ಕೊಪ್ಪಳ, ಅ.25- ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಹುಟ್ಟುಹಬ್ಬದ ದಿನವೇ ಮೃತಪಟ್ಟಿದ್ದು, ಪೋಷಕರು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಕನಕಗಿರಿ ಮೂಲದ ಆರ್ಯನ್ (22) ಮೃತಪಟ್ಟ ಯುವಕ. ಕಳೆದ 15 ದಿನಗಳ ಹಿಂದೆ ಹಾಸನ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಆರ್ಯನ್ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುಟ್ಟುಹಬ್ಬದ ದಿನವಾದ ನಿನ್ನೆ ಆರ್ಯನ್ ಮೃತಪಟ್ಟಿದ್ದಾನೆ. ಪೋಷಕರು ದುಃಖದ ನಡುವೆಯೇ ಮಗನ ಕೈ ಹಿಡಿದು ಕೇಕ್ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಬೆಳೆದ ಪುತ್ರ ಕಣ್ಣಮುಂದೆಯೇ ಸಾವನ್ನಪ್ಪಿದ್ದು, ಪೋಷಕರಲ್ಲಿ ದುಃಖದ ಕಟ್ಟೆ ಒಡೆದಿತ್ತು. ಆದರೂ ಸಹ ಇನ್ನೊಬ್ಬರಿಗೆ ನೆರವಾಗಲೆಂದು ಅಂಗಾಂಗ ದಾನ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
