ಬೆಂಗಳೂರು, ಜೂ.7-ದೇಶಾದ್ಯಂತ ಭಾರೀ ಸದ್ದು ಮಾಡಿರುವ ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ(ಎನ್ಐಎ) ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಕಾಲ್ತುಳಿತ ಪ್ರಕರಣವು ದಿನದಿಂದ ದಿನಕ್ಕೆ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿರುವುದರಿಂದ ಎನ್ಐಎ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದಿನ ವಾರದಿಂದ ಪ್ರಾರಂಭಿಸಲಿದೆ ಎಂದು ಗೊತ್ತಾಗಿದೆ.
ಇದು ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಇದರ ಹಿಂದೆ ಯಾವುದಾದರೂ ಸಂಘಟನೆಗಳ ಕೈವಾಡ ಇದೆಯೇ ಎಂಬುದನ್ನು ಪತ್ತೆ ಮಾಡಲು ಎನ್ಐಎ ಮುಂದಾಗಿದೆ.
ಮೂಲಗಳ ಪ್ರಕಾರ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕೆಲವು ಅಧಿಕಾರಿಗಳ ಮೇಲೆ ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿರುವವರ ಒತ್ತಡ ಹಾಕಿಯೇ ಆಯೋಜನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಏಕಾಏಕಿ ಕಾರ್ಯಕ್ರಮವನ್ನು ಆಯೋಜಿಸಿದ್ದರ ಉದ್ದೇಶ?, ಕಾರ್ಯಕ್ರಮದಲ್ಲಿ ಪ್ರಭಾವಿ ಸಚಿವರ ಪುತ್ರರೊಬ್ಬರು ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಎದುರಾಗಿದೆ.
ಹೀಗಾಗಿ ಪ್ರಕರಣದ ಹಿಂದೆ ಯಾವುದಾದರೂ ಸಂಘಟನೆಗಳ ಕೈವಾಡ, ಸಮಾಜಘಾತುಕ ಶಕ್ತಿಗಳ ಶಾಮೀಲು ಕುರಿತಂತೆ ಎನ್ಐಎ ತನಿಖೆ ನಡೆಸಲು ಮುಂದಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಡಿಸಿಪಿ ಶೇಖರ್ ಅವರುಗಳ ದೂರವಾಣಿ ಕರೆಗಳ ವಿವರವನ್ನು ನೀಡುವಂತೆ ಎನ್ಐಎ ಈಗಾಗಲೇ ಸೂಚನೆ ಕೊಟ್ಟಿದೆ.
ಕಾರ್ಯಕ್ರಮ ಆಯೋಜಿಸಲು ಕೆಲವು ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರದ ಮಟ್ಟದಲ್ಲಿ ಪ್ರಭಾವಶಾಲಿಯಾಗಿರುವ ಇಬ್ಬರು ಒತ್ತಡ ಹಾಕಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂಬ ಆರೋಪವೂ ಇದೆ. ಆರ್ಸಿಬಿ ವಿಜೇತರಾದ ನಂತರ ಬೆಂಗಳೂರಿಗೆ ಮುಂಜಾನೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ನಿರೀಕ್ಷೆಗೂ ಮೀರಿದ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದತ್ತ ದೌಡಾಯಿಸಿದ್ದರು.
ಇಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಆಗಮಿಸಿದ್ದರೂ ಭದ್ರತೆಯನ್ನು ಏಕೆ ಒದಗಿಸಲಾಗಲಿಲ್ಲ? ಉದ್ದೇಶಪೂರಕವಾಗಿ ನಿರ್ಲಕ್ಷ್ಯ ಮಾಡಲಾಯಿತೇ? ಇಲ್ಲವೇ ಆಕಸ್ಮಿಕವಾಗಿ ನಡೆದ ಘಟನೆಯೇ ಎಂಬುದರ ಬಗ್ಗೆ ವಿಸ್ತ್ರತ ತನಿಖೆಯನ್ನು ಎನ್ಐಎ ಕೈಗೆತ್ತಿಕೊಳ್ಳಲಿದೆ.
ಭಾರೀ ವಿರೋಧ:
ರಾಜ್ಯದಲ್ಲೇ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಮೂವರು ಐಪಿಎಸ್ ಅಧಿಕಾರಿಗಳನ್ನು ಕರ್ತವ್ಯಲೋಪ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಿದ ಸರ್ಕಾರದ ಕ್ರಮಕ್ಕೆ ಅಧಿಕಾರಿಗಳ ವರ್ಗ ಭಾರೀ ವಿರೋಧ ವ್ಯಕ್ತಪಡಿಸಿದೆ.
ಸರ್ಕಾರದ ನಿರ್ದೇಶನವನ್ನು ಪಾಲನೆ ಮಾಡುವುದಷ್ಟೇ ನಮ್ಮ ಕರ್ತವ್ಯ. ಕಾರ್ಯಕ್ರಮ ಆಯೋಜನೆ ಬೇಡವೆಂದರೂ ಸ್ಪಷ್ಟವಾಗಿ ಸೂಚನೆ ಕೊಡಲಾಗಿತ್ತು. ಆದರೂ ಕೆಲವರು ಒತ್ತಡ ಹಾಕಿ ಭದ್ರತೆ ಒದಗಿಸುವುದಷ್ಟೇ ನಿಮ್ಮ ಕೆಲಸವೆಂದು ಹೇಳಿದ ಮೇಲೆ ನಾವೇನು ಮಾಡಲು ಸಾಧ್ಯ? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಗುಪ್ತಚರ ವಿಭಾಗದ ಮುಖ್ಯಸ್ಥ ಹೇಮಂತ್ ನಿಂಬಾಲ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ಕುಮಾರ್, ಡಿಸಿಪಿ ಶೇಖರ್ ಅವರುಗಳ ಮೇಲೆ ಯಾರಾರು ಒತ್ತಡ ಹಾಕಿದ್ದಾರೆ? ಅವರ ಮೊಬೈಲ್ ಕರೆಗಳನ್ನು ತನಿಖೆ ನಡೆಸಿದರೆ ಸತ್ಯಾಂಶ ಬಯಲಾಗುತ್ತದೆ.
ಈ ಪ್ರಕರಣವನ್ನು ಹೈಕೋರ್ಟ್ ಉಸ್ತುವಾರಿಯಲ್ಲಿ ಇಲ್ಲವೇ ಎನ್ಐಎ ಹಾಗೂ ಸಿಬಿಐನಿಂದ ತನಿಖೆ ನಡೆಸಿದರೆ ಮಾತ್ರ ಆಸಲಿ ಸತ್ಯ ಹೊರಬೀಳತ್ತದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತಾಗಿದೆ ಎಂದು ಅಧಿಕಾರಿಗಳ ಮಟ್ಟದಲ್ಲೇ ಅಸಮಾಧಾನ ವ್ಯಕ್ತವಾಗುತ್ತಿದೆ.