Friday, September 20, 2024
Homeರಾಜ್ಯರಾಜ್ಯದಲ್ಲಿ ನೂತನ 5 ಲೇಔಟ್‌ಗಳ ನಿರ್ಮಾಣ: ಸಚಿವ ಜಮೀರ್ ಅಹಮದ್

ರಾಜ್ಯದಲ್ಲಿ ನೂತನ 5 ಲೇಔಟ್‌ಗಳ ನಿರ್ಮಾಣ: ಸಚಿವ ಜಮೀರ್ ಅಹಮದ್

ಬೆಂಗಳೂರು,ಜು.24- ರಾಜ್ಯದಲ್ಲಿ ನೂತನವಾಗಿ 5 ಲೇಔಟ್ಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ವಿಧಾನಪರಿಷತ್ನ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸದಾಗಿ ರಾಜ್ಯದ ಒಟ್ಟು 5 ಕಡೆ ಅತ್ಯಂತ ಸುವ್ಯವಸ್ಥಿತ ಹಾಗೂ ಸುಸಜ್ಜಿತ ಲೇಔಟ್ಗಳನ್ನು ನಿರ್ಮಾಣ ಮಾಡಬೇಕೆಂಬ ಯೋಜನೆ ಇದೆ. ಆದರೆ ಯಾವ ಸ್ಥಳದಲ್ಲಿ ಮಾಡುತ್ತೇವೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಬೇಕೆಂದರೆ ರೈತರು ಇದಕ್ಕೆ ಜಮೀನು ಕೊಡಲು ಹಿಂದೆಮುಂದೆ ನೋಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಲೇಔಟ್ಗಳನ್ನು ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದೆ. ಒಂದು ಲೇಔಟ್ ನಿರ್ಮಿಸಬೇಕೆಂದರೆ ಕನಿಷ್ಠ ಪಕ್ಷ 1 ಸಾವಿರ ಎಕರೆ ಜಮೀನು ಬೇಕು. ನಾವು ರೈತರಿಂದ ಬಲವಂತವಾಗಿ ಜಮೀನು ಭೂಸ್ವಾದೀನಪಡಿಸಿಕೊಳ್ಳಲು ಆಗುವುದಿಲ್ಲ. ಅವರ ಮನವೊಲಿಸಬೇಕಾಗುತ್ತದೆ ಎಂದು ತಿಳಿಸಿದರು. ಒಂದು ಲೇಔಟ್ನಲ್ಲಿ ಪಾರ್ಕಿಂಗ್, ಸ್ಟೇಡಿಯಂ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳೂ ಇರಬೇಕು. ಈಗಾಗಲೇ ಆನೇಕಲ್ನಲ್ಲಿ ಸುಮಾರು ಒಂದು ಸಾವಿರ ಎಕರೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿರುವ ಲೇಔಟ್ ನಿರ್ಮಾಣ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದೇವೆ ಎಂದರು.

ಶೇ. 50:50 ಅನುಪಾತದಲ್ಲಿ ಭೂಸ್ವಾದೀನ ಮಾಡಿಕೊಳ್ಳಬೇಕೇ ಇಲ್ಲವೇ ನಾವೇ ಖರೀದಿ ಮಾಡಬೇಕೆ ಎಂಬುದರ ಬಗ್ಗೆಯೂ ಆಲೋಚನೆಯಿದೆ. ಗೃಹಮಂಡಳಿಯಿಂದ ಭೂ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಹಿಂದಿನ ಸರ್ಕಾರ 71 ಎಕರೆಯಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿತ್ತು. ಇಷ್ಟು ಸಣ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲದ ಕಾರಣ ನೆನೆಗುದಿಗೆ ಬಿದ್ದಿದೆ. ಒಟ್ಟು 9,460 ಅರ್ಜಿಗಳು ಬಂದಿವೆ. ಅರ್ಜಿದಾರರಿಂದ ಒಟ್ಟು 26 ಕೋಟಿ 80 ಲಕ್ಷ ಠೇವಣಿ ಹಣವನ್ನು ಸಂಗ್ರಹಿಸಿ, ಯೂನಿಯನ್ ಬ್ಯಾಂಕ್ ಇಂಡಿಯಾದಲ್ಲಿ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

RELATED ARTICLES

Latest News