ಬೆಂಗಳೂರು, ಸೆ.15- ಇದೇ 22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಶಿಕ್ಷಕರು ದಸರಾ ರಜೆಯಿಂದ ವಂಚಿತರಾಗಲಿದ್ದಾರೆ. ದಸರಾ ರಜೆ ಹೋಗಲಿ ಸಮೀಕ್ಷೆಯಲ್ಲಿ ಭಾಗಿಯಾಗುತ್ತಿರುವ ಶಿಕ್ಷಕರಿಗೆ ಗೌರವಧನವನ್ನು ನೀಡುವುದಿಲ್ವಂತೆ. ಇದರ ಜೊತೆಗೆ ಗಳಿಕೆ ರಜೆಯೂ ಇಲ್ವಂತೆ.ಸರ್ಕಾರದ ಈ ನಡೆಗೆ ಶಿಕ್ಷಕ ವೃಂದ ಭಾರಿ ಅಸಮಧಾನ ವ್ಯಕ್ತಪಡಿಸಿದೆ.
ಸಮೀಕ್ಷೆಯಲ್ಲಿ ಭಾಗಿಯಾಗಲಿರುವ 1.70 ಲಕ್ಷ ಶಿಕ್ಷಕರಿಗೆ ಸೆ. 19 ರವರೆಗೂ ತರಬೇತಿ ನೀಡಲಾಗುವುದು.ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಗಳಿಕಾ ರಜೆ ಸೌಲಭ್ಯ ನೀಡಬೇಕೆಂಬ ನಿಯಮವಿದೆ..ಹೀಗಿದ್ದರೂ ಸಮೀಕ್ಷೆಯಲ್ಲಿ ಭಾಗಿಯಾಗುವ ಶಿಕ್ಷಕರಿಗೆ ಗಳಿಕೆ ರಜೆ ನೀಡದಿರಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ 46,757 ಸರ್ಕಾರಿ ಶಾಲೆಗಳಿದ್ದು, 1.77 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 2025-26 ರಲ್ಲಿ 123 ರಜೆಗಳಿದ್ದು, 242 ಶಾಲಾ ಕರ್ತವ್ಯ ದಿನಗಳಿವೆ. ಹೀಗಿದ್ದರೂ ಸರ್ಕಾರ ನಮ ಮೇಲೆ ಯಾಕೆ ಈ ರೀತಿ ಕೋಪ ತೀರಿಸಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಶಿಕ್ಷಕರು.ಈಗಲೂ ಕಾಲ ಮಿಂಚಿಲ್ಲ ಶಿಕ್ಷಕರ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಶಿಕ್ಷಕ ಸಮುದಾಯ ಆಗ್ರಹಿಸಿದೆ.