ಬೆಂಗಳೂರು, ಮಾ.21-ಕಾಂಗ್ರೆಸ್ ಹಿರಿಯ ಸದಸ್ಯ ಪುಟ್ಟಣ್ಣ ಅವರನ್ನು ಸದನದಿಂದ ಹೊರ ಹಾಕುವಂತೆ ಆಗ್ರಹಿಸಿ ಬಿಗಿಪಟ್ಟು ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಧರಣಿ ನಡೆಸಿ ಗದ್ದಲ್ಲ ಎಬ್ಬಿಸಿದ್ದರಿಂದ ಸದನದ ಕಲಾಪವನ್ನು ಎರಡು ಬಾರಿ ಮುಂದೂಡಿ ಪ್ರಸಂಗ ಜರುಗಿತು.
ಪುಟ್ಟಣ ಅವರು ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳ ಸದಸ್ಯರು ಸಭಾಪತಿ ಅವರ ಪೀಠ ಮುಂದಿನ ಬಾವಿಗಿಳಿದು ಧರಣಿ ನಡೆಸಿದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಪ್ರತಿಪಕ್ಷಗಳ ಸದಸ್ಯರು ಪಟ್ಟುಬಿಡದೆ ಧರಣಿ ಮುಂದುವರೆಸಿ ಪುಟ್ಟಣ್ಣ ಅವರನ್ನು ಸದನದಿಂದ ಹೊರ ಹಾಕುವಂತೆ ಆಗ್ರಹಿಸಿದರು.
ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ ಸಭಾಪತಿ ಅವರು ಪುಟ್ಟಣ್ಣ ಅವರು ಬಳಸಿದ್ದರೆನ್ನಲಾದ ಶಬ್ದವನ್ನು ಸಭಾಪತಿ ಕಡತದಿಂದ ತೆಗೆಸಿದ್ದಾರೆ. ಪುಟ್ಟಣ್ಣ ಅವರು ಆ ಶಬ್ದ ಬಳಸಿಲ್ಲ ಎಂದು ಹೇಳಿದ್ದಾರೆ. ಬಜೆಟ್ ಮೇಲಿನ ಚರ್ಚೆ ಮುಂದುವರೆಯಬೇಕು. ಧರಣಿ ಕೈಬಿಟ್ಟು ಕಲಾಪಕ್ಕೆ ಸಹಕರಿಸಿ ಎಂದು ಕೋರಿದರು.
ಆಗ ಜೆಡಿಎಸ್ ನಾಯಕ ಎಸ್.ಎಲ್.ಬೋಜೇಗೌಡ ಮಾತನಾಡಿ, ಸಭಾಪತಿಗಳು ಈಗಾಗಲೇ ಸದಸ್ಯರು ಬಳಸಿದ ಶಬ್ದವನ್ನು ಕಡತದಿಂದ ತೆಗೆಸಿರುವುದಾಗಿ ರೂಲಿಂಗ್ ನೀಡಿದ್ದಾರೆ. ಈ ಹಿಂದೆಯೂ ಅದೇ ಸದಸ್ಯರು ಅಸಂಸದೀಯ ಶಬ್ದ ಬಳಸಿದ್ದರು. ಅದನ್ನೂ ಕಡತದಿಂದ ತೆಗೆಸಲಾಗಿದೆ. ಈ ರೀತಿ ಪದೇ ಪದೇ ಮಾತನಾಡಿದರೆ ಹೇಗೆ? ಅವರು ಆ ಶಬ್ದ ಬಳಸಿಲ್ಲ ಎಂದ ಮೇಲೆ ಹೇಗೆ ಕಡತದಲ್ಲಿ ಸೇರಲು ಸಾಧ್ಯ? ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಭಾಪತಿಗಳಲ್ಲಿ ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸದನ ನಡೆಯಬಾರದು ಎಂಬ ಉದ್ದೇಶ ನಮ್ಮದಲ್ಲ. ಮೊನ್ನೆ ಆ ರೀತಿಯ ಶಬ್ದ ಬಳಸಿದ್ದರು. ಇಂದು ನೀವು ಕಡತದಿಂತ ಅಸಂಸದೀಯ ಶಬ್ದ ತೆಗೆಸಿದ ಮೇಲೂ ಅವರು ನಿಮ್ಮ ಸಚಿವಾಲಯದ ಸಿಬ್ಬಂದಿಗೆ ಧಮ್ಮಿ ಹಾಕಿದ್ದಾರೆ. ಆ ರೀತಿ ಶಬ್ದ ಬಳಸಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ. ಗೂಂಡಾ ವರ್ತನೆ ಸಹಿಸುವುದಿಲ್ಲ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಪುನರುಚ್ಚರಿಸಿದರು. ಸಭಾಪತಿ ಮಾತನಾಡಿ, ಈಗಾಗಲೇ ಪುಟ್ಟಣ್ಣ ಅವರು ಆಡಿರುವ ಮಾತನ್ನು ಕಡತದಿಂದ ತೆಗೆಸಲಾಗಿದೆ. ಮತ್ತೊಮ್ಮೆ ದೃಶ್ಯಾವಳಿ ನೋಡಿ ನಿರ್ಧಾರ ಕೈಗೊಳ್ಳಲಾಗುವುದು. ಹಲವು ಸದಸ್ಯರು ಬಜೆಟ್ ಮೇಲೆ ಮಾತನಾಡಬೇಕು. ಮಧ್ಯಾಹ್ನ ಮುಖ್ಯಮಂತ್ರಿ ಉತ್ತರ ಕೊಡುತ್ತಾರೆ. ಹೀಗಾಗಿ ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಸಹಕರಿಸಿ ಎಂದರು.
ಪುಟ್ಟಣ್ಣ ಮಾತನಾಡಿ, ಆ ಪದಬಳಕೆ ಮಾಡಿಲ್ಲ. ನೀವು ವಿಡಿಯೋ ರೆಕಾರ್ಡ್ ಪರಿಶೀಲಿಸಿ ನೀಡುವ ರೂಲಿಂಗ್ಗೆ ನಾನು ಬದ್ದನಾಗಿರುತ್ತೇನೆ ಎಂದು ಹೇಳಿದರು. ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸಭಾಪತಿಗಳು ರೂಲಿಂಗ್ ನೀಡಿದ ಮೇಲೂ ಧರಣಿ ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ ಯಕ್ತಪಡಿಸಿದರು.
ಇನ್ನು ಮುಂದೆ ಯಾರೇ ಅಸಂಸದೀಯ ಪದ ಬಳಸಿದರೆ ನಿಯಮಾವಳಿ ಪ್ರಕಾರ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸಭಾಪತಿ ನೀಡಿದರು. ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಕರ್ನಾಟಕ ಧನ ವಿನಿಯೋಗ ಸೇರಿದಂತೆ ವಿವಿಧ ವಿಧೇಯಕಗಳನ್ನು ಈ ಸದನದ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಸಭಾಪತಿ ಪ್ರಕಟಿಸಿದರು.ಪ್ರತಿಪಕ್ಷಗಳು ಪಟ್ಟು ಸಡಿಲಿಸದೇ ಇದ್ದಾಗ, ಆಡಳಿತ ಪಕ್ಷದಿಂದ ಅಷ್ಟೇ ತೀವ್ರವಾದ ಆಕ್ಷೇಪಗಳು ಕೇಳಿಬಂದವು. ಸದನ ಗೊಂದಲ, ಗದ್ದಲ, ಕೋಲಾಹಲದಿಂದ ಕೂಡಿದ್ದರಿಂದ ಸಭಾಪತಿ ಸದನದ ಕಲಾಪವನ್ನು ಮತ್ತೇ ಬೋಜನ ವಿರಾಮದವರೆಗೆ