Saturday, June 7, 2025
Homeರಾಜ್ಯಕಾಲ್ತುಳಿತ ದುರಂತವನ್ನು ಪೊಲೀಸರ ತಲೆಗೆ ಕಟ್ಟಿದ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ

ಕಾಲ್ತುಳಿತ ದುರಂತವನ್ನು ಪೊಲೀಸರ ತಲೆಗೆ ಕಟ್ಟಿದ ಸರ್ಕಾರದ ವಿರುದ್ಧ ಭಾರೀ ಜನಾಕ್ರೋಶ

Massive public outrage against the government for blaming the stampede tragedy on the police

ಬೆಂಗಳೂರು, ಜೂ.6 – ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಗೊಂದಲದಲ್ಲಿಟ್ಟು ಮನಸೋ ಇಚ್ಛೆ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರ, ಕೊನೆಗೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಹಿರಿಯ ಅಧಿಕಾರಿಗಳನ್ನು ತಲೆದಂಡ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಐ ಸ್ಟ್ಯಾಂಡ್ ವಿತ್ ದಯಾನಂದ ಎಂಬ ಹ್ಯಾಸ್ ಟ್ಯಾಗ್ ಅಭಿಯಾನ ತೀವ್ರಗೊಳ್ಳುತ್ತಿದೆ. ಅಮಾನತು ಆದೇಶದ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಉಲ್ಲೇಖಿಸಿರುವಂತೆ, ಆರ್‌ಸಿಬಿ ತಂಡದ ಸಿಇಒ ಅವರು ಜೂನ್ 3 ರಂದು ಐಪಿಎಲ್ ಸರಣಿಯನ್ನು ಗೆದ್ದ ಕಾರಣಕ್ಕಾಗಿ ಜೂನ್ 4 ರಂದು ವಿಜಯಯಾತ್ರೆ ಮತ್ತು ಸಂಭ್ರಮ ಉತ್ಸವವನ್ನು ಆಚರಿಸುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ತಿಳಿಸಿದರು.

ಕಡಿಮೆ ಸಮಯದಲ್ಲಿ ಕಾರ್ಯಕ್ರಮ ಆಯೋಜನೆ ಹಾಗೂ ಅದಕ್ಕೆ ಸಂಬಂಧಿಸಿದ ಭದ್ರತಾ ವ್ಯವಸ್ಥೆಗಳು ಸಾಧ್ಯವಿಲ್ಲ ಎಂದು ಅನುಮತಿ ನಿರಾಕರಿಸುವ ಅಭಿಪ್ರಾಯವನ್ನು ಪೊಲೀಸ್ ಆಯುಕ್ತ ದಯಾನಂದ ಅವರು ಆರ್ ಸಿ ಬಿ ಪ್ರಾಂಚೈಸಿ ಆಡಳಿತ ಮಂಡಳಿಗೆ ಲಿಖಿತವಾಗಿ ನೀಡಲು ವಿಫಲವಾಗಿದ್ದಾರೆ ಹಾಗೂ ಅನಂತರದ ಕಾರ್ಯಕ್ರಮ ಆಯೋಜನೆಯಲ್ಲಿ ಲೋಪಗಳಾಗಿದೆ ಎಂದು ತಿಳಿಸಲಾಗಿದೆ.

ಒಂದು ವೇಳೆ ಸರ್ಕಾರ ಹೇಳಿದಂತೆ ಪೊಲೀಸ್ ಆಯುಕ್ತರು ಆರ್‌ಸಿಬಿ ಪ್ರಾಂಚಸಿಯ ಆಡಳಿತ ವರ್ಗಕ್ಕೆ ಸಂಭ್ರಮಾಚರಣೆಗೆ ಅನುಮತಿ ನಿರಾಕರಿಸುವ ಲಿಖಿತ ಮಾಹಿತಿ ನೀಡಿದ್ದೇ ಆಗಿದ್ದರೆ ಅದು ಮತ್ತಷ್ಟು ಜನಾಕ್ರೋಶಕ್ಕೆ ಕಾರಣವಾಗುತ್ತಿತ್ತು ಎಂಬುದಂತೂ ನಿಜ. ಆರ್‌ಸಿಬಿಯವರು ಪೊಲೀಸರ ಪತ್ರವನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಕೋಟ್ಯಂತರ ಅಭಿಮಾನಿಗಳನ್ನು ಕೆರಳಿಸುವ ಅಂದಾಜುಗಳಿದ್ದವು. ಅದು ಬೇರೆ ರೀತಿಯ ವಿವಾದಕ್ಕೆ ಕಾರಣವಾಗುತ್ತಿತ್ತು.

ಸರ್ಕಾರದ ವಿರುದ್ಧ ಆರ್‌ಸಿಬಿ ತಂಡದ ಅಭಿಮಾನಿಗಳ ತಿರುಗಿ ಬೀಳುತ್ತಿದ್ದರೂ, ಈ ವಾಸ್ತವ ಸರ್ಕಾರಕ್ಕೂ ಗೊತ್ತಿತ್ತು. ಹಾಗಾಗಿಯೇ ಆರ್‌ಬಿಸಿ ಹಾಕಿದ ತಾಳಕ್ಕೆಲ್ಲಾ ಸರ್ಕಾರ ಕುಣಿಯಲಾರಂಭಿಸಿತ್ತು. ವಿಜಯೋತ್ಸವ ನಡೆಸಲೇಬೇಕು ಎಂದು ಸರ್ಕಾರದ ಮೇಲೆ ಆರ್‌ಸಿಬಿ ತೀವ್ರ ಒತ್ತಡ ಏರಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ನಿನ್ನೆ ಸ್ಪಷ್ಟಪಡಿಸಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಅತ್ಯಂತ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸುವ ಪ್ರಯತ್ನ ಮಾಡಿದ್ದರು. ಆದರೆ ಆಡಳಿತ ನಡೆಸುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು ತಮ್ಮಲ್ಲೇ ಸ್ಪಷ್ಟತೆ ಇಲ್ಲದೆ ಪದೇಪದೇ ಗೊಂದಲದ ಹೇಳಿಕೆಗಳನ್ನು ನೀಡಿ ಎಲ್ಲವೂ ಬುಡಮೇಲಾಗುವಂತೆ ಮಾಡಿದರು.

ಗೃಹಸಚಿವರು ಮತ್ತು ಉಪಮುಖ್ಯಮಂತ್ರಿಗಳು ಕಾರ್ಯಕ್ರಮದ ರೂಪುರೇಷೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳುತ್ತಿದ್ದರೆ, ಮುಖ್ಯಮಂತ್ರಿಯವರು ಸಂಜೆ 4 ಗಂಟೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮ ಇದೆ ಎಂದು ಬೆಳಗ್ಗೆಯೇ ಪ್ರಕಟಣೆ ನೀಡಿದ್ದರು. ಹಿಂದಿನ ದಿನ ನಿಗದಿಯಾಗಿದ್ದ ಮುಖ್ಯಮಂತ್ರಿಯವರ ಕಾರ್ಯಕ್ರಮ ವೇಳಾ ಪಟ್ಟಿಯಲ್ಲೂ ವಿಧಾನಸೌಧದ ಮೆಟ್ಟಿಲುಗಳ ಮೇಲಿನ ಕಾರ್ಯಕ್ರಮ ಸ್ಪಷ್ಟವಾಗಿತ್ತು. ವಿಜಯೋತ್ಸವಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ ಆರಂಭದಿಂದಲೂ ಹೇಳುತ್ತಲೇ ಬರುತ್ತಿತ್ತು. ಮೂಲಗಳ ಪ್ರಕಾರ, ಉನ್ನತ ಸ್ಥಾನದಲ್ಲಿರುವವರು ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿ ವಿಜಯೋತ್ಸವಕ್ಕೆ ಅವಕಾಶ
ನೀಡುವಂತೆ ಕಟ್ಟಪ್ಪಣೆ ಮಾಡಿದ್ದರು ಎನ್ನಲಾಗಿದೆ.

ಇದು ಕೋಟ್ಯಂತರ ಅಭಿಮಾನಿಗಳ ಭಾವನೆಗೆ ಸಂಬಂಧಪಟ್ಟ ವಿಚಾರ. ಕಾರ್ಯಕ್ರಮ ಅಥವಾ ವಿಜಯೋತ್ಸವ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಅದಕ್ಕೆ ತಕ್ಕ ಹಾಗೇ ವಿರೋಧ ಪಕ್ಷಗಳು ವಿಜಯ ಯಾತ್ರೆಗೆ ಅವಕಾಶ ನೀಡದೆ ಸರ್ಕಾರ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದೆ. ಭದ್ರತೆ ಒದಗಿಸಲಾಗದೆ ಅಸಮರ್ಥವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಲಾರಂಭಿಸಿದ್ದವು. ದುರ್ಘಟನೆ ನಡೆದ ಬಳಿಕ ಎಲ್ಲರೂ ಉಲ್ಟಾ ಹೊಡೆಯಲಾರಂಭಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳಲ್ಲೂ ಸಾಕಷ್ಟು ಸಮಸ್ಯೆಗಳಿದ್ದವು. ಜೂ.3 ರಂದು ಬಿಪಿಎಲ್ ಮ್ಯಾಚ್ ಅನ್ನು ಆರ್‌ಸಿಬಿ ತಂಡ ಗೆದ್ದ ತಕ್ಷಣದಿಂದ ಬೆಳಗಿನ ಜಾವ 5 ಗಂಟೆವರೆಗೂ ಗಲ್ಲಿಗಲ್ಲಿಗಳಲ್ಲೂ ಸಂಭ್ರಮಾಚರಣೆಗಳು ನಡೆದವು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯುಕ್ತರು ಕಟ್ಟಪ್ಪಣೆ ಮಾಡಿದ್ದರಿಂದಾಗಿ ಕಾನ್‌ಸ್ಟೇಬಲ್‌ನಿಂದ ಕಮಿಷನರ್‌ವರೆಗೂ ಎಲ್ಲರೂ ನಿದ್ದೆಗೆಟ್ಟು ಕೆಲಸ ಮಾಡಿದ್ದರು. ಮತ್ತೆ ಮಾರನೇ ದಿನ ವಿಜಯೋತ್ಸವ ಆಚರಣೆಯ ಬಂದೋಬಸ್ಗೆ ಬರಬೇಕು ಎಂದಾಗ ಮಾನವ ಸಹಜವಾದ ಬಳಲಿಕೆಯಿಂದಾಗಿ ಕೆಲವು ಸಿಬ್ಬಂದಿಗಳು ವಿಶ್ರಾಂತಿ ಪಡೆದಿದ್ದರು ಎಂದು ತಿಳಿದುಬಂದಿದೆ.

ವಿಜಯೋತ್ಸವ ಆಚರಣೆಯ ಭದ್ರತೆಗೆ 1600 ಸಿಬ್ಬಂದಿಗಳನ್ನು ನಿಯೋಜಿಸಿದ್ದಾಗಿ ತಿಳಿಸಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ 8 ಲಕ್ಷ ಜನ ಬೆಂಗಳೂರಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾದರೆ ಸುರಕ್ಷತೆಗೆ ಕೇವಲ 1600 ಸಿಬ್ಬಂದಿ ಯಾವ ಮೂಲೆಗೆ ಸಾಲುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮಿತಿಮೀರಿದ ಜನದಟ್ಟಣೆ, ಅಭಿಮಾನದ ಉತ್ಕರ್ಷ, ಅಳತೆ ಮೀರಿದ ಆರ್ಭಟಗಳು, ಕೆಲ ಘಂಟೆಗಳ ಕಾಲ ಆಡಳಿತ ವ್ಯವಸ್ಥೆಯನ್ನು ಅದರಲ್ಲೂ ಭದ್ರತಾ ಸಿಬ್ಬಂದಿಗಳನ್ನು ಕೈಕಟ್ಟಿ ಹಾಕಿತ್ತು. ಐಪಿಎಲ್ ಮತ್ತು ಅದರ ಅಭಿಮಾನಿಗಳ ಸಮೂಹ ಸನ್ನಿಗೆ ಸರ್ಕಾರವೇ ಬೆಚ್ಚಿಬಿದ್ದಿತ್ತು. ಏನು ಮಾಡಿದರೆ ಹೆಚ್ಚಾಗುತ್ತದೆ. ಯಾವುದು ಕಡಿಮೆಯಾಗುತ್ತದೋ ಎಂಬ ತಂತಿ ಮೇಲಿನ ನಡಿಗೆಯ ಸರ್ಕಸ್ ಮಾಡುತ್ತಿತ್ತು. ಹೀಗಿರುವಾಗ ಪೊಲೀಸ್ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿತ್ತೇ?, ಒಂದು ವೇಳೆ ಆ ರೀತಿ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ ಅದರಿಂದಾಗುವ ಪರಿಣಾಮಗಳಿಗೆ ಸರ್ಕಾರ ಮತ್ತದೇ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡುತ್ತಿರಲಿಲ್ಲವೇ ಎಂಬ ಪ್ರಶ್ನೆಗಳಿದೆ.

ಏಕಾಏಕಿ ಪೊಲೀಸ್ ಆಯುಕ್ತರಿಂದ ಹಿಡಿದ ಎಲ್ಲಾ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಆಡಳಿತಾತ್ಮಕವಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಮರ್ಥರು ಎಂದು ಸಾಬೀತು ಪಡಿಸಿದ್ದಾರೆ. ಆದರೆ ಪರಿಸ್ಥಿತಿ ಮತ್ತು ಅನಂತರದ ಘಟನೆಗಳಲ್ಲಿ ನೈಜವಾದ ತಪ್ಪಿತಸ್ಥರು ಯಾರು ಎಂಬುದು ವಿಮರ್ಶೆಗೊಳಗಾಗುವ ಅಗತ್ಯ ವಿದೆ.

RELATED ARTICLES

Latest News