Home Blog Page 45

ಭಾರತ-ಮುಂಗೋಲಿಯಾ ನಡುವೆ ಯುರೇನಿಯಂ ಪೂರೈಕೆ ಸೇರಿದಂತೆ 10 ಒಪ್ಪಂದಗಳಿಗೆ ಸಹಿ

ನವದೆಹಲಿ, ಅ. 14 (ಪಿಟಿಐ) ಭಾರತವು ಮಂಗೋಲಿಯಾದಿಂದ ಯುರೇನಿಯಂ ಪಡೆಯುವ ಸಾಧ್ಯತೆ ಮತ್ತು ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವ ಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಖುರೆಲ್‌ ಸುಖ್‌ ಉಖ್ನಾ ನಡುವಿನ ಮಾತುಕತೆಯಲ್ಲಿ ಚರ್ಚೆಗೆ ಬಂದವು.

ಇಬ್ಬರು ನಾಯಕರ ನಡುವಿನ ಮಾತುಕತೆಯ ನಂತರ ಡಿಜಿಟಲ್‌ ಪರಿಹಾರಗಳು, ಖನಿಜ ಸಂಪನ್ಮೂಲಗಳ ಪರಿಶೋಧನೆ ಮತ್ತು ತ್ವರಿತ ಪರಿಣಾಮ ಯೋಜನೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು 10 ಒಪ್ಪಂದಗಳಿಗೆ ಸಹಿ ಹಾಕಿದರು.

ಮಂಗೋಲಿಯಾದಲ್ಲಿ 1.7 ಬಿಲಿಯನ್‌ ಡಾಲರ್‌ ಮೌಲ್ಯದ ಭಾರತ ನೆರವಿನ ತೈಲ ಸಂಸ್ಕರಣಾಗಾರ ಯೋಜನೆ ಮತ್ತು ಎರಡೂ ದೇಶಗಳ ನಡುವಿನ ಒಟ್ಟಾರೆ ಇಂಧನ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳು ಸಹ ಚರ್ಚೆಯ ಪ್ರಮುಖ ವಿಷಯಗಳಲ್ಲಿ ಸೇರಿವೆ.

ಸಂವಾದದ ನಂತರ ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಪ್ರಧಾನಿ ಮೋದಿ, ಮಂಗೋಲಿಯಾದ ಅಭಿವೃದ್ಧಿಗೆ ಭಾರತ ಬಲವಾದ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದರು.ಉಖ್ನಾ ನಾಲ್ಕು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಬಂದಿಳಿದಿದ್ದಾರೆ.

ಭಾರತವು ಮಂಗೋಲಿಯಾದ ಜನರಿಗೆ ಉಚಿತ ಇ-ವೀಸಾಗಳನ್ನು ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.ಭಾರತದ 1.7 ಶತಕೋಟಿ ಡಾಲರ್‌ ಸಾಲದ ಬೆಂಬಲದೊಂದಿಗೆ ಈ ತೈಲ ಸಂಸ್ಕರಣಾಗಾರ ಯೋಜನೆಯು ಮಂಗೋಲಿಯಾದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.ಇದು ಜಾಗತಿಕವಾಗಿ ಭಾರತದ ಅತಿದೊಡ್ಡ ಅಭಿವೃದ್ಧಿ ಪಾಲುದಾರಿಕೆ ಯೋಜನೆಯಾಗಿದ್ದು, ಇದನ್ನು ನನಸಾಗಿಸಲು 2,500 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರು ತಮ್ಮ ಮಂಗೋಲಿಯನ್‌ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನಾವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಿಕಟ ಪಾಲುದಾರರಾಗಿ ನಿಲ್ಲುತ್ತೇವೆ, ಮುಕ್ತ, ಮುಕ್ತ, ಎಲ್ಲರನ್ನೂ ಒಳಗೊಳ್ಳುವ ಮತ್ತು ನಿಯಮಗಳನ್ನು ಆಧರಿಸಿದ ಇಂಡೋ-ಪೆಸಿಫಿಕ್‌ ಅನ್ನು ಬೆಂಬಲಿಸುತ್ತೇವೆ. ಒಟ್ಟಾಗಿ, ನಾವು ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಲು ಸಹ ಕೆಲಸ ಮಾಡುತ್ತೇವೆ ಎಂದು ಮೋದಿ ಹೇಳಿದರು.ತಮ್ಮ ಕಡೆಯಿಂದ, ಮಂಗೋಲಿಯನ್‌ ಅಧ್ಯಕ್ಷರು ಶುದ್ಧ ಇಂಧನ ಕ್ಷೇತ್ರದಲ್ಲಿ ಭಾರತದ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು ಮತ್ತು ನಿರ್ದಿಷ್ಟವಾಗಿ ನವದೆಹಲಿ ನೇತೃತ್ವದ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಉಲ್ಲೇಖಿಸಿದರು.ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಭಾರತ ಮತ್ತು ಮಂಗೋಲಿಯಾ ನಡುವಿನ ನಿಶ್ಚಿತಾರ್ಥವು ಕೇವಲ ರಾಜತಾಂತ್ರಿಕ ಸಂಬಂಧಕ್ಕಿಂತ ಹೆಚ್ಚಿನದಾಗಿದೆ ಎಂದು ಮೋದಿ ಗಮನಿಸಿದರು.

ಇದು ಆಳವಾದ, ಆತ್ಮೀಯ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ನಮ್ಮ ಪಾಲುದಾರಿಕೆಯ ಆಳ ಮತ್ತು ವ್ಯಾಪ್ತಿಯು ನಮ್ಮ ಜನರಿಂದ ಜನರ ಸಂಬಂಧಗಳಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.ನಮ್ಮ ಎರಡೂ ದೇಶಗಳು ಬೌದ್ಧಧರ್ಮದ ಪ್ರಾಚೀನ ಬಂಧವನ್ನು ಹಂಚಿಕೊಂಡಿವೆ, ಅದಕ್ಕಾಗಿಯೇ ನಮ್ಮನ್ನು ಆಧ್ಯಾತ್ಮಿಕ ಸಹೋದರರು ಎಂದೂ ಕರೆಯುತ್ತಾರೆ ಎಂದು ಅವರು ಹೇಳಿದರು.

ಉಖ್ನಾ ಜೊತೆ ನಡೆಸಿದ ಮಾತುಕತೆಯಲ್ಲಿ ಈ ಸಂಪ್ರದಾಯ ಮತ್ತು ನಮ್ಮ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.ಮುಂದಿನ ವರ್ಷ, ಬುದ್ಧನ ಇಬ್ಬರು ಮಹಾನ್‌ ಶಿಷ್ಯರಾದ ಸಾರಿಪುತ್ರ ಮತ್ತು ಮೌದ್ಗಲ್ಯಾಯನರ ಪವಿತ್ರ ಅವಶೇಷಗಳನ್ನು ಭಾರತದಿಂದ ಮಂಗೋಲಿಯಾಕ್ಕೆ ಕಳುಹಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.

ಬೌದ್ಧ ಗ್ರಂಥಗಳ ಆಳವಾದ ಅಧ್ಯಯನವನ್ನು ಬೆಂಬಲಿಸಲು ಮತ್ತು ಪ್ರಾಚೀನ ಜ್ಞಾನದ ಸಂಪ್ರದಾಯವನ್ನು ಮುಂದುವರಿಸಲು ಭಾರತವು ಗಂಡನ್‌ ಮಠಕ್ಕೆ ಸಂಸ್ಕೃತ ಶಿಕ್ಷಕರನ್ನು ಕಳುಹಿಸುತ್ತದೆ ಎಂದು ಅವರು ಹೇಳಿದರು.ಒಂದು ಮಿಲಿಯನ್‌ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ.

ಮಂಗೋಲಿಯಾದಲ್ಲಿ ಬೌದ್ಧಧರ್ಮದಲ್ಲಿ ನಳಂದ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸಿದೆ ಮತ್ತು ಇಂದು ನಾವು ನಳಂದವನ್ನು ಗಂಡನ್‌ ಮಠದೊಂದಿಗೆ ಸಂಪರ್ಕಿಸುವ ಮೂಲಕ ಈ ಐತಿಹಾಸಿಕ ಸಂಪರ್ಕವನ್ನು ಬಲಪಡಿಸಲು ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಲಡಾಖ್‌ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ ಮತ್ತು ಮಂಗೋಲಿಯಾದ ಅರ್ಖಂಗೈ ಪ್ರಾಂತ್ಯದ ನಡುವೆ ಇಂದು ಸಹಿ ಹಾಕಲಾದ ಒಪ್ಪಂದವು ನಮ್ಮ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.ಮಂಗೋಲಿಯಾದ ಅಭಿವೃದ್ಧಿ ಕಥೆಯಲ್ಲಿ ಭಾರತವು ಸ್ಥಿರ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಪ್ರಧಾನಿ ಬಣ್ಣಿಸಿದರು.

ಎರಡೂ ದೇಶಗಳ ನಡುವಿನ ಪಾಲುದಾರಿಕೆಯು ರಕ್ಷಣೆ ಮತ್ತು ಭದ್ರತೆ, ಇಂಧನ, ಗಣಿಗಾರಿಕೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಂಸ್ಕೃತಿಕ ಸಹಕಾರದಂತಹ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.ನಮ್ಮ ಖಾಸಗಿ ವಲಯವು ಇಂಧನ, ನಿರ್ಣಾಯಕ ಖನಿಜಗಳು, ಅಪರೂಪದ ಭೂಮಿ, ಡಿಜಿಟಲ್‌‍, ಗಣಿಗಾರಿಕೆ, ಕೃಷಿ, ಡೈರಿ ಮತ್ತು ಸಹಕಾರಿ ಸಂಸ್ಥೆಗಳಂತಹ ಕ್ಷೇತ್ರಗಳಲ್ಲಿ ಸಹಕಾರದ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ ಎಂದು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.ಮಂಗೋಲಿಯಾದಿಂದ ಯುರೇನಿಯಂ ಮತ್ತು ತಾಮ್ರ, ಚಿನ್ನ ಮತ್ತು ಸತು ಸೇರಿದಂತೆ ಇತರ ಖನಿಜಗಳನ್ನು ಖರೀದಿಸಲು ಭಾರತದ ಕಡೆಯವರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್‌ ನಂಟು ಹೊಂದಿದ್ದ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರನ ಬಂಧನ

ಚಂಡೀಗಢ, ಅ. 14 (ಪಿಟಿಐ) ಪಂಜಾಬ್‌ ಪೊಲೀಸರು ಅಮೃತಸರ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸುವ ಮೂಲಕ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದಾರೆ.ಆರೋಪಿ ಅಮರ್‌ಬೀರ್‌ ಸಿಂಗ್‌ನಿಂದ ಪೊಲೀಸರು ಆರು ಪಿಸ್ತೂಲ್‌ಗಳು, 11 ಮ್ಯಾಗಜೀನ್‌ಗಳು ಮತ್ತು 111 ಲೈವ್‌ ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದು ಪ್ರಮುಖ ಪ್ರಗತಿಯಲ್ಲಿ, ಅಮೃತಸರ ಗ್ರಾಮೀಣ ಪೊಲೀಸರು ಅಮೃತಸರದ ತಾರ್ಸಿಕ್ಕಾ ಪಿಎಸ್‌‍ನ ಡೈರಿವಾಲ್‌ ನಿವಾಸಿ ಅಮರ್‌ಬೀರ್‌ ಸಿಂಗ್‌ ಅವರನ್ನು ಬಂಧಿಸಿದ್ದಾರೆ ಮತ್ತು 6 ಪಿಸ್ತೂಲ್‌ಗಳು, 11 ಮ್ಯಾಗಜೀನ್‌ಗಳು, .30 ಬೋರ್‌ನ 91 ಲೈವ್‌ ಕಾರ್ಟ್ರಿಡ್ಜ್ ಗಳು ಮತ್ತು 9 ಎಂಎಂನ 20 ಲೈವ್‌ ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್‌‍ ಮಹಾನಿರ್ದೇಶಕ (ಡಿಜಿಪಿ) ಗೌರವ್‌ ಯಾದವ್‌ ತಿಳಿಸಿದ್ದಾರೆ.

ಆರೋಪಿ ಇತ್ತೀಚೆಗೆ ಕೆನಡಾದಿಂದ ಹಿಂದಿರುಗಿದ್ದು, ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.

ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು ಇತರ ಕಾರ್ಯಕರ್ತರನ್ನು ಗುರುತಿಸಲು, ಮುಂದಕ್ಕೆ ಮತ್ತು ಹಿಂದಕ್ಕೆ ಸಂಪರ್ಕಗಳನ್ನು ಪತ್ತೆಹಚ್ಚಲು ಮತ್ತು ಸಂಪೂರ್ಣ ಗಡಿಯಾಚೆಗಿನ ಕಳ್ಳಸಾಗಣೆ ಜಾಲವನ್ನು ಕಿತ್ತುಹಾಕಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ಹೇಳಿದರು.

ಪ್ರತೀ ಜಿಲ್ಲೆಯಲ್ಲೂ ಸುಸರ್ಜಿತ ಕ್ಯಾನ್ಸರ್‌ ಆಸ್ಪತ್ರೆ : ಸಚಿವ ಶರಣಪ್ರಕಾಶ ಪಾಟೀಲ

ತುಮಕೂರು,ಅ.15-ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಮಾರು ನಿರ್ಮಿಸಿರುವ 100 ಹಾಸಿಗೆಗಳ ನೂತನ ಕ್ಯಾನ್ಸರ್‌ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್‌ 7ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್‌. ಪಾಟೀಲ ತಿಳಿಸಿದರು.

ಕ್ಯಾನ್ಸರ್‌ ಆಸ್ಪತ್ರೆ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದ ಅವರು, ಕ್ಯಾನ್ಸರ್‌ ಆಸ್ಪತ್ರೆಯನ್ನು ರೋಗಿಗಳ ಚಿಕಿತ್ಸೆಗೆ ಕಾರ್ಯಾಚರಣೆಗೊಳಿಸಲು ಪ್ರಥಮ ಹಂತದಲ್ಲಿ ಸುಮಾರು 41 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗುವುದು. ಉಪಕರಣಗಳ ಅಳವಡಿಕೆಗೆ ನಾಲ್ಕೈದು ತಿಂಗಳು ಸಮಯ ಬೇಕಾಗಬಹುದು ಎಂದರಲ್ಲದೆ, ಉಪಕರಣ ಖರೀದಿಗಾಗಿ ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತೀ ದಿನ ಸುಮಾರು 20 ರಿಂದ 30 ಕ್ಯಾನ್ಸರ್‌ ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡುತ್ತಿದ್ದು, ಈ ರೋಗಿಗಳಿಗೆ ಕಿಮೋಥೆರಪಿ, ರೇಡಿಯೋ ಥೆರಪಿ ಹಾಗೂ ಆಂಕೊ ಸರ್ಜರಿ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಪ್ರತೀ ದಿನ ರಾಜ್ಯವಲ್ಲದೆ ಇತರೆ ರಾಜ್ಯದ ಕ್ಯಾನ್ಸರ್‌ ರೋಗಿಗಳೂ ಚಿಕಿತ್ಸೆಗೆ ಬರುತ್ತಿರುವುದರಿಂದ ಕಿದ್ವಾಯಿ ಆಸ್ಪತ್ರೆಯ ಒತ್ತಡ ಕಡಿಮೆ ಮಾಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 24 ಸರ್ಕಾರಿ ಮೆಡಿಕಲ್‌ ಕಾಲೇಜುಗಳಿದ್ದು ಬಡವರು, ಸಾಮಾನ್ಯರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನೀಡುವ ಉದ್ದೇಶದಿಂದ ಪ್ರತೀ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜನ್ನು ತೆರೆಯಲು ಯೋಜಿಸಲಾಗಿದೆ ಎಂದು ಹೇಳಿದರು.

ಮುಂದಿನ 5 ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್‌ ಆಸ್ಪತ್ರೆ, ಟ್ರಾಮಾ ಕೇರ್‌ ಸೆಂಟರ್‌ ನಿರ್ಮಿಸಲು ನಿರ್ಣಯಿಸಲಾಗಿದೆ. ಗುಲ್ಬರ್ಗಾ, ರಾಜಯಚೂರಿನಲ್ಲಿ ಈಗಾಗಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಬಳ್ಳಾರಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕಳೆದ ಆಯವ್ಯಯದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪ್ರತೀ ಜಿಲ್ಲೆಯಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಕಲ್ಬುರ್ಗಿಯಲ್ಲಿ ಈಗಾಗಲೇ ನಿರ್ಮಿಸಿರುವ 100 ಹಾಸಿಗೆಗಳುಳ್ಳ ಕ್ಯಾನ್ಸರ್‌ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಬಳ್ಳಾರಿ, ಬೀದರ್‌, ರಾಯಚೂರಿಗೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಶಿವಮೊಗ್ಗ, ಮಂಡ್ಯದಲ್ಲಿ ಕಟ್ಟಡ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಮುಖ್ಯಮಂತ್ರಿಗಳು ನವೆಂಬರ್‌ 7ರಂದು ನಗರದಲ್ಲಿ ಕ್ಯಾನ್ಸರ್‌ ಆಸ್ಪತ್ರೆಯೊಂದಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್‌ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕ್ಯಾನ್ಸರ್‌ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳೊಂದಿಗೆ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್‌ ಹಾಗೂ ಸುರೇಶ್‌ ಗೌಡ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಸುಜಾತ ರಾಥೋಡ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್‌, ಜಿಲ್ಲಾ ಶಸಚಿಕಿತ್ಸಕ ಡಾ. ಅಸ್ಗರ್‌ ಬೇಗ್‌, ಕಿದ್ವಾಯಿ ಆಸ್ಪತ್ರೆಯ ಡಾ. ನವೀನ್‌, ಇಂಜಿನಿಯರ್‌ ಚಂದ್ರು, ಸೇರಿದಂತೆ ಮತ್ತಿತರರು ಹಾಜರಿದ್ದರು.

ಚಿಕ್ಕಮಗಳೂರು : ನವವಿವಾಹಿತೆ ಕೊಲೆ ಪ್ರಕರಣದಲ್ಲಿ ಪತಿ ಮತ್ತು ಮಾವನ ಬಂಧನ

ಚಿಕ್ಕಮಗಳೂರು,ಅ.15-ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಡಾ.ವಿಕ್ರಮ್‌ಅಮಟೆ ತಿಳಿಸಿದರು. ಆರೋಪಿ ಪತಿ ನವೀನ್‌ ಹಾಗೂ ಮಾವ ಮಂಜೇಗೌಡ ಬಂಧಿತರು . ಅತ್ತೆ ಕುಸುಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದ ನೇತ್ರಾವತಿ ಸಕಲೇಶಪುರದ ನವೀನ್‌ನನ್ನು ಐದು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ನವೀನ್‌ ಸಕಲೇಶಪುರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರನ್ನು ಸಖಿ ಕೇಂದ್ರಕ್ಕೆ ಕರೆಸಿ ಕೌನ್ಸಿಲಿಂಗ್‌ ಕೂಡ ನಡೆಸಲಾಗಿತ್ತು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಬಾರದ ಹಿನ್ನಲೆಯಿಂದಾಗಿ ನೇತ್ರಾವತಿ ಕಳೆದ ಮೂರು ತಿಂಗಳಿಂದ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿನ ತವರು ಮನೆ ಸೇರಿದ್ದರು.

ಅ.12ರ ಸಂಜೆ 6.30ರ ಸುಮಾರಿನಲ್ಲಿ ನೇತ್ರಾವತಿ ಅವರ ಮನೆಗೆ ಹೋಗಿದ್ದ ನವೀನ್‌ ಮನೆಗೆ ವಾಪಸ್‌‍ ಬರುವಂತೆ ಹೇಳಿದಾಗ ನೇತ್ರಾವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನವೀನ್‌ ಚಾಕುವಿನಿಂದ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರಗಾಯಗೊಂಡಿದ್ದ ನೇತ್ರಾವತಿಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ.

ನೇತ್ರಾವತಿ ಸಂಬಂಧಿಕರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಆಲ್ದೂರು ಠಾಣೆಯ ಪೊಲೀಸರು ನೇತ್ರಾವತಿ ಅವರ ಪತಿ ಹಾಗೂ ಮಾವನನ್ನುಬಂಧಿಸಿದ್ದಾರೆ. ನೇತ್ರಾವತಿ ಅತ್ತೆ ಕುಸುಮ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈವರೆಗೆ 6.40 ಲಕ್ಷ ಮಂದಿ ಭಕ್ತರಿಂದ ಹಾಸನಾಂಬ ದರ್ಶನ

ಹಾಸನ,ಅ.15-ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ 6ನೇ ದಿನವಾದ ಇಂದೂ ಸಹ ಸಾಗರೋಪಾಧಿಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ನಿರಂತರ ದರ್ಶನ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯಲಿದ್ದಾರೆ. ಇಂದೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದೇವಾಲಯದ ಆವರಣ ಹಾಗೂ ಸುತ್ತಮುತ್ತ ಸರಥಿ ಸಾಲುಗಳಲ್ಲಿ ನಿಂತಿದ್ದ ಭಕ್ತರನ್ನು ಮಾತನಾಡಿಸಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ಕಳೆದ ಐದು ದಿನಗಳಿಂದ 6,40,700 ಮಂದಿ ದರ್ಶನ ಮಾಡಿದ್ದಾರೆ. ಇಂದು ಬೆಳಗ್ಗೆ ಒಂದು ಲಕ್ಷದ 1,22,600 ಮಂದಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು .

ಇಂದು ಒಂದೇ ದಿನ ಭಕ್ತರ ಸಂಖ್ಯೆ 2.50 ಲಕ್ಷ ದಾಟಬಹುದು ಎಂದ ಅವರು ಎಷ್ಟೇ ಜನ ಬಂದರೂ ಎಲ್ಲರಿಗೂ ಸುಗಮ ದರ್ಶನ ಆಗಲಿದೆ. ಎಲ್ಲಾ ವ್ಯವಸ್ಥೆ ಸರಿಯಾಗಿದ್ದು ದರ್ಶನ ಪಡೆಯಲು ಜನರಿಗೆ ಸ್ವಲ್ಪ ಸಮಯ ಹೆಚ್ಚಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಗಂಟೆ ಸಮಯ ತಗುಲುತ್ತಿದ್ದು ಮುಂದಿನ ದಿನಗಳಲ್ಲಿ ಬರುವವರು ನಾಲ್ಕರಿಂದ ಐದು ಗಂಟೆ ಸರತಿ ಸಾಲಿನಲ್ಲಿ ನಿಲ್ಲಲು ತಯಾರಾಗಿ ಬರುವಂತೆ ಸಲಹೆ ನೀಡಿದರು.

ಒಂದು ಸಾವಿರ ,ರೂ.300 ವಿಶೇಷ ದರ್ಶನದ ಟಿಕೆಟ್‌ ಹಾಗೂ ಲಾಡು ಪ್ರಸಾದ ಮಾರಾಟದಿಂದ 4.21 ಲಕ್ಷ ಹಣ ಬಂದಿದೆ ಕಳೆದ ವರ್ಷಕ್ಕಿಂತ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು ಆದಾಯ ಬರಲಿ ಬಿಡಲಿ ನಮಗೆ ಜನರಿಗೆ ಶೀಘ್ರ ದರ್ಶನ ಮಾಡಿಸುವುದೇ ಮುಖ್ಯ ಎಂದರು .

ದರ್ಶನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಜನರು ತುಂಬಾ ಸಂತಸದಿಂದ ದರ್ಶನ ಮಾಡುತ್ತಿದ್ದಾರೆ. ದೇವಿಯ ಕೃಪೆಯಿಂದಾಗಿ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇನ್ನು ಎಂಟು ದಿನ ದರ್ಶನ ಇದೆ.ಎಲ್ಲಾ ದಿನ ಕನಿಷ್ಠ 50 ರಷ್ಟು ಜನರ ಸಂಖ್ಯೆ ಹೆಚ್ಚಾಗುವ ಜೊತೆಗೆ ಸವಾಲು ಎದುರಿಸಬೇಕಾಗಿದೆ ಆದರೂ ಉತ್ತಮ ವ್ಯವಸ್ಥೆ ಯೊಂದಿಗೆ ದರ್ಶನ ಮಾಡಿಸುತ್ತೇವೆ ಎಂದರು.

ಶಿಷ್ಟಾಚಾರ ನಿಯಮದಡಿ ಮಾಜಿ ಸಚಿವ ಗೋಪಾಲಯ್ಯ, ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ ಎಚ್‌ .ಕೆ ಸುರೇಶ್‌, ವಿನಯ್‌ ಗುರೂಜಿ, ನಯನಾ ಮೋಟಮ , ಛಲವಾದಿ ನಾರಾಯಣಸ್ವಾಮಿ, ಪಿಜಿ ಆರ್‌ ಸಿಂಧ್ಯಾ, ಪ್ರಥಮ್‌‍, ಚಿತ್ರ ನಟ ವಸಿಷ್ಠ ಸಿಂಹ, ಹರಿಪ್ರಿಯಾ, ಸೇರಿದಂತೆ ಇತರ ಗಣ್ಯರು ಇಂದು ಹಾಸನಾಂಬಾ ದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್‌‍ ಲತಾ ಕುಮಾರಿ,ಜಿ.ಪಂ ಸಿಇಒ ಬಿ.ಆರ್‌ ಪೂರ್ಣಿಮಾ, ಎಸ್‌‍ ಪಿ ಮೊಹಮದ್‌ ಸುಜಿತಾ, ಸಂಸದ ಶ್ರೀಯಸ್‌‍ ಪಟೇಲ್‌ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಜೊತೆಯಲ್ಲಿ ಇದ್ದರು.

ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಗೋಡೆಗೆ ಕಾರು ಡಿಕ್ಕಿ

ದೊಡ್ಡಬಳ್ಳಾಪುರ,ಅ.15– ಚಾಲಕನ ನಿಯಂತ್ರಣ ತಪ್ಪಿ ಕಾರು ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಅರಳು ಮಲ್ಲಿಗೆ ಬಾಗಿಲು ಬಳಿ ಸಂಭವಿಸಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ನಗರದ ಅರ್ಚಕರೊಬ್ಬರಿಗೆ ಸೇರಿದ ಕಾರನ್ನು ರಿಪೇರಿಗಾಗಿ ಬಿಟ್ಟಿದ್ದರೆಂದು ಹೇಳಲಾಗುತ್ತಿದೆ. ಆದರೆ ಮೆಕಾನಿಕ್‌ ದುರಸ್ತಿಯಾದ ಕಾರಿನಲ್ಲಿ ಗೆಳೆಯರೊಂದಿಗೆ ತೆರಳುವ ವೇಳೆ ರಾತ್ರಿ 11.30ರ ಸುಮಾರಿಗೆ ನಿಯಂತ್ರಣತಪ್ಪಿ ಅರಳು ಮಲ್ಲಿಗೆ ಬಾಗಿಲು ವೃತ್ತದ ಗಣೇಶ ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಚಾಲಕನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್‌‍ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನು ಕೊಂದು ಕೊಳವೆ ಬಾವಿಯಲ್ಲಿ ಹೂತಿಟ್ಟ ಪತಿರಾಯ

ಚಿಕ್ಕಮಗಳೂರು,ಅ.15-ಹೆಂಡತಿಯನ್ನುಕೊಂದು ಶವವನ್ನು ಕೊಳವೇ ಬಾವಿಯಲ್ಲಿ ಹೂತು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾರತಿ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಒಂದೂವರೆ ತಿಂಗಳ ಹಿಂದೆ ನಡೆದಿದ್ದು ಪ್ರಕರಣ, ತನಿಖೆಯಲ್ಲಿ ಗಂಡನೇ ಹಂತಕ ಎನ್ನುವುದು ಬಹಿರಂಗವಾಗಿದೆ. ತವರಿಗೆ ಹೊರಟಿದ್ದ ಪತ್ನಿ ಭಾರತಿ ಕೆನ್ನೆಗೆ ಪತಿ ವಿಜಯ್‌ ಹೊಡೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ.

ಬಂಧನದ ಭೀತಿಯಿಂದ ಪತ್ನಿಯ ಶವವನ್ನು ತಮ ತೋಟದ ಕೊಳವೆ ಬಾವಿಯಲ್ಲಿ ಹೂತುಹಾಕಿ ಕಡೂರು ಠಾಣೆಗೆ ಪತ್ನಿ ನಾಪತ್ತೆಯಾಗಿದ್ದಾಳೆಂದು ವಿಜಯ್‌ ದೂರು. ಒಂದೂವರೆ ತಿಂಗಳ ನಂತರ ಪೊಲೀಸರ ತನಿಖೆಯಲ್ಲಿ ಪತಿ ವಿಜಯೇ ಹಂತಕನೆಂದು ತನಿಖೆಯಿಂದ ಸಾಬೀತು ಆಗಿದೆ.

ಕಡೂರು ಪೊಲೀಸರಿಂದ ವಿಜಯ್‌‍, ಅತ್ತೆ ತಾಯಮ, ಮಾವ ಗೋವಿಂದಪ್ಪ ಬಂಧನಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಲಾಗಿದೆ.ದೇವರಿಗೆ ಪೂಜೆ, ನನ್ನ ಹೆಂಡತಿ ದೆವ್ವ ಆಗಬಾರದು,ಪ್ರಕರಣ ಬೆಳಕಿಗೆ ಬರಬಾರದು, ಒಂದು ವೇಳೆ ಬಂದ್ರು ಕೋರ್ಟ್‌ನಲ್ಲಿ ಕೇಸ್‌‍ ನಿಲ್ಲಿಬಾರದೆಂದು ತಗಡಿನ ಶೀಟ್‌ನಲ್ಲಿ ಹೆಂಡತಿಯ ಹೆಸರು ಬರೆದು, ಫೋಟೋವನ್ನು ಮರಕ್ಕೆ ಮೊಳೆ ಹೊಡೆದು ಅಂಟಿಸಿದ್ದ. ಆದರೂ ಕರ್ಮ ಬಿಡಲಿಲ್ಲ. ಕೊನೆಗೆ ಕಿರಾತಕ ಪತಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಕನ್ನಡ ಕುಟುಂಬ ಅವಾರ್ಡ್ಸ್-2025 : ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ

ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ ಕನ್ನಡ ಕುಟುಂಬ ಅವಾರ್ಡ್ಸ್-2025′ ಕ್ಷಣಗಣನೆ ಶುರುವಾಗಿದೆ. ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿದ್ದ ಎಂಟರ್ಟೈನ್ಮೆಂಟ್ ನ ಮಹಾಪರ್ವ ಇದೇ ತಿಂಗಳ 17, 18 ಮತ್ತು 19 ರಂದು ನಿಮ್ಮ ನೆಚ್ಚಿನ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ. ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ.

ಈ ವರುಷದ ‘ ಕನ್ನಡ ಕುಟುಂಬ ಅವಾರ್ಡ್ಸ್ ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳಿರಲಿವೆ. ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆಯೂ ಇರಲಿದೆ. ಇನ್ನು ಈ ಬಾರಿಯ ಕನ್ನಡ ಕುಟುಂಬ ಅವಾರ್ಡ್ಸ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕನ್ನಡ ಚಲನಚಿತ್ರ ತಾರೆಯರು ಹಾಗು ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿದ್ದು ಇದರ ಮತ್ತೊಂದು ಆಕರ್ಷಣೆ. ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂದರ ಮತ್ತು ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವದರಲ್ಲಿ ಎರಡು ಮಾತಿಲ್ಲ.

ಕನ್ನಡ ಅವಾರ್ಡ್ 2025 ರಲ್ಲಿ ಚಂದನವನದ ಡಿವೈನ್ ಸ್ಟಾರ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಮತ್ತು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದದ್ದು ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಕನ್ನಡ ಅವಾರ್ಡ್ ನಲ್ಲಿ ವಿಶೇಷವಾಗಿ “ವೀಕೆಂಡ್ ವಿತ್ ರಮೇಶ್ ಮಿನಿಯೇಚರ್” ಕೂಡ ಇರಲಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅವರ ಮಾತುಕತೆ ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಆಗಿತ್ತು.

ಇನ್ನು ಇದರ ಬಗ್ಗೆ ಮಾತನಾಡಿದ ಕನ್ನಡ ಮತ್ತು ಕನ್ನಡ 5 ನ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು “ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ ಮತ್ತು ಅದ್ಭುತ ಆತ್ಮಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಇನ್ನು ಕನ್ನಡ 20 ವರುಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಕೊಡೋದು ನಮ್ಮ ಮುಖ್ಯ ಗುರಿ ಆಗಿತ್ತು. ಅದಕ್ಕೆ ಬದ್ಧವಾಗಿ ನಾವು ಈ ವರುಷ ‘ನಾ ನಿನ್ನ ಬಿಡಲಾರೆ’, ‘ಕರ್ಣ’ ಮತ್ತು ‘ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಪ್ರಸಿದ್ಧ ಧಾರಾವಾಹಿಗಳ ಜೊತೆಗೆ ‘ನಾವು ನಮ್ಮವರು’ ಎಂಬ ವಿಭಿನ್ನ ರಿಯಾಲಿಟಿ ಶೋ ವನ್ನು ಜನರ ಮುಂದಿಟ್ಟಿದ್ದೇವೆ.

ಇನ್ನು ನಮ್ಮ ವೀಕ್ಷಕರು ಈ ಎಲ್ಲಾ ಕಾರ್ಯಕ್ರಮಗಳನ್ನು ಮನಸಾರೆ ಮೆಚ್ಚಿದ್ದು ನಮ್ಮ ಹುರುಪನ್ನು ಮತ್ತಷ್ಟು ಹೆಚ್ಚಿಸಿದೆ. ಟೆಲಿವಿಷನ್ ಜೊತೆಗೆ OTT ಪ್ಲಾಟ್ಫಾರ್ಮ್ ಕನ್ನಡ ZEE5 “ನಮ್ಮ ಭಾಷೆ, ನಮ್ಮ ಕಥೆಗಳು” ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ-ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ. ಇನ್ನು ನಮಗೆ ವೀಕ್ಷಕರು ನೀಡುವ ಸಪೋರ್ಟ್ ಮತ್ತು ಪ್ರೀತಿ ಅಭೂತಪೂರ್ಣ” ಎಂದರು.

ಯಾರು ಯಾವ ಪ್ರಶಸ್ತಿಗೆ ಭಾಜೀನರಾದರು, ಯಾರು ಯಾವ ಹಾಡಿಗೆ ನೃತ್ಯ ಮಾಡಿದರು, ಯಾರು ಯಾವ ಉಡುಗೆಯಲ್ಲಿ ಮಿಂಚಿದರು ಹೀಗೆ ಮತ್ತಷ್ಟು ಇಂಟೆರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ನಗು, ತರ್ಲೆ, ಅಳು, ನೋವು, ನಲಿವು ಮತ್ತು ಇನ್ನಷ್ಟು ಭಾವನೆಗಳ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ನೋಡಿ ‘ ಕನ್ನಡ ಕುಟುಂಬ ಅವಾರ್ಡ್ಸ್-2025!
ಜನಮೆಚ್ಚಿದ ತಾರೆಗಳಿಗೆ ಪ್ರಶಸ್ತಿಯ ಗೌರವ ಇದೇ 17, 18 ಮತ್ತು 19 ರಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ಕನ್ನಡ ವಾಹಿನಿಯಲ್ಲಿ ನೋಡಲು ಮರೆಯದಿರಿ!

ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕರಾದ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮತ್ತು ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಷ್ಟೇ ಅಲ್ಲದೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನವರಸ ನಾಯಕ ಜಗ್ಗೇಶ್, ಶ್ರೀನಾಥ್, ಸುಧಾರಾಣಿ, ಪ್ರೇಮ, ನಾಗಾಭರಣ, ಯೋಗರಾಜ್ ಭಟ, ಡಾಲಿ ಧನಂಜಯ್, ರಚಿತಾ ರಾಮ್, ವಿಜಯ ರಾಘವೇಂದ್ರ, ಅದಿತಿ ಪ್ರಭುದೇವ, ಪೃಥ್ವಿ ಅಂಬರ್, ಮಾನ್ವಿತ ಹರೀಶ್, ಅಮೂಲ್ಯ, ರಿಷಿ, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್, ಸಪ್ತಮಿ ಗೌಡ , ಪ್ರಮೋದ್ ಶೆಟ್ಟಿ, ವಿಕ್ರಂ ರವಿಚಂದ್ರನ್ ಮತ್ತು ಅನೇಕ ಸ್ಯಾಂಡಲವುಡ್ ಕಲಾವಿದರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಅಷ್ಟೇ ಅಲ್ಲದೆ ಹಾಡಿನ ಮೂಲಕ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮಾಡಿರೋ ನಿರೂಪಣೆ ಎಲ್ಲರ ಗಮನ ಸೆಳೆಯಿತು.

ಕರೆ ಮಾಡಿದ ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿದ ಅಪರಿಚಿತ

ಬೆಂಗಳೂರು, ಅ.15- ಸರ್ಕಾರಿ ಆಸ್ತಿಗಳ ಆವರಣದಲ್ಲಿ ಆರ್‌ಎಸ್‌‍ಎಸ್‌‍ನ ಚಡುವಟಿಕೆಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದಿದ್ದ ಗ್ರಾಮೀಣಾಭಿವವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಮುಂದುವರೆದಿದ್ದು, ವ್ಯಕ್ತಿಯೊಬ್ಬರ ಅಶ್ಲೀಲ ನಿಂದನೆಯನ್ನು ತಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಚಿವರು ಹಂಚಿಕೊಂಡಿದ್ದಾರೆ.

ಕರೆ ಮಾಡಿರುವ ವ್ಯಕ್ತಿ ಸಚಿವರನ್ನು ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಸಚಿವರ ಯಾವ ಮಾತುಗಳನ್ನು ಕೇಳಿಸಿಕೊಳ್ಳದೇ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾಂಕ ಖರ್ಗೆ, ಆರ್‌ಎಸ್‌‍ಎಸ್‌‍ ಯುವಕರ, ಮಕ್ಕಳ ಮನಸುಗಳಲ್ಲಿ ಕಲಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ ಎಂದಿದ್ದಾರೆ.

ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್‌ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಶಾಸಕ ಸುನಿಲ್‌ಕುಮಾರ್‌, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಅವರಂತಹ ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ಮಕ್ಕಳು ತಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು, ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ ಎಂದು ಅನುಕಂಪ ವ್ಯಕ್ತಪಡಿಸಿದ್ದಾರೆ.

ನಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, ಆರ್‌ಎಸ್‌‍ಎಸ್‌‍ ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ, ಮುಗ್ದರನ್ನು ಬ್ರೈನ್‌ವಾಶ್‌ ಮಾಡಿ, ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌‍ಎಸ್‌‍ನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ, ಬುದ್ಧ, ಬಸವ, ಅಂಬೇಡ್ಕರ್‌ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ನಾನು ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ ಎಂದು ಪುನರುಚ್ಚರಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2025)

ನಿತ್ಯ ನೀತಿ : ಪ್ರಾರಬ್ಧ ಕರ್ಮವನ್ನು ಅನುಭವಿಸಿದ ಮೇಲೆ ನಿಶ್ಚಯವಾಗಿಯೂ ಸತ್ಕರ್ಮದ ಫಲವು ದೊರೆಯುತ್ತದೆಂಬ ದೃಢ ವಿಶ್ವಾಸ, ನಂಬಿಕೆಯನ್ನಿಟ್ಟು ಸ್ಥೈರ್ಯದಿಂದ ಬದುಕಬೇಕು.

ಪಂಚಾಂಗ : ಬುಧವಾರ, 15-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ನವಮಿ / ನಕ್ಷತ್ರ: ಪುಷ್ಯ / ಯೋಗ: ಸಾಧ್ಯ / ಕರಣ: ವಣಿಜ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.01
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿವೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳಲ್ಲಿ ತೃಪ್ತಿಕರವಾಗಲಿದೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ಧನುಸ್ಸು: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.