ಬೆಂಗಳೂರು, ಜೂ.21- ಬಡವರ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಲಂಚ ನೀಡಬೇಕು ಎಂದು ಗಂಭೀರ ಆರೋಪ ಮಾಡಿದ್ದ ಆಡಳಿತ ಪಕ್ಷದ ಶಾಸಕ ಬಿ.ಆರ್ .ಪಾಟೀಲ್ ತಮ್ಮ ಹೇಳಿಕೆಯನ್ನು ಇಂದು ಪುನರ್ ದೃಢೀಕರಿಸಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗುವಂತಾಗಿದೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಬಿ.ಆರ್.ಪಾಟೀಲ್, ಆಡಿಯೋದಲ್ಲಿ ಮಾತನಾಡಿರುವುದು ನಾನೇ. ನಾನು ಸತ್ಯವನ್ನೇ ಹೇಳಿದ್ದೇನೆ. ನಡೆಯುತ್ತಿರುವುದನ್ನು ತಿಳಿಸಿದ್ದೇನೆ. ಜನಪರ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಾವು ಅದರಂತೆ ನಡೆದುಕೊಳ್ಳಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದಿದ್ದಾರೆ.
ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ನಾನು ಏನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ಮುಖ್ಯಮಂತ್ರಿಯವರು ಏನು ಮಾಡುತ್ತಾರೋ ಗೊತ್ತಿಲ್ಲ. ಒಂದು ವೇಳೆ ಅವರು ನನ್ನನ್ನು ಕರೆದರೆ ಹೋಗಿ ಮಾತನಾಡುತ್ತೇನೆ. ಈವರೆಗೂ ಅವರು ನನ್ನನ್ನು ಕರೆದಿಲ್ಲ. ನಾನಾಗಿಯೇ ಹೋಗುವುದಿಲ್ಲ ಎಂದಿದ್ದಾರೆ.
ಎಲ್ಲಾ ಸರ್ಕಾರಗಳಲ್ಲೂ ಭ್ರಷ್ಟಾಚಾರ ಸಾಮಾನ್ಯ. ನಾವು ಜನಪರ ಆಡಳಿತ ನೀಡುತ್ತೇವೆಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿರುವವರು. ನಮ್ಮ ಅವಧಿಯಲ್ಲಿ ಈ ರೀತಿಯಾಗಬಾರದಿತ್ತು ಎಂದಿದ್ದಾರೆ.
ತಮ್ಮ ಕ್ಷೇತ್ರದ ಐದಾರು ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ತಮ್ಮ ಕ್ಷೇತ್ರಕ್ಕೆ 2 ಸಾವಿರ ಮನೆಗಳಿಗಾಗಿ ಬೇಡಿಕೆಯಾಗಿತ್ತು. 1,950 ಮನೆಗಳನ್ನು ಮಂಜೂರು ಮಾಡಲಾಗಿದೆ. ನಾನು ನೀಡಿದ ಪತ್ರಗಳಿಗೆ ಮನೆಗಳನ್ನು ಕೊಟ್ಟಿಲ್ಲ. ಪಂಚಾಯಿತಿ ಅಧ್ಯಕ್ಷರು ನೀಡಿದ ಪತ್ರಗಳಿಗೆ ಮನೆಗಳು ಸಿಕ್ಕಿವೆ. ನನಗಿಂತಲೂ ಕ್ಷೇತ್ರದಲ್ಲಿ ಪಂಚಾಯಿತಿ ಅಧ್ಯಕ್ಷರು ಪ್ರಬಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೊಂದಲದ ಹೇಳಿಕೆ ಕುರಿತು ಹೈಕಮಾಂಡ್ ವರದಿ ಕೇಳಿರುವುದಕ್ಕೆ, ನಾನೇಕೆ ಹೈಕಮಾಂಡ್ಗೆ ವರದಿ ಕೊಡಲಿ ಎಂದು ತಿರುಗೇಟು ನೀಡಿದ ಅವರು, ಹೈಕಮಾಂಡ್ಗೆ ವರದಿ ನೀಡುವಷ್ಟು ಎತ್ತರಕ್ಕೆ ನಾನಿನ್ನೂ ಬೆಳೆದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ಹೇಳಿರುವುದರಲ್ಲಿ ತಪ್ಪಿಲ್ಲ. ಸತ್ಯವನ್ನೇ ಹೇಳಿದ್ದೇನೆ. ನನ್ನ ಹೊಟ್ಟೆ ಕೆಟ್ಟಿತ್ತು. ಔಷಧಿ ತೆಗೆದುಕೊಂಡಿದ್ದೇನೆ ಎಂದು ಪ್ರಸ್ತುತ ಸನ್ನಿವೇಶಕ್ಕೆ ಬಿ.ಆರ್.ಪಾಟೀಲ್ ಸಮರ್ಥನೆ ನೀಡಿದ್ದಾರೆ.
ಬಿಜೆಪಿಯವರೇನೂ ಸಾಚಾಗಳಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯವನ್ನು ಹದಗೆಡಿಸಿ ಹೋಗಿರುವವರೇ ಅವರು ಎಂದು ಬಿ.ಆರ್.ಪಾಟೀಲ್ ತಿರುಗೇಟು ನೀಡಿದ್ದಾರೆ.
ಇಡೀ ರಾಜ್ಯರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಬಿ.ಆರ್.ಪಾಟೀಲ್ ರಾಜ್ಯ ಯೋಜನೆ ಹಾಗೂ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದು, ಸಂಪುಟ ದರ್ಜೆಯ ಸ್ಥಾನಮಾನದಲ್ಲಿದ್ದಾರೆ. ಅವರು ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸುವುದು ಸರ್ಕಾರಕ್ಕೆ ತಲೆನೋವಾಗಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಜಮೀರ್ ಅಹಮ್ಮದ್ ಖಾನ್ ಅವರೇ ವಸತಿ ಸಚಿವರಾಗಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಬಿ.ಆರ್.ಪಾಟೀಲ್ ಕೂಡ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದವರು. ಈ ಮೊದಲು ಗ್ಯಾರಂಟಿ ಯೋಜನೆಗಳಿಗೆ ಅಭಿವೃದ್ಧಿಗೆ ಹಣವಿಲ್ಲವಾಗಿದೆ, ಸರ್ಕಾರ ದಿವಾಳಿಯಾಗುವ ಪರಿಸ್ಥಿತಿ ಬಂದಿದೆ ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರು. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಶೇ.60 ರಷ್ಟು ಕಮಿಷನ್ ಆರೋಪ ಮಾಡುತ್ತಿರುವ ಹಂತದಲ್ಲಿ ಆಡಳಿತ ಪಕ್ಷದ ಶಾಸಕರೇ ಆಗಿರುವ ಬಿ.ಆರ್.ಪಾಟೀಲ್ರವರ ಹೇಳಿಕೆ ವಿರೋಧಪಕ್ಷಗಳಿಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ.
- 2ನೇ WFFYS ಕರ್ನಾಟಕ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ 2025 ಅದ್ಧೂರಿ ಯಶಸ್ಸು
- ನನಗೆ ಯಾವ ಅಧಿಕಾರವೂ ಬೇಡ, ಐಶ್ವರ್ಯವೂ ಬೇಡ, ಜನರ ಪ್ರೀತಿ ಸಾಕು : ಕೆ.ಎನ್. ರಾಜಣ್ಣ
- ಅಕ್ರಮ ಗಣಿಗಾರಿಕೆ : ಸಿಎಂಗೆ ಸಚಿವ ಎಚ್.ಕೆ.ಪಾಟೀಲ್ ಪತ್ರ
- ಜು.1 ರಿಂದ ಅವಧಿ ಮೀರಿದ ವಾಹನಗಳಿಗೆ ದೆಹಲಿಯಲ್ಲಿ ಸಿಗಲ್ಲ ಇಂಧನ
- ಮದ್ಯ ಮಾರಾಟದ ಲೈಸೆನ್ಸ್ ನವೀಕರಣ ಶುಲ್ಕ ಹೆಚ್ಚಳ ವಾಪಸ್ಸಿಗೆ ಆಗ್ರಹ