ಬೆಂಗಳೂರು, ಮೇ 3– ತಮಿಳು ಹುಟ್ಟಿದ ಮೇಲೆ ಕನ್ನಡ ಹುಟ್ಟಿಲ್ಲ, ಬಹುಭಾಷಾ ನಟ ಕಮಲ್ ಹಾಸನ್ ನಮ್ಮ ಭಾಷೆ ಬಗ್ಗೆ ಆಡಿರುವ ಮಾತುಗಳು ಸಹನೀಯವಲ್ಲ. ಕೂಡಲೇ ಅವರು ತಮ್ಮ ಮಾತುಗಳನ್ನು ಹಿಂಪಡೆಯಲು ಮನವೋಲಿಸುವಂತೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಬಳಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮನವಿ ಮಾಡಿದ್ದಾರೆ.
ಖಾಸಗಿ ಕಾರ್ಯಕ್ರಮ ಒಂದರಲ್ಲಿ ತಮ್ಮೊಂದಿಗೆ ವೇದಿಕೆ ಹಂಚಿಕೊಂಡ ಹಿರಿಯ ನಟ ಶಿವರಾಜ್ ಕುಮಾರ್ ಅವರ ಬಳಿ ಸಚಿವರು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಪ್ರಸ್ತಾಪಿಸಿದರು.
ಭಾಷೆ ವಿಚಾರದಲ್ಲಿ ಯಾರೇ ದೊಡ್ಡ ವ್ಯಕ್ತಿಯಾಗಿದ್ದರೂ ರಾಜಿಯಾಗುವ ಪ್ರಶ್ನೆ ಇಲ್ಲ. ನಮ್ಮ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದರೇ ಅದನ್ನು ಸಹಿಸಲು ಸಾಧ್ಯವಿಲ್ಲ. ಅಂತ ವಿಚಾರವನ್ನು ನಾವು ಪ್ರಶ್ನೆ ಮಾಡದೆ ಹಾಗೆಯೇ ಬಿಟ್ಟರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ ಎಂದು ಸಚಿವರು ಹೇಳಿದ್ದಾರೆ.
ಶಿವರಾಜ್ ಕುಮಾರ್ ಚಲನಚಿತ್ರದ ದೊಡ್ಡ ಅಣ್ಣನಿದ್ದಂತೆ, ಕರ್ನಾಟಕಕ್ಕೆ ಅವರ ಕುಟುಂಬದ ಕೊಡುಗೆ ದೊಡ್ಡದಿದೆ. ಶಿವರಾಜ್ ಕುಮಾರ್ ಬಗ್ಗೆ ನಮಗೆ ಅಪಾರವಾದಂತ ವಿಶೇಷ ಗೌರವವಿದೆ. ಕಾಲೇಜು ದಿನಗಳಲ್ಲಿ ಅವರ ಚಿತ್ರಗಳನ್ನು ನೋಡಿ ಅಭಿಮಾನಿಯಾಗಿದ್ದೇನೆ ಎಂದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈಗಾಗಲೇ ನಾನು ಪತ್ರ ಬರೆದು, ಕಮಲ್ ಹಾಸನ್ ಅವರ ಚಿತ್ರವನ್ನ ಬಿಡುಗಡೆ ಮಾಡದಂತೆ ನಿಷೇಧ ಹೇರಲು ಮನವಿ ಮಾಡಿಕೊಂಡಿದ್ದೇನೆ. ಶಿವರಾಜ್ ಕುಮಾರ್ ಅವರು ಅದೇ ಮಾದರಿಯಲ್ಲಿ ಹೆಜ್ಜೆ ಇಡಬೇಕು. ಈ ಬಗ್ಗೆ ಧ್ವನಿ ಎತ್ತಬೇಕು ಎಂದು ವಿನಮ್ರತೆಯಿಂದ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಮತ್ತೊಂದೆಡೆ ಪತ್ರ ಬರೆದಿರುವ ಸಚಿವರು, ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ಅವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕನ್ನಡ ಭಾಷೆಯ ಕುರಿತಾಗಿ ಮಾತನಾಡಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ನನಗೆ ತೀವು ನೋವಾಗಿದೆ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದಿದ್ದಾರೆ.
ಕಮಲ್ ಹಾಸನ್ ಅವರು ಓರ್ವ ಹಿರಿಯ ನಟರಾಗಿ ಕನ್ನಡ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಭಾಷೆಯ ಬಗ್ಗೆ ತಿಳಿದವರಾಗಿದ್ದು, ಈ ರೀತಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕಮಲ್ ಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ರವರು ರಾಜ್ಯದ ಜನರು/ ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸಿರುವ ಚಲನ ಚಿತ್ರಗಳಿಗೆ ಕರ್ನಾಟಕದಲ್ಲಿ ಕೂಡಲೇ ನಿರ್ಬಂಧ ವಿಧಿಸಬೇಕೆಂದು ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.