ಮೈಸೂರು,ಅ.1-ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಭದ್ರತಾ ದೃಷ್ಟಿಯಿಂದ ಜಂಬು ಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತುಗೆ ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ಜಾರಿ ಮಾಡಿದೆ.
ಪಂಜಿನ ಕವಾಯತು ಹಾಗೂ ಜಂಬೂ ಸವಾರಿಯನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಕಡ್ಡಾಯವಾಗಿ ನಿಗದಿತ ಪಾಸ್ ಇರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು.
ಪಾಸ್ ಇಲ್ಲದವರಿಗೆ ಅವಕಾಶವಿರುವುದಿಲ್ಲ. ಕಾರ್ಯಕ್ರಮಕ್ಕೆ ಬರುವವರು ನಿಗಧಿತ
ಸ್ಥಳದಲ್ಲೇ ತಮ ವಾಹನಗಳನ್ನು ನಿಲುಗಡೆ ಮಾಡಬೇಕು. ಜಂಬೂ ಸವಾರಿ ಸಾಗುವ ರಸ್ತೆಗಳಲ್ಲಿ ಹಲವು ಶಿಥಿಲಗೊಂಡ ಕಟ್ಟಡಗಳಿದ್ದು, ಈ ಬಾರಿ ಕಟ್ಟಡಗಳ ಮೇಲೆ ಏರಿ ವೀಕ್ಷಣೆ ನಿರ್ಬಂಧಿಸಲಾಗಿದೆ.
ಉಳಿದಂತೆ ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಹಾಗೂ ಇತ್ತೀಚೆಗೆ ನಟ ವಿಜಯ್ ರ್ಯಾಲಿಯಲ್ಲಿ ನಡೆದ ಅವಘಡಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ತಿಳಿಸಿದ್ದಾರೆ.