ನವದೆಹಲಿ,ಜೂ.10- ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಗಳಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಕೆಲ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ. ಅದರಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುವ ಕುರಿತು ತಮಗೆ ಮಾಹಿತಿ ಇಲ್ಲ ಎಂದರು.
ತಮ್ಮದು ದಿಢೀರ್ ಪ್ರವಾಸ ಅಲ್ಲ. ಕೇಂದ್ರ ಸಚಿವರನ್ನು ಭೇಟಿಯಾಗುವುದು ಪೂರ್ವ ನಿರ್ಧರಿತ ವೇಳಾಪಟ್ಟಿ ಇತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಹೈಕಮಾಂಡ್ ಅನ್ನು ಭೇಟಿಯಾಗಲು ಆಗಮಿಸಿದ್ದಾರೆ ಎಂದರು.
ಕಾಲ್ತುಳಿತದಂತಹ ಗಂಭೀರ ಪ್ರಕರಣಗಳು ನಡೆದಾಗ ಹೈಕಮಾಂಡ್ಗೆ ವಿವರಣೆ ನೀಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಂದಿದ್ದಾರೆ. ಅವರಿಬ್ಬರೂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾರೆ. ತಾವು ಹೋಗುವುದಿಲ್ಲ ಎಂದರು.
ಕಾಲ್ತುಳಿತ ಪ್ರಕರಣದಲ್ಲಿ ಯಾರ ವೈಫಲ್ಯ ಹಾಗೂ ತಪ್ಪಿತಸ್ಥರು ಯಾರು ಎಂಬುದನ್ನು ತನಿಖಾ ವರದಿ ಬಳಿಕ ನಿರ್ಧರಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. 15 ದಿನ ಅಥವಾ ಒಂದು ತಿಂಗಳ ಒಳಗಾಗಿ ತನಿಖೆಯ ವರದಿ ಸರ್ಕಾರದ ಕೈಸೇರುವ ನಿರೀಕ್ಷೆ ಇದೆ. ಈ ಘಟನೆ ಬಗ್ಗೆ ಹೊಂದಾಣಿಕೆ ಕೊರತೆ ಇದೆ ಎಂಬುದು ಸರಿಯಲ್ಲ. ಘಟನೆಯಂತೂ ಆಗಿದೆ. ಅದನ್ನು ಸರಿಪಡಿಸುವತ್ತ ಗಮನ ಹರಿಸುತ್ತಿದ್ದಾರೆ ಎಂದರು.