Sunday, July 7, 2024
Homeರಾಷ್ಟ್ರೀಯಸತತ 2ನೇ ಬಾರಿಗೆ ಸ್ಪೀಕರ್‌ ಗದ್ದುಗೆ ಅಲಂಕರಿಸಿದ ಓಂ ಬಿರ್ಲಾ, ಇಂಡಿ ಕೂಟಕ್ಕೆ ಮುಖಭಂಗ

ಸತತ 2ನೇ ಬಾರಿಗೆ ಸ್ಪೀಕರ್‌ ಗದ್ದುಗೆ ಅಲಂಕರಿಸಿದ ಓಂ ಬಿರ್ಲಾ, ಇಂಡಿ ಕೂಟಕ್ಕೆ ಮುಖಭಂಗ

ನವದೆಹಲಿ,ಜೂ.26- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌‍ಡಿಎ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದ್ದ ಲೋಕಸಭೆಯ ಸ್ಪೀಕರ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಅವರು 2ನೇ ಬಾರಿಗೆ ಆಯ್ಕೆಯಾಗಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ.

ಎರಡನೇ ಬಾರಿಗೆ ಸ್ಪೀಕರ್‌ ಆಗಿ ಆಯ್ಕೆಯಾಗುವ ಮೂಲಕ ಓಂ ಬಿರ್ಲಾ ಅವರು ಬಲರಾಮ್‌ ಜಾಖಡ್‌ (1980-89) ನಂತರ ಎರಡು ಪೂರ್ಣ ಅವಧಿಗೆ ಆಯ್ಕೆಯಾದ ಎರಡನೇ ಸ್ಪೀಕರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೋಕಸಭೆಯ ಎರಡನೇ ಸ್ಪೀಕರ್‌ ಎಂ.ಎ.ಅಯ್ಯಂಗಾರ್‌ ಮತ್ತು ಗುರ್ದಿಯಾಲ್‌ ಲಲನ್‌ ಸಿಂಗ್‌ ಈ ಹಿಂದೆ ಎರಡು ಬಾರಿ ಈ ಹುದ್ದೆಗೆ ಆಯ್ಕೆಯಾ ಗಿದ್ದರೂ ಅವರ ಎರಡನೇ ಅವಧಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರಲಿಲ್ಲ.

ನಾಲ್ಕು ದಶಕಗಳ ನಂತರ ನಡೆದ ಲೋಕಸಭೆಯ ಸ್ಪೀಕರ್‌ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ ಎಂದು ಲೋಕಸಭೆಯ ಹಂಗಾಮಿ ಸ್ಪೀಕರ್‌ ಭಾರ್ತೃಹರಿ ಮೆಹ್ತಾಬ್‌ ಘೋಷಣೆ ಮಾಡಿದರು.

ಸಂಖ್ಯಾಬಲದ ಕೊರತೆ ಇದ್ದರೂ, ಬಿಜೆಪಿಯ ಮನೋಬಲವನ್ನು ಕುಗ್ಗಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟವು ಕಾಂಗ್ರೆಸ್‌‍ನ ಎಂಟು ಬಾರಿ ಸಂಸರಾಗಿರುವ ಕೆ. ಸುರೇಶ್‌ ಅವರನ್ನು ಸ್ಪೀಕರ್‌ ಹುದ್ದೆಗೆ ಕಣಕ್ಕಿಳಿಸಿತ್ತು. ಈ ಮೂಲಕ ಎನ್‌ಡಿಎ ಮಿತ್ರ ಪಕ್ಷಗಳಲ್ಲಿನ ಒಗ್ಗಟ್ಟನ್ನು ಪರೀಕ್ಷೆಗೆ ಒಳಪಡಿಸಿತ್ತು.

ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌‍ ಸಂಸದ ಕೆ.ಸುರೇಶ್‌ ಅವರನ್ನು ಲೋಕಸಭೆಯ ಸ್ಪೀಕರ್‌ ಆಗಿ ಆಯ್ಕೆ ಮಾಡಲು ಪ್ರಸ್ತಾವನೆಯನ್ನು ಮಂಡಿಸಿದ್ದವು. ಆದರೆ ಧ್ವನಿ ಮತದ ನಂತರ ಸದನವು ಪ್ರಧಾನಿ ನರೇಂದ್ರಮೋದಿ ಅವರ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. 18ನೇ ಲೋಕಸಭೆಯ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು ನಾಯಕರು ಸ್ಪೀಕರ್‌ ಆಸನದ ಸಮೀಪ ತೆರಳಿ ಅಭಿನಂದಿಸಿದರು.

ಇದು ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಬಹಳ ಅಪರೂಪದ ಸ್ನೇಹ ಸಂಬಂಧಕ್ಕೆ ಸಾಕ್ಷಿಯಾಯಿತು. ರಾಜಸ್ಥಾನದ ಕೋಟಾದಿಂದ ಮೂರು ಬಾರಿ ಸಂಸದರಾಗಿರುವ ಓಂ ಬಿರ್ಲಾ ಅವರ ಗೆಲುವನ್ನು ಎನ್‌‍ಡಿಎ ಮಿತ್ರ ಪಕ್ಷಗಳು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದವು.

ಪ್ರಧಾನಿ ಮೋದಿ, ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಬಿರ್ಲಾ ಅವರನ್ನು ಸ್ಪೀಕರ್‌ ಕುರ್ಚಿಯವರೆಗೂ ಜತೆಗೆ ಕರೆದೊಯ್ದರು.

ಬಿಜೆಪಿ ನೇತೃತ್ವದ ಎನ್‌‍ಡಿಎ ಹಾಗೂ ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ಮಾತುಕತೆ ಮುರಿದುಬಿದ್ದಿದ್ದರಿಂದ ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಲೋಕಸಭೆಯ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಾಮಾನ್ಯವಾಗಿ ಈವರೆಗೂ 17 ಲೋಕಸಭೆಯ ಇತಿಹಾಸದಲ್ಲಿ ಸ್ಪೀಕರ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಂಪ್ರದಾಯವಿತ್ತು. ಇದಕ್ಕೂ ಮುನ್ನ ಬೆಳಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಸಂಸತ್‌‍ನ ಕೆಳಮನೆಯಾದ ಲೋಕಸಭೆಯ ಸ್ಪೀಕರ್‌ ಚುನಾವಣೆ ನಡೆಸುವಂತೆ ಪ್ರಸ್ತಾವನೆಯನ್ನು ಮಂಡಿಸಿದರು.

ಓಂ ಬಿರ್ಲಾ ಪರವಾಗಿ ಬಿಜೆಪಿಯಿಂದ ಸೂಚಕರಾಗಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌‍, ಅಮಿತ್‌ ಷಾ, ಜೆಡಿಎಸ್‌‍ನ ಎಚ್‌‍.ಡಿ.ಕುಮಾರಸ್ವಾಮಿ, ಎಲ್‌‍ಜೆಪಿಯ ಚಿರಾಗ್‌ ಪಾಸ್ವಾನ್‌‍, ಜೆಡಿಯುನ ಲಲನ್‌ ಸಿಂಗ್‌, ಅನುಪ್ರಿಯ ಪಾಟೀಲ್‌ ಸೇರಿದಂತೆ ಮತ್ತಿತರರು ಬೆಂಬಲ ಸೂಚಿಸಿದರು.

ಇತ್ತ ಕಾಂಗ್ರೆಸ್‌‍ನ ಸುರೇಶ್‌ ಅವರಿಗೆ ಎಸ್‌‍ಪಿ , ಡಿಎಂಕೆ, ಟಿಎಂಸಿ, ಎನ್‌‍ಸಿ, ಶಿವಸೇನೆ, ಮತ್ತಿತರ ಪಕ್ಷಗಳ ಮುಖಂಡರು ಸೂಚಕರಾಗಿ ತಮ್ಮ ಬೆಂಬಲವನ್ನು ಘೋಷಣೆ ಮಾಡಿದರು. ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತಾರೂಢ ಎನ್‌‍ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ವೈಎಸ್‌‍ಆರ್‌ ಕಾಂಗ್ರೆಸ್‌‍ ಬೆಂಬಲಸ್ವತಂತ್ರ ಭಾರತದ ಸಂಸತ್‌ ಇತಿಹಾಸದಲ್ಲಿ ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ನಡೆದ ಮೂರನೇ ಚುನಾವಣೆ ಇದಾಗಿದೆ.

ವಿರೋಧ ಪಕ್ಷಗಳು 232 ಸ್ಥಾನಗಳನ್ನು ಹೊಂದಿದ್ದು, ಎನ್‌‍ಡಿಎ ಅಭ್ಯರ್ಥಿಯಾಗಿದ್ದ ಓಂ ಬಿರ್ಲಾ ಅವರಿಗೆ 297 ಸಂಸದರ ಬೆಂಬಲ ದೊರಕಿತ್ತು. ಆಂಧ್ರಪ್ರದೇಶದಲ್ಲಿ ತನ್ನ ಕಟ್ಟಾ ಎದುರಾಳಿಯಾಗಿರುವ ಹಾಗೂ ಈ ಬಾರಿ ಅಧಿಕಾರಕ್ಕೆ ಬಂದಿರುವ ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿ ಮೈತ್ರಿ ಇದ್ದರೂ, ಜಗನ್‌ ಮೋಹನ್‌ ರೆಡ್ಡಿ ಅವರ ವೈಎಸ್‌‍ಆರ್‌ ಕಾಂಗ್ರೆಸ್‌‍ ಪಕ್ಷದ ನಾಲ್ವರು ಸಂಸದರು ಎನ್‌‍ಡಿಗೆ ಬೆಂಬಲ ನೀಡಿರುವುದು ವಿಶೇಷ.

ಡೆಪ್ಯುಟಿ ಸ್ಪೀಕರ್‌ ಸ್ಥಾನಕ್ಕೆ ಬೇಡಿಕೆ:
ಸಾಮಾನ್ಯವಾಗಿ ಸ್ಪೀಕರ್‌ ಸ್ಥಾನವನ್ನು ಆಡಳಿತ ಪಕ್ಷ ಪಡೆದುಕೊಳ್ಳುತ್ತದೆ ಮತ್ತು ಅದಕ್ಕೆ ಬೇಕಾದ ಸಂಖ್ಯಾಬಲ ಇಲ್ಲದ ಕಾರಣಗಳಿಂದ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ವಿರೋಧ ಪಕ್ಷಗಳು ಸ್ಪರ್ಧಿಸುವುದಿಲ್ಲ. ಹೀಗಾಗಿ ಲೋಕಸಭೆಗೆ ಸಹಮತದ ಸ್ಪೀಕರ್‌ ಆಯ್ಕೆ ನಡೆಯುತ್ತದೆ. ಆದರೆ ಡೆಪ್ಯುಟಿ ಸ್ಪೀಕರ್‌ ಸ್ಥಾನವನ್ನು ತನಗೆ ಬಿಟ್ಟುಕೊಡಬೇಕು ಎಂಬ ಇಂಡಿಯಾ ಕೂಟದ ಬೇಡಿಕೆಯನ್ನು ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿರುವ ವಿರೋಧಪಕ್ಷಗಳು, ಸ್ಪೀಕರ್‌ ಹುದ್ದೆಗೂ ಸ್ಪರ್ಧಿಸುವ ಮೂಲಕ ತನ್ನ ಪ್ರಾಬಲ್ಯ ಪ್ರದರ್ಶಿಸಿತ್ತು.

2014ರಲ್ಲಿ ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿಗೆ ಪ್ರಬಲ ವಿರೋಧ ಪಕ್ಷ ಇರಲಿಲ್ಲ. ಹೀಗಾಗಿ ಡೆಪ್ಯುಟಿ ಸ್ಪೀಕರ್‌ ಹುದ್ದೆಯನ್ನು ಪ್ರತಿಪಾದಿಸುವ ಅವಕಾಶವೂ ಪ್ರತಿಪಕ್ಷಗಳಿಗೆ ಇರಲಿಲ್ಲ. ಆದರೆ 2024ರ ಚುನಾವಣೆ ಬಳಿಕ ಚಿತ್ರಣ ಸಾಕಷ್ಟು ಬದಲಾಗಿದೆ.

ವಿಪ್‌ ಜಾರಿ ಆರಂಭದಲ್ಲಿ ಎನ್‌‍ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್‌ ತಮಗೆ ಸಿಗಬೇಕೆಂಬ ಷರತ್ತು ವಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್‌ ಸುರೇಶ್‌ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌‍ ಎಲ್ಲ ಸದಸ್ಯರಿಗೆ ಹಾಜರಾಗುವಂತೆ ಮಂಗಳವಾರ ವಿಪ್‌ ಜಾರಿ ಮಾಡಿದ್ದರು. ಕೊನೆ ಕ್ಷಣದಲ್ಲಿ ಸುರೇಶ್‌‍ಗೆ ಬೆಂಬಲ ಸೂಚಿಸಿದ ಟಿಎಂಸಿಇಂಡಿ ಬಣ ಅಭ್ಯರ್ಥಿಯಾಗಿ ಕೆ.ಸುರೇಶ್‌ ಅವರನ್ನು ಆಯ್ಕೆ ಮಾಡುವ ಮುನ್ನ ತಮ ಬಳಿ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಟಿಎಂಸಿ ಆರೋಪಿಸಿತ್ತು.

RELATED ARTICLES

Latest News