Monday, March 10, 2025
Homeರಾಜ್ಯವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ

ವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ

Microfinance Bill passed in the Assembly

ಬೆಂಗಳೂರು,ಮಾ.10– ಸಾಲ ಪಡೆಯುವ ಮತ್ತು ನಂತರದ ಸಾಲಗಳಲ್ಲಿಯೇ ಮುಳುಗಿಹೋಗಿರುವ ಅಸಹಾಯಕರನ್ನು ಕಾಪಾಡುವ ಮತ್ತು ರಕ್ಷಿಸುವ ಉದ್ದೇಶದ 2025ನೇ ಸಾಲಿನ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ವಿಧೇಯಕ ಕುರಿತು ಮಾತನಾಡಿ, ಬಲವಂತವಾಗಿ ಸಾಲ ವಸೂಲಿ ಮಾಡುವುದು, ಅಧಿಕ ಬಡ್ಡಿ ವಿಧಿಸಿ ತೊಂದರೆ ಕೊಡುವುದರಿಂದ ಸಾಲಗಾರರು ಬೀದಿಗೆ ಬರುವಂತಹ ಮತ್ತು ಆತಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ದೂಡುವುದನ್ನು ತಡೆಯಲು ಹಾಗೂ ತಪ್ಪಿತಸ್ಥರಿಗೆ 10 ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ.

ಕಿರು ಸಾಲ ಮತ್ತು ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳು ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲದವರನ್ನು ಪೀಡಿಸುತ್ತಿದೆ ಮತ್ತು ಉಸಿರುಗಟ್ಟಿಸುವಂತಹ ಪ್ರಕರಣಗಳು ವರದಿಯಾಗಿವೆ. ದುಪ್ಪಟ್ಟು ಬಡ್ಡಿ ವಿಧಿಸಿ ತೊಂದರೆಗೆ ಸಾಲಗಾರರನ್ನು ಸಿಲುಕಿಸುವುದನ್ನು ತಡೆಯಲು ಈ ವಿಧೇಯಕ ತರಲಾಗಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕುವುದು, ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಕಿರುಕುಳ ತಪ್ಪಿಸುವ ಉದ್ದೇಶವಿದೆ ಎಂದರು.

ಈ ವಿಧೇಯಕ ಕುರಿತು ಪಕ್ಷ ಬೇಧ ಮರೆತು ಶಾಸಕರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು.ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಈಗ ಜಾರಿಯಲ್ಲಿರುವ ಕಾಯ್ದೆಗಳ ಮೂಲಕವೇ ಹಣಕಾಸು ದಂಧೆಕೋರರನ್ನು ಬಗ್ಗು ಬಡಿಯಬಹುದಾಗಿತ್ತು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಕೆಲವು ಬಡಜನರ ಪ್ರಾಣ ನಷ್ಟವಾಯಿತು ಎಂದು ಹೇಳಿದರು.

ಈ ಉದ್ದೇಶಿತ ಕಾನೂನಿನಿಂದ ನ್ಯಾಯಾಲಯದಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ನ್ಯಾಯಯುತವಾಗಿ ಸಾಲ ನೀಡುವವರಿಗೂ ತೊಂದರೆಯಾಗದಂತೆ ಗಮನ ಹರಿಸಬೇಕು ಎಂಬ ಸಲಹೆ ಮಾಡಿದರು.

ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಮಾತನಾಡಿ, ಫೈನಾನ್‌್ಸ ದಂಧೆ ತೀವ್ರವಾಗಿದೆ. ಇಸ್ಪೀಟ್‌ ದಂಧೆ, ಗಾಂಜಾ ಮಾಫಿಯಾ ಸೇರಿದಂತೆ ಕೆಟ್ಟ ದಂಧೆಕೋರರು ಫೈನಾನ್‌್ಸ ನಡೆಸುತ್ತಾರೆ. ಶೇ.10 ರಷ್ಟು ಬಡ್ಡಿ ವಿಧಿಸುವ ದೊಡ್ಡ ಜಾಲವೂ ಇದೆ. ಪರೋಕ್ಷವಾಗಿ ಪೊಲೀಸರ ಸಹಕಾರವೂ ಇರುತ್ತದೆ. ಕಾನೂನಿನ ಮೂಲಕ ಬಡಜನರ ಮೇಲೆ ದೌರ್ಜನ್ಯವಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.

ಕಾಂಗ್ರೆಸ್‌‍ ಶಾಸಕರಾದ ಲಕ್ಷ್ಮಣ್‌ ಸವದಿ, ರಂಗನಾಥ್‌, ನಂಜೇಗೌಡ ಸೇರಿದಂತೆ ಬಿಜೆಪಿ ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.ನಂತರ ಪ್ರತಿಕ್ರಿಯಿಸಿದ ಕಾನೂನು ಸಚಿವರು, ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು ವಿಶೇಷವಾಗಿ ಮಹಿಳೆಯರು, ಮಹಿಳಾ ಸ್ವಸಹಾಯ ಸಂಘವನ್ನು ರಕ್ಷಿಸಲು ಉದ್ದೇಶಿಸಲಾಗದೆ. ಮೈಕ್ರೋಫೈನಾನ್‌್ಸ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಸಂಸ್ಥೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯ ವ್ಯವಸ್ಥೆಯನ್ನು ಜಾರಿಗೆ ತರುವ ವಿಧೇಯಕ ಒಳಗೊಂಡಿದೆ.

ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು ಮೊದಲಾದ ಅಂಶಗಳನ್ನು ಒಳಗೊಂಡಿದೆ. ಕಾನೂನು ಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ ಆದರೆ ಬಲವಂತವಾದ ಸಾಲ ವಸೂಲಾತಿಯನ್ನು ನಿರ್ಬಂಧಿಸಲಿದೆ. ಅಮಾನವೀಯ ಸಾಲ ವಸೂಲಾತಿಯಲ್ಲಿ ತಪ್ಪಿತಸ್ತರಿಗೆ 10 ವರ್ಷದವರೆಗೆ ವಿಸ್ತರಿಸುವ ಸೆರೆವಾಸ, 5 ಲಕ್ಷ ರೂ. ದಂಡ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು ಎಂದು ಹೇಳಿದರು.

ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದನ್ನು ತಪ್ಪಿಸುವ ಉದ್ದೇಶವಿದೆ ಎಂದು ಹೇಳಿ ಈ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಕೋರಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್‌ರವರು ಮತಕ್ಕೆ ಹಾಕಿದಾಗ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

RELATED ARTICLES

Latest News