ರಾಂಚಿ,ಮೇ 24- ಮಾವೋವಾದಿ ನಕ್ಸಲೀಯರ ವಿರುದ್ಧ ಮತ್ತಷ್ಟು ಕಾರ್ಯಾಚರಣೆಯನ್ನು ಮುಂದುವರೆಸಿರುವ ಭದ್ರತಾ ಪಡೆಗಳು ಜಾರ್ಖಂಡ್ನಲ್ಲಿ ಪ್ರಮುಖ ನಾಯಕನ ಎನ್ಕೌಂಟರ್ ನಡೆಸಿದ ನಂತರ ಮತ್ತೊಬ್ಬ ಪ್ರಮುಖ ನಕ್ಸಲೀಯ ನಾಯಕನನ್ನು ಎನ್ ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ.
ದಂಗೆಕೋರ ಮಾವೋವಾದಿ ಸಂಘಟನೆಯ ಜಾರ್ಖಂಡ್ ಜನ ಮುಕ್ತಿ ಪರಿಷತ್ತಿನ ನಾಯಕನಾಗಿದ್ದ ಪಪ್ಪು ಲೋಹರಾನನ್ನು ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿವೆ. ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಜೊತೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದ ಅವನ ಸಹಾಯಕ ಪ್ರಭಾತ್ ಗಂಜು ಸಹಾ ಹತನಾಗಿದ್ದಾನೆ.
ಗಾಯಗೊಂಡಿದ್ದ ಗುಂಪಿನ ಮತ್ತೊಬ್ಬ ಸದಸ್ಯನನ್ನು ಬಂಧಿಸಲಾಗಿದ್ದು, ಆತನಿಂದ ಕೆಲವು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಬಸವರಾಜು ಹತ್ಯೆಯಾದ ಮೂರು ದಿನಗಳ ನಂತರ ಈ ಎನ್ಕೌಂಟರ್ ನಡೆದಿದೆ. ನಾರಾಯಣಪುರ-ಬಿಜಾಪುರ ಗಡಿಯಲ್ಲಿ 50 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ 27 ಮಾವೋವಾದಿಗಳಲ್ಲಿ ಬಸವರಾಜು ಕೂಡ ಒಬ್ಬರು.
ಬಸವರಾಜು ಅವರು ಹಿಂದೆ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿದ್ದರು ಮತ್ತು ನಂತರ ಮಾವೋವಾದಿ ಶ್ರೇಣಿಯಲ್ಲಿ ಅತ್ಯುನ್ನತ ಹುದ್ದೆಯಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಬಸವರಾಜು ಸುಳಿವು ಕೊಟ್ಟವರಿಗೆ 1.5 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದ ಪೊಲೀಸ್ ಪಡೆಗಳಿಗೆ ಬೇಕಾಗಿದ್ದ.
ಮಾರ್ಚ್ 2026 ರೊಳಗೆ ಮಾವೋವಾದಿಗಳನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಜ್ಞೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಎನ್ಕೌಂಟರ್, ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ಒಂದು ಮಹತ್ವದ ಸಾಧನೆ ಎಂದು ಬಣ್ಣಿಸಿದ್ದಾರೆ. ನಕ್ಸಲಿಸಂ ವಿರುದ್ಧ ಭಾರತ ನಡೆಸುತ್ತಿರುವ ಮೂರು ದಶಕಗಳ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವ ನಾಯಕನನ್ನು ನಮ್ಮ ಪಡೆಗಳು ತಟಸ್ಥಗೊಳಿಸಿವೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರು ಭದ್ರತಾ ಪಡೆಗಳ ಶೌರ್ಯವನ್ನು ಶ್ಲಾಘಿಸಿದರು ಮತ್ತು ಆಪರೇಷನ್ ಬ್ಲಾಕ್ ಫಾರೆಸ್ಟ್ ಪೂರ್ಣಗೊಂಡಾಗಿನಿಂದ, ಛತ್ತೀಸ್ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಾದ್ಯಂತ 54 ಮಾವೋವಾದಿಗಳನ್ನು ಬಂಧಿಸಲಾಗಿದೆ ಮತ್ತು 84 ಇತರ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಹೇಳಿದರು.