Friday, September 20, 2024
Homeರಾಷ್ಟ್ರೀಯ | NationalBIG NEWS: ಮುಡಾ ನಿವೇಶನ ಹಂಚಿಕೆ : ಸ್ಫೋಟಕ ಆಡಿಯೋ ಬಿಡುಗಡೆ

BIG NEWS: ಮುಡಾ ನಿವೇಶನ ಹಂಚಿಕೆ : ಸ್ಫೋಟಕ ಆಡಿಯೋ ಬಿಡುಗಡೆ

ಬೆಂಗಳೂರು,ಆ.30- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ ಅವರಿಗೆ ಬದಲಿ ನಿವೇಶನ ನೀಡುವ ನಿರ್ಣಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ತೆಗೆದುಕೊಂಡಿಲ್ಲ. ಆದರೂ ನಿಯಮಬಾಹಿರವಾಗಿ 14 ನಿವೇಶನಗಳನ್ನು ಪಡೆಯಲಾಗಿದೆ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಗಂಭೀರ ಆರೋಪ ಮಾಡಿದ್ದು, ಆಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಹಲವಾರು ಮಾಹಿತಿಗಳನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಹಾಗೂ ಮುಡಾದಲ್ಲಿ ಬಿಜೆಪಿಯ ವ್ಯಕ್ತಿ ಅಧ್ಯಕ್ಷರಾಗಿದ್ದಾಗ ತಮಗೆ ನಿವೇಶನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ವಾದಿಸುತ್ತಿದ್ದಾರೆ. ಇದು ಅಪ್ಪಟ ಸುಳ್ಳು. ಜಂಟಿ ಸಹಭಾಗಿತ್ವದಲ್ಲಿ ನಿವೇಶನಗಳ ಅಭಿವೃದ್ಧಿಗೆ 2009 ರಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಭೂಪರಿವರ್ತನೆಯಾದ ನಿವೇಶನ ಹಂಚಿಕೆಯ ಪ್ರಮಾಣ 60:40 ರಷ್ಟಿತ್ತು.

ಇದಕ್ಕೆ ಜಮೀನು ನೀಡಲು ರೈತರು ಮುಂದೆ ಬರಲಿಲ್ಲ, ಅಧಿಕಾರಿಗಳೂ ಉತ್ಸಾಹ ತೋರಲಿಲ್ಲ. ಹೀಗಾಗಿ 2015 ರಲ್ಲಿ ಈ ಪ್ರಮಾಣವನ್ನು 50:50 ರ ಅನುಪಾತಕ್ಕೆ ಮುಡಾ ಹೆಚ್ಚಿಸಿದೆ. ಆದರೆ ಈ ನಿರ್ಣಯಕ್ಕೆ ರಾಜ್ಯಸರ್ಕಾರದ ಅನುಮತಿ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ 2020ರಲ್ಲೇ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಈ ನಿರ್ಣಯ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಆದಾಗ್ಯೂ ಮುಡಾ ಸಭೆಯಲ್ಲಿ ಚರ್ಚೆ ಮಾಡಿ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯದೆ ಅನಧಿಕೃತವಾಗಿ ಭೂಮಿ ಬಳಸಿಕೊಂಡು ಬಡಾವಣೆ ನಿರ್ಮಿಸಿದ ಪ್ರಕರಣಗಳಲ್ಲಿ 50:50 ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂಬ ನಿರ್ಣಯವಾಗಿಲ್ಲ.

ಇದನ್ನು ಬಳಸಿಕೊಂಡು ಸಿದ್ದರಾಮಯ್ಯನವರು ನಿವೇಶನ ಪಡೆದಿದ್ದಾರೆ. ನಕಲಿ ನಿರ್ಣಯವನ್ನು ಬಳಕೆ ಮಾಡಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು. ಸಭೆಯಲ್ಲಿ ನಡೆದಿರುವ ಚರ್ಚೆಯ ಆಡಿಯೊವನ್ನು ಬಿಡುಗಡೆ ಮಾಡಿದ ಬಿಜೆಪಿ ನಾಯಕರು ಸಭೆಯಲ್ಲಿ ನಿರ್ಣಯವಾಗದೇ ಇದ್ದರೂ ಈ ರೀತಿಯ ನಿರ್ಣಯ ಆಗಿದೆ ಎಂದು ಆಗಿನ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ಮತ್ತು ಆಯುಕ್ತ ನಟೇಶ್‌ ಅವರು ಹೇಳಿಕೆ ನೀಡಿದ್ದಾರೆ. ಸದರಿ ಅಧಿಕಾರಿ ನಟೇಶ್‌ ವರ್ಗಾವಣೆಯಾಗಿ ಎಂತಂತಹ ಜಾಗಗಳಿಗೆ ತಲುಪುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಈ ನಕಲಿ ನಿರ್ಣಯವನ್ನಿಟ್ಟುಕೊಂಡು ಸುಮಾರು 13 ಸಾವಿರಕ್ಕೂ ಹೆಚ್ಚಿನ ನಿವೇಶನಗಳ ಅಕ್ರಮ ಹಂಚಿಕೆಯಾಗಿದ್ದು, 10 ಸಾವಿರ ಕೋಟಿ ರೂ.ಗಳ ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯನವರ ಪತ್ನಿ ಪಾರ್ವತಮನವರು ಪಡೆದಿರುವ 14 ನಿವೇಶನಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರದಲ್ಲೇ ನಿವೇಶನಗಳನ್ನು ಹಂಚಿಕೆ ಮಾಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಂತ್ರರಿದ್ದಾರೆ.

ಅವರನ್ನು ಯಾರೂ ತಡೆದಿಲ್ಲ ಎಂದು ರವಿಕುಮಾರ್‌ ಹೇಳಿದರು. ಪದೇಪದೇ ತಮನ್ನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಯವರ ಮತ್ತೊಂದು ಮುಖ ಅನಾವರಣಗೊಂಡಿದೆ. ಈ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ಕೆಲವು ದಸ್ತಾವೇಜುಗಳನ್ನು ಬಿಡುಗಡೆ ಮಾಡಿದರು. ನಕಲಿ ಆದೇಶಕ್ಕೆ ಮುಡಾ ಆಯುಕ್ತರು ಮತ್ತು ಅಧ್ಯಕ್ಷರು ಮಾತ್ರ ಸಹಿ ಹಾಕಿದ್ದಾರೆ. ಅವರಿಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಾವಿಂದು ಸಭೆಯಲ್ಲಿ ನಡೆದ ನಡಾವಳಿಗಳು, ಚರ್ಚೆಗೆ ಆಡಿಯೊ ಬಿಡುಗಡೆ ಮಾಡಿದ್ದೇವೆ.

ಸಿದ್ದರಾಮಯ್ಯ ಶುದ್ಧರಾಮಯ್ಯ ಅಲ್ಲ, ಸುಳ್ಳುರಾಮಯ್ಯ ಎಂದು ವಾಗ್ದಾಳಿ ನಡೆಸಿದರು. ಬಸವರಾಜ ಬೊಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಡಾ ಹಗರಣದ ತನಿಖೆಗೆ ತಾಂತ್ರಿಕ ಸಮಿತಿಯನ್ನು ರಚಿಸಿದ್ದರು. ಅದರ ವರದಿ ಸರ್ಕಾರದ ಬಳಿಯಿದ್ದು, ಅದನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

RELATED ARTICLES

Latest News