ಮೈಸೂರು, ಜೂ. 2-ಟ್ರಿಣ್ ಟ್ರಿಣ್ ಸೈಕಲ್ಗಳು ತುಂಬಿರಬೇಕಾದ ಸ್ಟ್ಯಾಂಡ್ ಇದೀಗ ಕುರಿದೊಡ್ಡಿಯಾಗಿ ಮಾರ್ಪಟ್ಟಿದೆ. ಮೈಸೂರಿನ ಒಂಟಿಕೊಪ್ಪಲಿನ ಮಾತೃಮಂಡಳಿ ವೃತ್ತದ ಬಳಿ ಇರುವ ಟ್ರಿಣ್ ಟ್ರಿಣ್ ಸೈಕಲ್ ನಿಲ್ದಾಣದ ಪರಿಸ್ಥಿತಿ ಇದಾಗಿದೆ.
ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸಿದ್ದರಾಮಯ್ಯ ನವರು ಈ ಯೋಜನೆಯನ್ನು ಕಳೆದ 2016ರಲ್ಲಿ ಜಾರಿಗೆ ತಂದರು. ಪ್ರಾಯೋಗಿಕವಾಗಿ ಆರಂಭವಾದ ಯೋಜನೆಗೆ ಸಾರ್ವಜನಿಕರೂ ಸಹ ಉತ್ತಮವಾಗಿ ಸ್ಪಂದಿಸಿ ಸೈಕಲ್ ಬಳಕೆಯತ್ತ ಗಮನ ಹರಿಸಿದ್ದರು. ಲಕ್ಷಾಂತರ ಮಂದಿ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥೆಯನ್ನು ಸಮರ್ಪಕವಾಗಿಯೂ ಬಳಸಿಕೊಂಡರು.
ಆದರೆ ಇತ್ತೀಚೆಗೆ ಯೋಜನೆ ಹಳ್ಳ ಹಿಡಿಯುವ ಸೂಚನೆ ಕಾಣುತ್ತಿದೆ. ಸೈಕಲ್ಗಳ ಬದಲಾಗಿ ಕುರಿಗಳನ್ನು ತುಂಬಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸೈಕಲ್ಗಳನ್ನು ಖರೀದಿಸುವತ್ತ ಪಾಲಿಕೆ ಗಮನ ಹರಿಸದ ಕಾರಣ ಸಂಖ್ಯೆ ಕ್ಷೀಣಿಸುತ್ತಿದೆ. ಸೈಕಲ್ಗಳ ಕೊರತೆಯಿಂದಾಗ ನಿಲ್ದಾಣಗಳು ಖಾಲಿಯಾಗುತ್ತಿವೆ. ಇದನ್ನೇ ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಲ್ದಾಣದಲ್ಲಿ ಕುರಿಗಳನ್ನು ತುಂಬಿಸಿಕೊಂಡು ದೊಡ್ಡಿ ಮಾಡಿಕೊಂಡಿದ್ದಾರೆ.
ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖುದ್ದು ಸೈಕಲ್ ಸವಾರಿ ಮಾಡುವ ಮೂಲಕ ಈ ಯೋಜನೆಗೆ ಅದ್ದೂರಿ ಚಾಲನೆ ನೀಡಿದ್ದರು. ಈ ಯೋಜನೆ ಮತ್ತಷ್ಟು ಅಧೋಗತಿಗೆ ಇಳಿಯುವ ಮುನ್ನ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕಿದೆ.