Thursday, May 2, 2024
Homeರಾಜ್ಯವಿಧಾನಸಭೆಯಲ್ಲಿ ಅಲ್ಪಸಂಖ್ಯಾತರರ ಅಭಿವೃದ್ಧಿ ಅನುದಾನ ಕುರಿತ ಬಿಸಿಬಿಸಿ ಚರ್ಚೆ

ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರರ ಅಭಿವೃದ್ಧಿ ಅನುದಾನ ಕುರಿತ ಬಿಸಿಬಿಸಿ ಚರ್ಚೆ

ಬೆಂಗಳೂರು,ಫೆ.19- ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕರು ಕೇಳಿದ ಪ್ರಶ್ನೆ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಗಿ ಮಾತಿನ ಚಕಮಕಿ ನಡೆಯಿತು. ಪ್ರಶ್ನೋತ್ತರದ ಅವಧಿಯಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಮಂಜೂರು ಮಾಡಿ ಬಿಡುಗಡೆ ಮಾಡಿದೆ ಎಂದು ಪ್ರಶ್ನೆ ಕೇಳಿ, ರೈತರ ಹಿತವನ್ನು ಕಡೆಗಣಿಸಿ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. 1 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲೂ ಬಿಜೆಪಿ ಶಾಸಕರಿಗೆ ತಾರತಮ್ಯ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್.ಜಮೀರ್ ಅಹಮ್ಮದ್‍ಖಾನ್ ಉತ್ತರ ನೀಡಿ, ಅಲ್ಪಸಂಖ್ಯಾತರಿಗಾಗಿ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ. 1 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು. ಅದರಲ್ಲಿ 300 ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದ್ದು, 165 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದರು.

ವಿಜಯೇಂದ್ರರವರು ಆರೋಪಿಸುವಂತೆ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿಲ್ಲ. 3.71 ಲಕ್ಷ ಕೋಟಿ ಬಜೆಟ್‍ನಲ್ಲಿ 300 ಕೋಟಿ ರೂ. ಮಾತ್ರ ನೀಡಿದ್ದಾರೆ. ಅದು ಬಜೆಟ್ ಗಾತ್ರದ ಶೇ.1 ರಷ್ಟು ಪಾಲಿನಂಶವಾಗುವುದಿಲ್ಲ ಎಂದು ಹೇಳಿದರು. ಅಲ್ಪ ಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಪಕ್ಷಬೇಧ ಇಲ್ಲದೆ ಹಣ ನೀಡಿದ್ದೇವೆ. ಬಿಜೆಪಿಯ 29, ಜೆಡಿಎಸ್‍ನ 9 ಶಾಸಕರಿಗೂ ಹಣ ಒದಗಿಸಲಾಗಿದೆ. ಕಾಲೋನಿಗಳನ್ನು ಎ,ಬಿ,ಸಿ ಎಂದು ವರ್ಗೀಕರಿಸಿ ಅಲ್ಪಸಂಖ್ಯಾತರು ಹೆಚ್ಚಿರುವ ಕಾಲೋನಿಗಳಿಗೆ ಗರಿಷ್ಠ 5 ಕೋಟಿ ರೂ.ವರೆಗೂ ಹಣ ನೀಡಲಾಗುತ್ತಿದೆ. 94 ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಾಗಿದೆ ಎಂದು ವಿವರಿಸಿದರು.

ಇಡಿ ಮುಚ್ಚಿದರೆ ಬಿಜೆಪಿ ತೊರೆಯಲಿದ್ದಾರೆ ಘಟಾನುಘಟಿ ನಾಯಕರು : ಕೇಜ್ರಿ

ಈ ಸಂದರ್ಭದಲ್ಲಿ ಎದ್ದುನಿಂತ ಬಿಜಾಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ 1.20 ಲಕ್ಷ ಜನಸಂಖ್ಯೆ ಇದೆ. ಆದರೆ ನನಗೆ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ತಿರುಗೇಟು ನೀಡಿದ ಜಮೀರ್ ಅಹಮ್ಮದ್ ಖಾನ್, ನೀವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದೀರ. ಬುರ್ಖಾ, ಟೋಪಿ ಧರಿಸಿದವರು ನಮ್ಮ ಹತ್ತಿರ ಬರಬೇಡಿ ಎಂದು ಹೇಳಿಕೆ ನೀಡಿರುವುದನ್ನು ನೋಡಿದ್ದೇನೆ. ಕೆಲಸ ಮಾಡುವುದಾದರೆ ಪತ್ರ ಕೊಡಿ. 10 ಕೋಟಿ ರೂ. ಬೇಕಾದರೂ ಅನುದಾನ ಕೊಡುತ್ತೇನೆ ಎಂದರು.

ಇದು ಬಿಜೆಪಿ ಶಾಸಕರನ್ನು ಕೆಣಕಿತ್ತು. ಅಶೋಕ್, ನಾರಾಯಣ, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿ, ಸಚಿವರು ಸರ್ಕಾರವಾಗಿ ಕೆಲಸ ಮಾಡಬೇಕು. ವೈಯಕ್ತಿಕವಾಗಿ ಅಥವಾ ರಾಜಕೀಯವಾಗಿ ನಡೆದುಕೊಳ್ಳಬಹುದು. ಹೇಳಿಕೆಗಳು ಏನೇ ಇರಲಿ, ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಕಡೆಗಣಿಸುವುದು ಅವರಿಗೆ ಮಾಡಿದ ವಂಚನೆ ಎಂದು ಟೀಕಿಸಿದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಮ್ಮ ಸರ್ಕಾರ ಬಿಜೆಪಿಯ 28 ಶಾಸಕರ ಕ್ಷೇತ್ರಗಳಿಗೂ ಹಣ ನೀಡಿದೆ. ಆದರೆ ಹಿಂದಿನ ಸರ್ಕಾರ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿತ್ತು ಎಂದು ಪ್ರತ್ಯುತ್ತರಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮಧ್ಯಪ್ರವೇಶಿಸಿ, ಬಿಜಾಪುರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿದ್ದಾರೆ. ಸರ್ಕಾರ ಅವರ ಅಭಿವೃದ್ಧಿಯನ್ನು ಕಡೆಗಣಿಸುವುದು ಒಳ್ಳೆಯದಲ್ಲ ಎಂದು ಹೇಳಿದರು. ಈ ನಡುವೆ ಬಸನಗೌಡ ಯತ್ನಾಳ್ ಪದೇಪದೇ ಮಾತನಾಡುತ್ತಿದ್ದಾಗ, ನಾನು ನಿಮ್ಮ ಪರವಾಗಿ ಶುಲ್ಕ ಇಲ್ಲದೆ ವಕಾಲತ್ತು ಮಾಡುತ್ತಿದ್ದೇನೆ. ಸ್ವಲ್ಪ ಹೊತ್ತು ತಾಳ್ಮೆಯಿಂದ ಇರಿ ಎಂದು ತಮ್ಮ ಪಕ್ಷದ ಹಿರಿಯ ಶಾಸಕರಿಗೆ ಸಲಹೆ ನೀಡಿದರು.

ಚರ್ಚೆ ಮುಂದುವರೆಸಿದ ಬೊಮ್ಮಾಯಿಯವರು, ರಾಜಕೀಯವಾಗಿ ಮಾತನಾಡುವುದು ಬೇರೆ, ಅಭಿವೃದ್ಧಿ ಬೇರೆ ಬಿಜಾಪುರದಲ್ಲಿರುವ ಅಲ್ಪ ಸಂಖ್ಯಾತರ ಅಭಿವೃದ್ಧಿಯನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಇನ್ನು ನನ್ನ ಕ್ಷೇತ್ರಕ್ಕೆ 5 ಕೋಟಿ ಕೊಟ್ಟಿರುವುದಾಗಿ ಹೇಳಿದ್ದೀರ. ಬೇರೆಯವರ ಪತ್ರದ ಮೇಲೆ ಹಣ ಕೊಟ್ಟರೆ, ಅಲ್ಲಿ ಯಾವ ಕೆಲಸಗಳಾಗುತ್ತವೆ ಎಂದು ನಮಗೆ ಗೊತ್ತಿರುತ್ತದೆ ಎಂದು ಎಚ್ಚರಿಸಿದರು.

ರಾಜಕೀಯ ಮಾತುಕತೆ ಆರಂಭಿಸಿದ ಪವನ್‍ಕಲ್ಯಾಣ್

ಯತ್ನಾಳ್‍ರವರ ಆಕ್ಷೇಪಾರ್ಹ ಟೀಕೆಗಳಿಗೆ ಮುಖ್ಯಮಂತ್ರಿಯಾಗಿದ್ದ ನೀವು ಆ ವೇಳೆಯೇ ತಿಳಿ ಹೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಜಮೀರ್ ಅಹಮ್ಮದ್ ಖಾನ್‍ರವರು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದರು. ಯತ್ನಾಳ್‍ರವರು ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ, ಜೈನರು, ಬೌದ್ಧರು ಸೇರುತ್ತಾರೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಿ.ವೈ.ವಿಜಯೇಂದ್ರರವರು ಸರ್ಕಾರ ದಿವಾಳಿಯಾಗಿದೆ. ಅದಕ್ಕಾಗಿ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News