯಂಗೆ ತೆರಳಿ ಕಾಲ್ತುಳಿತದಿಂದ ಮೃತಪಟ್ಟಿದ್ದು, ಇದೀಗ ಮೊಮಗನ ನೆನಪಿನಲ್ಲೇ ಅಜ್ಜಿಯೂ ಕೂಡ ನಿಧನರಾಗಿದ್ದಾರೆ.
ನಿನ್ನೆಯಷ್ಟೇ ಮೃತ ಮನೋಜ್ ಕುಟುಂಬಕ್ಕೆ ಜಿಲ್ಲಾಧಿಕಾರಿ ಸರ್ಕಾರದ ವತಿಯಿಂಧ 25 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ. ಈ ವೇಳೆ ಮನೋಜ್ ತಂದೆ ದೇವರಾಜ್ ಮಾತನಾಡಿ, ಹಣ ಕೊಟ್ಟರೆ ಮತ್ತೆ ಮಗ ಬರುತ್ತಾನಾ? ನಮಗೆ ಇದ್ದೋನು ಒಬ್ಬನೇ ಮಗ. ಈ ಹಣವನ್ನು ನಾನು ಬಳಸಿಕೊಳ್ಳುವುದಿಲ್ಲ. ಅವರ ತಾಯಿಯ ಖಾತೆಗೆ ಹಾಕುತ್ತೇನೆ ಎಂದು ತಿಳಿಸಿದ್ದಾರೆ.
ಕೆಲವೇ ದಿನಗಳಲ್ಲಿ ಓದು ಮುಗಿಸಿ ಕೆಲಸಕ್ಕೆ ಸೇರಿ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ. ಆದರೆ, ವಿಧಿಯಾಟ ಬೇರೆಯಾಗಿತ್ತು ಎಂದು ಮನೋಜ್ ತಂದೆ ಕಂಬನಿ ಮಿಡಿದಿದ್ದಾರೆ.