ಮಂಗಳೂರು, ನ.15- ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಕೂಟ, ಸರ್ಕಾರದ ದುಡ್ಡಲ್ಲಿ ಮತ ಖರೀದಿಸಿ ಗೆದ್ದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಅನುಕೂಲ ಮಾಡಿಕೊಡುವ ಎಲ್ಲ ಸಹಯೋಗವನ್ನು ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಘೋಷಣೆಗೆ 4 ದಿನ ಬಾಕಿ ಇರುವಾಗ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ತಲಾ 10 ಸಾವಿರ ರೂ. ಹಾಕಲಾಗಿದೆ. ಸರ್ಕಾರ ದುಡ್ಡಿನಲ್ಲಿ ಮತ ಖರೀದಿಗೆ ಚುನಾವಣಾ ಆಯೋಗವೇ ಅವಕಾಶ ಮಾಡಿಕೊಟ್ಟಿತ್ತು ಎಂದು ಟೀಕಿಸಿದರು.
ಬೇರೆ ಬೇರೆ ರಾಜ್ಯಗಳು ಚುನಾವಣೆ ಸಂದರ್ಭದಲ್ಲಿ ಇದನ್ನೇ ಶುರು ಮಾಡಬಹುದು. ಚುನಾವಣೆ ಹತ್ತಿರವಿದ್ದಾಗ ಯಾವುದೋ ಒಂದು ಯೋಜನೆಯನ್ನು ಘೋಷಣೆ ಮಾಡಿ, 10,20,30 ಸಾವಿರದಂತೆ ಹಣ ಹಾಕಬಹುದು ಹಾಗೆ ಮಾಡಿದರೆ ನ್ಯಾಯಯುತ ಚುನಾವಣೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಬಿಹಾರದ ಜಿಡಿಪಿಯ ಶೇ.2.7ರಷ್ಟು ಹಣವನ್ನು ಚುನಾವಣೆಗೆ ಮೊದಲೇ ಮತದಾರರ ಖಾತೆಗೆ ಹಾಕಲಾಗಿತ್ತು. ಆಯೋಗ ಇದನ್ನು ಏಕೆ? ಪ್ರಶ್ನಿಸಿಲ್ಲ. ಯಾವುದೇ ಆದಾರವಿಲ್ಲದೆ ಹಾಗೂ ಸೂಚನೆಯೂ ಇಲ್ಲದ ಯೋಜನೆಯಡಿ ಹಣ ಪಾವತಿಸಲಾಗಿದೆ. ಇದಕ್ಕಾಗಿ ಚುನಾವಣಾ ದಿನಾಂಕವನ್ನು ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಜನರ ದುಡ್ಡಿನಲ್ಲಿ ರಾಜಕೀಯ ಪಕ್ಷ ಮತ ಖರೀದಿ ಮಾಡಿದರೆ, ಇದನ್ನು ಯಾವ ರೀತಿಯ ನೈತಿಕತೆಯೆಂದು ಹೇಳಲು ಸಾಧ್ಯ ಎಂದರು.
75 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರದಂತೆ ಹಣ ಹಾಕಲಾಗಿದೆ. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ವರ್ಚಸ್ಸು ಇದೆ. ಅದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಅಸ್ತ್ರಗಳನ್ನು ಬಳಕೆ ಮಾಡಿಕೊಂಡಿದೆ. ಸೋಲಿಗೆ ನಮ ವೈಫಲ್ಯವೂ ಕಾರಣ. ನಮ ತಪ್ಪುಗಳ ಬಗ್ಗೆಯೂ ನಾವು ಮಾತನಾಡಬೇಕಿದೆ. ಮಹಾ ಘಟಬಂಧನ್ನಲ್ಲಿ ಸ್ಥಾನ ಹಂಚಿಕೆ ಬಗ್ಗೆ ಕೊನೆ ಹಂತದವರೆಗೂ ಗೊಂದಲಗಳಿತ್ತು. ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲೂ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.
ಉದ್ಯೋಗ ಅರಿಸಿ ಬೇರೆ ರಾಜ್ಯಗಳಿಗೂ ಹೋಗಿರುವವರನ್ನು ಮತದದಾನಕ್ಕೆ ವಾಪಸ್ ಕರೆಸಲು ವಿಶೇಷ ರೈಲು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದು ಹೇಳಿದರು.
ಉತ್ತರ ಭಾರತದಲ್ಲಿ ಹಿಂದುತ್ವದ ಆಧಾರದಲ್ಲಿ ಮತಗಳ ವಿಭಜನೆಯಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ ಬಿಜೆಪಿ ಹೆಚ್ಚು ಮತಗಳನ್ನು ಪಡೆದಿದೆ. ಹಾಗಾಗಿ ಬಿಹಾರದಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿರುವುದು ಪೂರ್ವ ನಿಯೋಜಿತ. ನವೆಂಬರ್ ಕ್ರಾಂತಿಗೂ ಬಿಹಾರದ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಕ್ರಾಂತಿಯೇ ಆದಾರರಹಿತ ವದ್ದಂತಿ ಎಂದು ಹೇಳಿದರು.
