Saturday, May 4, 2024
Homeರಾಜಕೀಯಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ

ಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ

ಬೆಂಗಳೂರು,ಅ.20- ತಮ್ಮ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳುವ ಮೂಲಕ ಅಸಮಧಾನ ಇರುವುದನ್ನು ಹೊರ ಹಾಕಿದ್ದಾರೆ. ಆದರೆ ಅದರಿಂದ ಪಕ್ಷಕ್ಕಾಗಲಿ ಸರ್ಕಾರಕ್ಕಾಗಿಲಿ ಯಾವುದೇ ನಷ್ಟ ವಾಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಾನು ಹೈಕಮಾಂಡ್‍ಗೆ ಮನವಿ ಮಾಡಿದ್ದೆ. ಅದು ನಮ್ಮ ಮಟ್ಟದಲ್ಲಿ ಮುಗಿದ ಅಧ್ಯಾಯ. ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.

ಸತೀಶ್ ಜಾರಕಿಹೊಳಿ ಆಪ್ತ ಶಾಸಕರೊಂದಿಗೆ ಪ್ರವಾಸ ಮಾಡುತ್ತಿರುವುದು ಭಿನ್ನಮತವಲ್ಲ. ಸತೀಶ್ ಜಾರಕಿಹೊಳಿ ತತ್ವಾಧಾರಿತ, ಸಿದ್ಧಾಂತದ ಮೇಲೆ ಹೋರಾಟ ಮಾಡುವ ಮುತ್ಸದ್ಧಿ ನಾಯಕ. ಅವರು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ನನಗೆ ಅಸಮಾದಾನ ಇರಬಹುದು, ಅಂದ ಮಾತ್ರಕ್ಕೆ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡುವುದಿಲ್ಲ.

ನನ್ನ ಮೌನ ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು ಎಂದು ಸತೀಶ್ ಜಾರಕಿಹೊಳಿ ಅವರೇ ನೀಡಿರುವ ಹೇಳಿಕೆ ಬಹಳಷ್ಟು ಅರ್ಥ ಕಲ್ಪಿಸುತ್ತದೆ. ನಾನು ಸುಮ್ಮನಿದ್ದೆ ಎಂದು ನನ್ನ ಮೇಲೆ ಸವಾರಿ ಮಾಡುತ್ತಿದ್ದಾರೆ, ಇನೂ ಮುಂದೆ ನಾನು ಸುಮ್ಮನಿರುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅವರ ಮಾತಿನಲ್ಲಿ ಅಸಮದಾನ ಅಂಶ ಇರುವುದನ್ನು ಗಮನಿಸಬಹುದು. ರಾಜಕಾರಣದಲ್ಲಿ ಏರುಪೇರು ಇದ್ದಿದ್ದೆ. ಎಲ್ಲವನೂ ಸಹಿಸಿಕೊಂಡು ಹೋಗಬೇಕು. ಆದರೆ ಸತೀಶ್ ಜಾರಕಿಹೊಳಿ ಅವರ ಅಸಮದಾನ ಪಕ್ಷಕ್ಕೆ ಹಾನಿ ಮಾಡುವುದಿಲ್ಲ ಎಂದು ದೃಢವಾದ ನಂಬಿಕೆ ನಮಗಿದೆ ಎಂದರು.

ಕಮಿಷನ್ ಹೊಡೆಯುವುದರಲ್ಲಿ ಸಿಎಂ-ಡಿಸಿಎಂ ಪೈಪೋಟಿ : ಡಿವಿಎಸ್ ಆರೋಪ

ಎಲ್ಲಾ ಜಿಲ್ಲೆಗಳಲ್ಲೂ ಗುಂಪು ರಾಜಕಾರಣ ಇದ್ದೆ ಇರುತ್ತದೆ. ಒಂದು ಜಿಲ್ಲೆಯಲ್ಲಿ ಹೆಚ್ಚಿರುತ್ತದೆ, ಕೆಲವು ಕಡೆಗಳಲ್ಲಿ ಕಡಿಮೆ ಇರುತ್ತದೆ. ಗುಂಪು ರಾಜಕಾರಣ ಇಲ್ಲದ ಜಿಲ್ಲೆಗಳೇ ಇಲ್ಲ. ತುಮಕೂರಿನಲ್ಲಿ ಮಾತ್ರ ಗುಂಪು ರಾಜಕಾರಣ ಇಲ್ಲ, ಹಿಂದೆ ಇದ್ದ ಗುಂಪುಗಾರಿಕೆ ಇಲ್ಲವಾಗಿದೆ. ರಾಜಕಾರಣದಲ್ಲಿ ಕರೆದು ಅಧಿಕಾರ ನೀಡುವುದಿಲ್ಲ. ಅಧಿಕಾರ ಇಲ್ಲದವರು ಅಧಿಕಾರದಲ್ಲಿದ್ದವರಿಂದ ಕಿತ್ತುಕೊಳ್ಳಲು, ಅಧಿಕಾರದಲ್ಲಿದ್ದವರು ಅದನ್ನು ಉಳಿಸಿಕೊಳ್ಳಲು ಯತ್ನಿಸುವುದು ಸಾಮಾನ್ಯ. ರಾಜಕಾರಣದ ಇದನ್ನೆ ಸಂಘರ್ಷ ಎಂದು ಕರೆಯುವುದು ಎಂದರು.

ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿಯಷ್ಟೆ ಅಲ್ಲ. ಮುಖ್ಯಮಂತ್ರಿಯಾಗುವ ಅರ್ಹತೆಯನ್ನೇ ಹೊಂದಿದ್ದಾರೆ. ತಾವು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಪ್ರಸ್ತಾಪ ಮಾಡಿದ್ದಕ್ಕೂ ಸತೀಶ್ ಜಾರಕಿಹೊಳಿ ಅವರ ಆಪ್ತ ಶಾಸಕರ ಪ್ರವಾಸಕ್ಕೂ ಸಂಬಂಧ ಇಲ್ಲ. ನವರಾತ್ರಿ ಹಾಗೂ ಪಂಚರಾಜ್ಯಗಳ ಚುನಾವಣೆ ಬಳಿಕ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಇತರ ವಿಚಾರಗಳ ಬಗ್ಗೆ ಲಿಖಿತ ಮಾಹಿತಿ ನೀಡುತ್ತೇನೆ ಎಂದರು.

ರಾಜ್ಯದಲ್ಲಿ ಜೆಡಿಎಸ್ ಇನ್ನೂ ಇದ್ಯಾ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ವಿಲೀನವಾಗಿರಬಹುದು ಎಂದುಕೊಂಡಿದ್ದೆ. ಈ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗಾಲಿ ಕುರ್ಚಿಯಲ್ಲಿ ಬಂದು ಪಕ್ಷ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಅದನ್ನು ನೋಡಿದರೆ ದೇವೇಗೌಡರಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಬೇರೆ ಇನ್ಯಾರಾಗಿದ್ದರೂ ಆಗಿದ್ರೆ ಏನು ಆಗುತ್ತದೆಯೋ ಆಗಲಿ ಎಂದು ಸುಮ್ಮನಾಗುತ್ತಿದ್ದರು ಎಂದರು.

ಅನ್ಯ ಪಕ್ಷಗಳಿಂದ ಸಾಕಷ್ಟು ನಾಯಕರು, ಶಾಸಕರಾದಿಯಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುವವರ ದೊಡ್ಡ ಪಟ್ಟಿಯೇ ಇದೆ. ಸದ್ಯಕ್ಕೆ ತಾವು ಯಾರ ಹೆಸರನ್ನೂ ಹೇಳುವುದಿಲ್ಲ. ಸಮಯ ಬಂದಾಗ ಎಲ್ಲವೂ ಬಹಿರಂಗವಾಗುತ್ತದೆ ಎಂದರು.

ಬಿಜೆಪಿಯವರು ಸೋತು ಹತಾಶರಾಗಿದ್ದಾರೆ. ನಿರುದ್ಯೋಗಳಾಗಿರುವ ಅವರಿಗೆ ಈವರೆಗೂ ಆ ಪಕ್ಷದಿಂದ ವಿರೋಧ ಪಕ್ಷದ ನಾಯಕನ್ನನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ರಾಜ್ಯದಲ್ಲಿ ಪ್ರಭಾವಿಗಳಾಗಿದ್ದ ಬಹಳಷ್ಟು ನಾಯಕರು ಪ್ರಧಾನಿ ಬಂದಾಗ ಪುಟ್‍ಪಾತ್ ಮೇಲೆ ನಿಂತು ವಿಷ್ ಮಾಡಿದ್ದನ್ನು ನೋಡಿದ್ದೇವೆ. ಅಂತಹವರ ಮಾತುಗಳಿಗೆ ಯಾವ ಬೆಲೆ ಇದೆ ಎಂದು ಗೋತ್ತಿದೆ ಎಂದರು.

RELATED ARTICLES

Latest News