ನವದೆಹಲಿ,ಜೂ.24- ಶಾಸಕ ಬಿ.ಆರ್.ಪಾಟೀಲ್, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ನೇರವಾಗಿ ಆರೋಪ ಮಾಡಿಲ್ಲ. ಸಚಿವರ ಕಚೇರಿಯಲ್ಲಿ ಲಂಚ ಕೇಳಿದರೆ ಅದರ ಬಗ್ಗೆ ತನಿಖೆಯಾಗಬೇಕು. ಆದರೆ ಈ ಕಾರಣಕ್ಕೆ ಜಮೀರ್ ರಾಜೀನಾಮೆ ಪಡೆಯುವುದು ಸರಿಯಲ್ಲ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ಅಭಿಪ್ರಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ವ್ಯವಸ್ಥೆಯ ಭಾಗವಾಗಿದೆ. ಇಲ್ಲಿ ಏನೂ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಶಾಸಕರ ಸಂಕಷ್ಟಗಳು ನಮಗೆ ಅರ್ಥವಾಗುತ್ತವೆ. ಶಾಸಕರಲ್ಲಿ ಸಣ್ಣಪುಟ್ಟ ಅತೃಪ್ತಿ ಅಸಮಾಧಾನಗಳಿವೆ. ಆದರೆ ಅದು ತೀವ್ರ ಸ್ವರೂಪಕ್ಕೆ ಇಲ್ಲ ಎಂದಿದ್ದಾರೆ.ಹಿರಿಯ ನಾಯಕರಾದ ಬಿ.ಆರ್.ಪಾಟೀಲ್ ಸಚಿವರ ಮೇಲೆ ಆರೋಪ ಮಾಡಿಲ್ಲ. ಸಚಿವ ಜಮೀರ್ ಅಹಮದ್ ಖಾನ್ ಭ್ರಷ್ಟರು, ಲಂಚ ಪಡೆದಿದ್ದಾರೆ ಎಂದು ಹೇಳಿಲ್ಲ. ರಾಜೀವ್ಗಾಂಧಿ ವಸತಿ ನಿಗಮದಲ್ಲಿ ಶಾಸಕರು ಕೊಟ್ಟ ಪತ್ರಗಳಿಗೆ ಮನೆಗಳು ಮಂಜೂರಾಗಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಣ ಕೊಟ್ಟು ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಶಾಸಕರಿಗೆ ಮನೆಗಳನ್ನು ಕೊಡುವ ಅಧಿಕಾರವಿಲ್ಲ. ಈಗಾಗಲೇ ಕಾನೂನು ತಿದ್ದುಪಡಿ ಮಾಡಿ ಗ್ರಾಮ ಪಂಚಾಯಿತಿಗಳಿಗೆ ಆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ. ಹೀಗಾಗಿ ಕೆಳ ಹಂತದಲ್ಲಿ ಏನೇನೋ ನಡೆಯುತ್ತಿರುತ್ತದೆ. ಶಾಸಕರು ಪತ್ರ ಕೊಟ್ಟರೆ ಮನೆಗಳನ್ನು ಕೊಡುತ್ತಾರೆ ಎಂಬುದು ತಪ್ಪು ತಿಳಿವಳಿಕೆ. ಈ ವಿಚಾರವಾಗಿ ಬಿ.ಆರ್.ಪಾಟೀಲರಿಗೆ ಮಾಹಿತಿ ಇದ್ದಂತಿಲ್ಲ ಎಂದರು.
ಗ್ರಾಮಸಭೆಗಳನ್ನು ನಡೆಸಿ ಸಮೀಕ್ಷೆ ಮೂಲಕ ಗ್ರಾಮ ಪಂಚಾಯಿತಿ ಮನೆಗಳನ್ನು ಹಂಚಿಕೆ ಮಾಡುತ್ತದೆ. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಆಶ್ರಯ ಸಮಿತಿಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ನಿಯಂತ್ರಣ ಇಲ್ಲದಂತಾಗಿದೆ. ಹಣ ಕೊಟ್ಟು ಮನೆಗಳನ್ನು ಮಂಜೂರು ಮಾಡಿಸುವ ಪ್ರಕರಣದಲ್ಲಿ ನಿರ್ದಿಷ್ಟವಾದ ದೂರು ನೀಡಿದರೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯನವರ ಸರ್ಕಾರ ವರ್ಗಾವಣೆಯಲ್ಲಿ ಪಾರದರ್ಶಕತೆ ತಂದಿದೆ. ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ವಾಣಿಜ್ಯ ತೆರಿಗೆ, ನೋಂದಣಿ ಇಲಾಖೆಗಳಲ್ಲಿ ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಶಾಸಕರು, ಸಚಿವರ ಪತ್ರಗಳನ್ನು ಆಧರಿಸಿ ವರ್ಗಾವಣೆ ಮಾಡುವ ಪದ್ಧತಿಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ವರ್ಗಾವಣೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಬಜೆಟ್ನಲ್ಲೇ ಕೌನ್ಸಿಲಿಂಗ್ ಪದ್ಧತಿಯನ್ನು ಘೋಷಿಸಲಾಗಿದೆ ಎಂದರು.
ಭ್ರಷ್ಟಾಚಾರ ಮೊದಲಿನಿಂದಲೂ ನಡೆಯುತ್ತಿದೆ. ಅದನ್ನು ತೊಡೆದು ಹಾಕಲಾಗುವುದು. ಬಿ.ಅರ್.ಪಾಟೀಲ್ರವರು ನಿರ್ದಿಷ್ಟ ಉಲ್ಲೇಖದೊಂದಿಗೆ ದೂರು ನೀಡಬೇಕು. ಅದರ ಬಳಿಕ ವಿಚಾರಣೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಅವಕಾಶ ಇದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಏನೆಲ್ಲಾ ನಡೆದಿದೆ ಎಂಬುದರ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಯವರಿಗೂ ನಾನು ಮನವಿ ಮಾಡಿದ್ದೇನೆ. ಇಂತಹುದನ್ನು ತಡೆಯಲು ಶಾಸಕರು, ಸಚಿವರು, ಜನರ ಸಹಕಾರ ಅಗತ್ಯ ಇದೆ ಎಂದರು.
ಸಚಿವ ಜಮೀರ್ ಅಹಮದ್ ಖಾನ್ ಇಂತಹ ವಿಚಾರಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರು ಅತ್ಯಂತ ದಿಲ್ದಾರ್ ಮತ್ತು ಶಾನ್ದಾರ್ ವ್ಯಕ್ತಿ. ಬಡವರಿಗೆ ಸಹಾಯ ಮಾಡುವುದರಲ್ಲಿ ಮೊದಲಿಗರು. ಅತ್ಯಂತ ಸಹೃದಯಿ. ನನ್ನ ಮತ್ತು ಅವರ ನಡುವೆ ಹೆಚ್ಚಿನ ಆತೀಯತೆ ಇಲ್ಲದೇ ಹೋದರೂ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಜಮೀರ್ರವರು ರಾಜೀನಾಮೆ ನೀಡಬೇಕೆಂದು ಬೇಳೂರು ಗೋಪಾಲಕೃಷ್ಣ ನೀಡಿರುವ ಹೇಳಿಕೆ ಸರಿಯಲ್ಲ. ಜಮೀರ್ ಸಂಪುಟದಲ್ಲಿ ಮುಂದುವರೆಯಬೇಕು ಎಂದು ಬಸವರಾಜರಾಯರೆಡ್ಡಿ ಪ್ರತಿಪಾದಿಸಿದರು.
ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಕಳೆದ 2 ವರ್ಷಗಳಿಂದಲೂ ಹಣಕಾಸಿನ ಸಮಸ್ಯೆ ಇತ್ತು. ಇದಕ್ಕೆ ಗ್ಯಾರಂಟಿ ಯೋಜನೆಗಳಷ್ಟೇ ಕಾರಣ ಅಲ್ಲ. ಹಿಂದಿನ ಬಿಜೆಪಿ ಸರ್ಕಾರ ಬೇಕಾಬಿಟ್ಟಿ ಯೋಜನೆಗಳನ್ನು ಮಂಜೂರು ಮಾಡಿ ಸಾವಿರಾರು ಕೋಟಿ ರೂ.ಗಳನ್ನು ಬಾಕಿ ಉಳಿಸಿ ಹೋಗಿತ್ತು. ಅದನ್ನು ಇತ್ಯರ್ಥಪಡಿಸಲು ನಮಗೆ ಸಾಕಾಗಿದೆ. ಈಗ ಪರಿಸ್ಥಿತಿ ಸುಧಾರಿಸಿದ್ದು, ಜುಲೈನಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಇನ್ನಷ್ಟು ಹೆಚ್ಚಿನ ಅನುದಾನ ನೀಡಲು ಅವಕಾಶಗಳಾಗುತ್ತವೆ ಎಂದರು.
ಮುಂದಿನ 3 ವರ್ಷಗಳವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಯಾರೂ ಅವರನ್ನು ಅಲುಗಾಡಿಸುವುದಿಲ್ಲ. ಎಲ್ಲಾ ಶಾಸಕರೂ ಸಿದ್ದರಾಮಯ್ಯನವರ ಪರವಾಗಿದ್ದಾರೆ. ಶಾಸಕರ ಹೇಳಿಕೆಗಳು ಸರ್ಕಾರದ ವಿರುದ್ಧ ದಂಗೆ ಅಥವಾ ಸಿದ್ದರಾಮಯ್ಯನವರ ವಿರುದ್ಧ ಎಂದು ಭಾವಿಸಬೇಕಿಲ್ಲ ಎಂದಿದ್ದಾರೆ.
ಗೃಹಸಚಿವ ಪರಮೇಶ್ವರ್ ಯಾವ ಅರ್ಥದಲ್ಲಿ ಸಿದ್ದರಾಮಯ್ಯನವರ ಬಳಿ ಹಣ ಇಲ್ಲ ಎಂದು ಹೇಳಿದ್ದಾರೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಕ್ರಾಂತಿಯಾಗುತ್ತದೆ. ಸಿದ್ದರಾಮಯ್ಯ ಬದಲಾಗುತ್ತಾರೆ ಎಂಬುದು ಮಾನಸಿಕ ನೆಮದಿಗಾಗಿ ಕೆಲವರು ಹೇಳಿಕೊಳ್ಳುವ ವಿಚಾರ. ಒಮೆ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾದರೆ 5 ವರ್ಷ ಅದೇ ವ್ಯಕ್ತಿ ಅಧಿಕಾರದಲ್ಲಿರುತ್ತಾರೆ. ಶೇ.95 ರಷ್ಟು ಶಾಸಕರು ಸಿದ್ದರಾಮಯ್ಯ ಅವರ ಜೊತೆಯಲ್ಲಿದ್ದಾರೆ ಎಂದರು.
ಹೈಕಮಾಂಡ್ ಬಯಸಿದ್ದಾದರೆ ಮತ್ತೊಮೆ ಶಾಸಕಾಂಗ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ನೀಡುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದರು ಎಂದು ಎಲ್ಲರಿಗೂ ಗೊತ್ತಿದೆ. ವಿಜಯೇಂದ್ರ ರಾಜಕೀಯಕ್ಕೆ ಹೊಸಬರು. ಹಗುರವಾಗಿ ಮಾತನಾಡುತ್ತಾರೆ ಎಂದರು.
- ಮರಕ್ಕೆ ಅಪ್ಪಳಿಸಿ ರಸ್ತೆ ವಿಭಜಕ ಹತ್ತಿ ನಿಂತ ಲಾರಿ, ತಪ್ಪಿದ ಅನಾಹುತ
- ಕಾಲ್ನಡಿಗೆಯಲ್ಲಿ ಗಸ್ತು ಕರ್ತವ್ಯ ನಿರ್ವಸುವಂತೆ ಪೊಲೀಸರಿಗೆ ಸೀಮಂತ್ಕುಮಾರ್ಸಿಂಗ್ ಸೂಚನೆ
- ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚಳ : ದೌರ್ಜನ್ಯ ಸಹಿಸುವುದಿಲ್ಲ ಎಂದ ಗೃಹ ಸಚಿವ ಪರಮೇಶ್ವರ್
- ಜು.7ರಂದು ಸಾಮೂಹಿಕ ಪ್ರತಿಭಟನೆಗೆ ಮಹಾನಗರ ಪಾಲಿಕೆಗಳ ನೌಕರರ ನಿರ್ಧಾರ
- ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ರೆ ತಕ್ಷಣವೇ ರಾಜೀನಾಮೆ ನೀಡಲಿ : ವಿಜಯೇಂದ್ರ ಸವಾಲು