ನವದೆಹಲಿ,ಡಿ.18- ಉಸಿರು ಗಟ್ಟಿಸುತ್ತಿರುವ ಮಾಲಿನ್ಯದಿಂದ ರಾಷ್ಟ್ರ ರಾಜಧಾನಿಯನ್ನು ಉಳಿಸುವ ಉದ್ದೇಶದಿಂದ ಇಂದಿನಿಂದ ಹಳೆಯ ವಾಹನಗಳು ದೆಹಲಿ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ಚಳಿಗಾಲದಂತೆ ಈ ಬಾರಿಯೂ ವಿಷಗಾಳಿ ದೆಹಲಿ ಯನ್ನು ಆವರಿಸಿದೆ. ದೆಹಲಿಯ ಎಕ್ಯೂಐ 400ರ ಗಡಿ ದಾಟಿ ಅಪಾಯಕಾರಿ ಮಟ್ಟ ತಲುಪಿದ್ದು ಇಲ್ಲಿನ ಶೇ. 50ರಷ್ಟು ಜನರಿಗೆ ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಸೂಚನೆ ನೀಡಲಾಗಿದೆ.
ಇದರ ಜೊತೆಗೆ ದೆಹಲಿ ಸರ್ಕಾರ ಇಂದಿನಿಂದ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳ ಭಾಗವಾಗಿ ಬಿಎಸ್- 6 ಎಂಜಿನ್ ಹೊಂದಿರದ ಹಳೆಯ ಕಾರುಗಳಿಗೆ ದೆಹಲಿ ಪ್ರವೇಶವನ್ನ ನಿಷೇಧಿಸಿದೆ.
ಇದರೊಂದಿಗೆ ಪಿಯುಸಿ ಪ್ರಮಾಣ ಪತ್ರ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ಹಾಕಲಾಗುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಇದು ದೆಹಲಿ ಸಮೀಪದ ಗುರುಗ್ರಾಮ್, ಗಾಜಿಯಾಬಾದ್, ಫರಿದಾಬಾದ್ ಮತ್ತು ನೋಯ್ಡಾದಿಂದ ದೆಹಲಿಗೆ ಪ್ರವೇಶಿಸುವ 12 ಲಕ್ಷ ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕಾರಣ ಈ ಭಾಗದಲ್ಲಿ ಬಿಎಸ್-6 ಎಂಜಿನ್ ಹೊಂದಿರದ ವಾಹನಗಳು ಈ ಭಾಗಗಳಲ್ಲಿ ಹೆಚ್ಚಾಗಿವೆ. ಹೀಗಾಗಿ ನೋಯ್ಡಾದಿಂದ 4 ಲಕ್ಷಕ್ಕೂ ಹೆಚ್ಚು, ಗುರಗಾಂವ್ನಿಂದ 2 ಲಕ್ಷ ಮತ್ತು ಗಾಜಿಯಾಬಾದ್ನಿಂದ 5.5 ಲಕ್ಷ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನ ನಿಷೇಧಿಸಲಾಗಿದೆ.
4580 ಪೊಲೀಸ್ ಸಿಬ್ಬಂದಿ ನಿಯೋಜನೆ; ಇನ್ನೂ ದೆಹಲಿ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ 580 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. 126 ಚೆಕ್ಪೋಸ್ಟ್ಗಳಲ್ಲಿ ಸುಮಾರು 37 ಸ್ಪೀಡ್ ಚೆಕ್ ವಾಹನಗಳನ್ನೂ ನಿಯೋಜಿಸಲಾಗಿದೆ.
ಸಾರಿಗೆ ಇಲಾಖೆ, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಹಾರ ಇಲಾಖೆಯ ಸಿಬ್ಬಂದಿಗಳನ್ನ ಪೆಟ್ರೋಲ್ ಪಂಪ್ಗಳಲ್ಲಿ ನಿಯೋಜಿಸಿದ್ದು, ಮಾಲಿನ್ಯ ಹೊಸಸೂಸುವಿಕೆಯ ಮೇಕೆ ತೀವ್ರ ನಿಗಾ ವಹಿಸಲಾಗಿದೆ.
ಈಗಾಗಲೇ ದೆಹಲಿಯ ಪೆಟ್ರೋಲ್ ಪಂಪ್ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಮಾನ್ಯತೆಯಿರುವ ಪಿಯುಸಿ ಪ್ರಮಾಣ ಪತ್ರಗಳನ್ನ ಗುರುತಿಸೋದಕ್ಕೂ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.
