ಬೆಂಗಳೂರು, ಫೆ.24- ರಾಜ್ಯ ಸರ್ಕಾರ ವೈಟ್ ಟಾಪಿಂಗ್ ಹೆಸರಲ್ಲಿ ದುಡ್ಡು ಹೊಡೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು. ಆರೋಪಿಸಿದರು.
ದಾಸರಹಳ್ಳಿ ವಿಧಾನಭಾ ಕ್ಷೇತ್ರದ ಚೊಕ್ಕಸಂದ್ರದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಮತ್ತು ಬೂತ್ ಸಮಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹೆಚ್ಚು ತೆರಿಗೆ ವಸೂಲಿ ಮಾಡುವ ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಇದು ರಾಜ್ಯದ ಪರಿಸ್ಥಿತಿಯಾಗಿದೆ. ಆ ದೇವರೇ ಬಂದರೂ ಅಭಿವೃದ್ಧಿ ಸಾದ್ಯವಿಲ್ಲವೆಂದು ಡಿಸಿಎಂ ಹೇಳುತ್ತಾರೆ. ಸತ್ಯವಾದ ಮಾತಿದು. ಬೆಂಗಳೂರು ನಗರವನ್ನು ಆ ರೀತಿ ಸೃಷ್ಟಿ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಆ ಭಗವಂತ ಬಂದರೂ ಈ ಟ್ರಾಫಿಕ್ನಲ್ಲಿ ಮನೆಗೆ ತಲುಪಲು ಕಷ್ಟ ಪಡಬೇಕಾದ ವಾತಾವರಣವನ್ನು ಈ ಸರ್ಕಾರ ಸೃಷ್ಟಿ ಮಾಡಿದೆ. ಎಐ ತಂತ್ರಜ್ಞಾನ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ಕಾಲದಲ್ಲಿ ಕ್ರಾಂತಿ ಆಯಿತು. ಆದರೆ ಐಟಿ ಕಂಪನಿಗಳಿಗೆ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಎರಡು- ಮೂರು ತಿಂಗಳು ಆ ಕಡೆ ಈ ಕಡೆ ಆಗಬಹುದು ಎಂದು ಮುಖ್ಯಮಂತ್ರಿ. ಉಪಮುಖ್ಯಮಂತ್ರಿ ಹೇಳುತ್ತಾರೆ. ಮಾತು ಕೊಟ್ಟಿದ್ದು ಯಾರು? ಒಂದು ಕಡೆ ನಾವು ನುಡಿದಂತೆ ನಡೆಯುತ್ತೇವೆ ಅಂತಾರೆ. ಯಾವ ರೀತಿ ನುಡಿದಂತೆ ನಡೆಯುತ್ತಿದ್ದಾರೆ ಎಂಬುದು ಕಣ್ಣ ಮುಂದೆ ಕಾಣುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಈಗಾಗಲೇ ಕಾಂಗ್ರೆಸ್ ಸರ್ಕಾರ ನೀರಿನ ದರ, ಹಾಲಿನ ದರ, ಮೆಟ್ರೋ ರೈಲು ಪ್ರಯಾಣ ದರವನ್ನು ಹೆಚ್ಚಿಗೆ ಮಾಡಿದ್ದಾರೆ. ತೈಲ ಬೆಲೆ ಏರಿಕೆ ಮಾಡಬೇಕೆಂಬ ಚಿಂತನೆ ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ನಗರ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಈ ಸದಸ್ಯ ಅಭಿಯಾನ ಮಹತ್ವದಾಗಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯಟಿ.ಎ.ಶರವಣ, ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ದಾಸರಹಳ್ಳಿ ನಗರಸಭೆ ಮಾಜಿ ಅಧ್ಯಕ್ಷ ಡಾ. ಅಂದಾನಪ್ಪ, ದಾಸರಹಳ್ಳಿ ಜೆಡಿಎಸ್ ಘಟಕದ ಅಧ್ಯಕ್ಷ ಮುನಿಸ್ವಾಮಿ, ಬೆಂಗಳೂರು ನಗರ ವಿಭಾಗದ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಛಾಯಾ, ಮುಖಂಡರಾದ ಕೆ.ಹನುಮಂತರಾಯಪ್ಪ, ಮಂಜೀಗೌಡ ಅವರು, ಭರತ್ ಗುಂಡಪ್ಪ, ಬಿ. ಬಲರಾಮ್, ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಂದನ್ ದೊರೆ ಮೊದಲಾದವರು ಉಪಸ್ಥಿತರಿದ್ದರು.