ಬೆಂಗಳೂರು, ಜೂ.10- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ಪ್ರಕರಣದಲ್ಲಿ ಯಾರ ತಲೆದಂಡವೂ ಆಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮುಖ್ಯಮಂತ್ರಿಯವರು ಈ ವಿಚಾರವಾಗಿ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದರು.
ಇದು ಯಾರೂ ಊಹೆ ಮಾಡದ ಅನಿರೀಕ್ಷಿತ ಘಟನೆ. ಪ್ರವಾಹದ ಮಾದರಿಯಲ್ಲಿ ಜನ ಆಗಮಿಸಿದ್ದರಿಂದಾಗಿ ದುರ್ಘಟನೆಯಾಗಿದೆ. ಉತ್ತರ ಪ್ರದೇಶದಲ್ಲಿ 129 ಮಂದಿ ಜೀವ ಕಳೆದುಕೊಂಡರು. ಇಂತಹ ಘಟನೆಗಳು ನೋವಿನ ಸಂಗತಿ. ಕುಟುಂಬದವರನ್ನು ಕಳೆದುಕೊಂಡ ನೋವಿನಲ್ಲಿ ಸರ್ಕಾರವೂ ಭಾಗಿಯಾಗಿದೆ ಎಂದರು.
ಕಾಲ್ತುಳಿತದಲ್ಲಿ ಲೋಪಗಳಾಗಿವೆ. ಎಲ್ಲಿ ಆಗಿದೆ. ಯಾರು ಹೊಣೆ ಎಂಬ ಬಗ್ಗೆ ಸಿಐಡಿ ಸೇರಿದಂತೆ ಹಲವು ರೀತಿಯ ತನಿಖೆಗಳಾಗುತ್ತಿದೆ. ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ.
ಪೈಪೋಟಿಯೂ ಸಹಜ. ಹೀಗಾಗಿ ವಿಧಾನಪರಿಷತ್ ನಾಮನಿರ್ದೇಶನದ ಪಟ್ಟಿ ಬಗ್ಗೆ ಚರ್ಚೆ ಮಾಡಲು ಹೈಕಮಾಂಡ್ ಸಿಎಂ, ಡಿಸಿಎಂ ಅವರನ್ನು ದೆಹಲಿಗೆ ಕರೆಸಿಕೊಂಡಿರಬಹುದು ಎಂದು ನಮಗೆ ಮಾಹಿತಿ ಇಲ್ಲ ಎಂದರು. ಉಳಿದಂತೆ ಸಚಿವ ಸಂಪುಟ ಪುನರ್ ರಚನೆ ಹಾಗೂ ಇತರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.