ನವದೆಹಲಿ.ಜು.22- ಸಹೋದ್ಯೋಗಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾಪ್ರಿಯ ಅವರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಸದ್ಯದಲ್ಲಿ ಯೆಮನ್ನಿನಿಂದ ಬಿಡುಗಡೆಯಾಗಿ ತಾನ್ನಾಡಿಗೆ ಅವರು ಮರಳಲಿದ್ದಾರೆ.
ಯೆಮನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳ ಸತತ ಪ್ರಯತ್ನದ ಫಲವಾಗಿ, ಇನ್ನೇನು ನೇಣಿನ ಕುಣಿಕೆಗೆ ಕೊರಳೊಡ್ಡಬೇಕಿದ್ದ ನಿಮಿಷಾಪ್ರಿಯ ಅವರ ಮರಣದಂಡನೆಯನ್ನು ರದ್ದು ಮಾಡಲಾಗಿದೆ ಎಂದು ಸುವಾರ್ತ ಬೋಧಕ ಡಾ.ಕೆ.ಎ.ಪಾಲ್ ಅವರು ಯೆಮನ್ ದೇಶದ ಸನಾದಿಂದ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿಮಿಷಾಪ್ರಿಯ ಅವರನ್ನು ಉಳಿಸಿಕೊಳ್ಳಲು ಅವರಿಗಾಗಿ ಕೊನೆ ಕ್ಷಣದವರೆಗೂ ಹೋರಾಟ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಹಾಗೂ ಯೆಮನ್ ಸರ್ಕಾರಕ್ಕೆ ಹೃತೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ. ಕಳೆದ ಹತ್ತು ದಿನಗಳಿಂದ ಹಲವಾರು ನಾಯಕರು ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.
ನಿಮಿಷಾಪ್ರಿಯ ಮರಣದಂಡನೆ ರದ್ದಾಗಿದೆ. ಈ ದೊಡ್ಡ ಯಶಸ್ಸನ್ನು ಸಾಧಿಸಲು ಶ್ರಮಿಸಿದ ಎಲ್ಲ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರ ದಯೆಯಿಂದ ಅವರನ್ನು ಭಾರತಕ್ಕೆ ಕರೆದೊಯ್ಯಲಾಗುವುದು. ರಾಜತಾಂತ್ರಿಕರನ್ನು ಕಳುಹಿಸಿದ್ದು, ಸುರಕ್ಷಿತವಾಗಿ ಕರೆತರಲು ತಯಾರಿ ನಡೆಸಿದ್ದಕ್ಕಾಗಿ ನಾನು ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ನಿಮಿಷಾಪ್ರಿಯ ಅವರನ್ನು ಓಮನ್, ಜೆಡ್ಡಾ, ಈಜಿಪ್ಟ್, ಇರಾನ್ ಅಥವಾ ಟರ್ಕಿ ಮೂಲಕ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನೆಲೆ
ನಿಮಿಷಾಪ್ರಿಯ ಯೆಮನ್ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್, ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾಪ್ರಿಯ ಯೆಮನ್ ನಾಗರಿಕ ತಲಾಲ್ ಅಬ್ದ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ತಲಾಲ್ ಅವರ ಬೆಂಬಲದೊಂದಿಗೆ ನಿಮಿಷಾ 2015ರ ಏಪ್ರಿಲ್ನಲ್ಲಿ ವಿದೇಶದಲ್ಲಿ ತನ್ನ ಕನಸಿನ ಚಿಕಿತ್ಸಾಲಯ ತೆರೆದಿದ್ದರು. ತಲಾಲ್ ಕ್ಲಿನಿಕ್ನಲ್ಲಿ ಶೇ.33ರಷ್ಟು ಪಾಲನ್ನು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದ್ದ. ಆಕೆಯ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದ, ಕಾನೂನುಬದ್ದವಾಗಿ ಮದುವೆಯಾಗಿದ್ದೇವೆಂದು ಸೂಚಿಸಲು ವಿವಾಹ ಪ್ರಮಾಣಪತ್ರವನ್ನು ಸಹ ನಕಲಿ ಮಾಡಿದ್ದ. ಮಹಿ ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿಮಿಷಾಪ್ರಿಯ ಆರೋಪಿಸಿದ್ದರು.
2017ರ ಜುಲೈನಲ್ಲಿ ನಿಮಿಷಾಪ್ರಿಯ ಜೈಲಿಗೆ ಭೇಟಿ ನೀಡಿದಾಗ, ತನ್ನ ಪಾಸ್ಪೋರ್ಟ್ ಅನ್ನು ಮರಳಿ ಪಡೆಯಲು ಮಟ್ಟಿಗೆ ನಿದ್ರಾಜನಕ ಇನ್ ಜೆಕ್ಷನ್ ಚುಚ್ಚಿದರು. ಮದ್ದಿನ ಪ್ರಮಾಣ ಅತಿಯಾದ್ದರಿಂದ ಆತ ಮೃತಪಟ್ಟಿದ್ದ. ಮತ್ತೊಬ್ಬ ನರ್ಸ್ ನೆರವು ಪಡೆದು ಮೃತದೇಹ ವಿಲೇವಾರಿಗೆ ಮುಂದಾಗಿದ್ದರು. ದೇಹವನ್ನು ಕತ್ತರಿಸಿ ನೀರಿನ ಟ್ಯಾಂಕ್ನಲ್ಲಿ ಭಾಗಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದ. ಇಬ್ಬರೂ ತಲೆಮರೆಸಿಕೊಂಡಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸಿದರು.
ಕೊಲೆ ಪ್ರಕರಣದಲ್ಲಿ ನಿಮಿಷಾಪ್ತಿ ಯಾಳನ್ನು ಬಂಧಿಸಿ ಯೆಮನ್ ನಲ್ಲಿ ವಿಚಾರಣೆ ನಡೆಸಲಾಯಿತು. 2020 ರಲ್ಲಿ, ಸ್ಥಳೀಯ ನ್ಯಾಯಾಲಯವು ಆಕೆಗೆ ಒಮ್ಮೆ ಅಲ್ಲ, ಮೂರು ಬಾರಿ ಮರಣದಂಡನೆ ವಿಧಿಸಿತು. ನಂತರ ಮೇಲ್ಮನವಿನ್ಯಾಯಾಲಯವು ಒಂದು ಶಿಕ್ಷೆಯನ್ನು ರದ್ದುಗೊಳಿಸಿತು. ಆದಾಗ್ಯೂ, ದೇಶದ ಸುಪ್ರೀಂಕೋರ್ಟ್ ಉಳಿದ ಎರಡು ಶಿಕ್ಷೆಯನ್ನು ಎತ್ತಿಹಿಡಿಯಿತು. ಯೆಮನ್ ಅಧ್ಯಕ್ಷರಶಾದ್ ಅಲ್-ಅಲಿಮಿ, ಕಳೆದ ವರ್ಷ ಆಕೆಗೆ ಮರಣದಂಡನೆಯನ್ನು ಅನುಮೋದಿಸಿದರು. ಪ್ರಿಯಾ ಪ್ರಸ್ತುತ ಸನಾ ಕೇಂದ್ರ ಜೈಲಿನಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ, ಹೌತಿ ನಿಯಂತ್ರಿತ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್ನ ಅಧ್ಯಕ್ಷ ಮಡ್ಡಿ ಅಲ್-ಮಶಾತ್ ಅವರು ಮರಣದಂಡನೆಯನ್ನು ಅನುಮೋದಿಸಿದರು.
ಅಂದಿನಿಂದ ಆದೇಶವು ಪ್ರಾಸಿಕ್ಯೂಟರ್ ಬಳಿಯೇ ಇತ್ತು. ಪ್ರಕರಣ ಮತ್ತಷ್ಟು ಸೂಕ್ಷ್ಮತೆ ಪಡೆದುಕೊಂಡು ಭಾರತೀಯ ಅಧಿಕಾರಿಗಳು ಅವರೊಂದಿಗೆ ಮತ್ತು ಯೆಮನ್ನಲ್ಲಿರುವ ಪ್ರಾಸಿಕ್ಯೂಟರ್ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸಿದ್ದರು. ಭಾರತದಲ್ಲಿರುವ ಮುಸ್ಲಿಂ ಧರ್ಮಗುರುಗಳು ಸಹ ಯೆಮನ್ ಮುಖಂಡರನ್ನು ಸಂಪರ್ಕಿಸಿ ಶಿಕ್ಷೆ ರದ್ದುಗೊಳಿಸಲು ಪ್ರಯತ್ನಿಸಿದ್ದರಿಂದ ಸ್ಥಳೀಯ ಅಧಿಕಾರಿಗಳು ನಿಮಿಷಾಪ್ರಿಯಾರ ಮರಣದಂಡನೆಯನ್ನು ಮುಂದೂಡಿದ್ದರು.ಇದೀಗ ನಿಮಿಷಾಪ್ರಿಯ ಅವರಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ.