ನವದೆಹಲಿ, ಮಾ.19- ಭಯೋತ್ಪಾದಕರ ಒಳನುಸುಳುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಜಮ್ಮುವಿನಾದ್ಯಂತ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆಯ 12 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಷೇಧಿತ ಸಂಘಟನೆಗಳಾದ ಲಷ್ಕರ್- ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಗೆ ಸೇರಿದ ಸಕ್ರಿಯ ಭಯೋತ್ಪಾದಕರು ಅಂತರರಾಷ್ಟ್ರೀಯ ಗಡಿ (ಐಬಿ) ಮತ್ತು ನಿಯಂತ್ರಣ ರೇಖೆ (ಎಲ್ಒಸಿ) ಮೂಲಕ ಭಾರತಕ್ಕೆ ನುಸುಳಿರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ಕಳೆದ ವರ್ಷ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಳನುಸುಳುವಿಕೆಗಳಿಗೆ ಜಮ್ಮು ಪ್ರದೇಶದ ಹಳ್ಳಿಗಳಲ್ಲಿ ನೆಲೆಗೊಂಡಿರುವ ಓವೆರ್ಗ್ರೌಂಡ್ ವರ್ಕರ್ಸ್ (ಒಜಿಡಬ್ಲ್ಯೂ) ಮತ್ತು ಇತರ ಭಯೋತ್ಪಾದಕ ಸಹಚರರು ಅನುಕೂಲ ಮಾಡಿಕೊಟ್ಟರು ಎನ್ನಲಾಗಿದೆ. ಅವರು ಭಯೋತ್ಪಾದಕರಿಗೆ ವ್ಯವಸ್ಥಾಪನಾ ಬೆಂಬಲ, ಆಹಾರ, ಆಶ್ರಯ ಮತ್ತು ಹಣವನ್ನು ಒದಗಿಸುವಲ್ಲಿ ನಿರತರಾಗಿದ್ದರು ಎನ್ನಲಾಗಿದ್ದು, ಈ ಮಾಹಿತಿಯನ್ನಾಧರಿಸಿ ಎನ್ಐಎ ಈ ದಾಳಿ ಸಂಘಟಿಸಿದೆ.