Friday, November 7, 2025
Home Blog Page 81

ಸಮೀಕ್ಷೆ ಮುಂದೂಡಲು ಸಿ.ಟಿ.ರವಿ ಆಗ್ರಹ

ಬೆಂಗಳೂರು,ಸೆ.27- ಪೂರ್ವ ತಯಾರಿ ಹಾಗೂ ಸೂಕ್ತ ತರಬೇತಿ ಅಗತ್ಯ ಇರುವುದರಿಂದ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಸುದೀರ್ಘ ಪತ್ರ ಬರೆದಿರುವ ಸಿ.ಟಿ.ರವಿ, ರಾಜ್ಯಾದ್ಯಂತ ನಡೆಸುತ್ತಿರುವ ಸಮೀಕ್ಷೆ ಸಾಕಷ್ಟು ಗೊಂದಲದಿಂದ ಕೂಡಿದೆ. ಸಮೀಕ್ಷೆದಾರರಿಗೆ ಸೂಕ್ತವಾದ ತರಬೇತಿ, ಪೂರ್ವ ಸಿದ್ದತೆ ಇಲ್ಲದೇ ಇರುವುದರಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.

ಗಣತಿದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕಡೆ ನೆಟ್‌ವರ್ಕ್‌ ಸಿಗದೆ ಗೊಂದಲಕ್ಕೆ ಸಿಲುಕಿದ್ದಾರೆ. ಅಲ್ಲದೆ ಅವರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಿಹರಿಸುವ ಬದಲು ನೀವು ಅವರಿಗೆ ಬೆದರಿಕೆ ಹಾಕುತ್ತಿದ್ದೀರಿ. ಇದರಿಂದ ನಿಮ ಕನಸಿನ ಕೂಸು ಬಡವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಈಗಾಗಲೇ ಆರಂಭವಾಗಿದ್ದು, ಸಮೀಕ್ಷೆಯ ಸಂದರ್ಭದಲ್ಲಿ, ಈಗಾಗಲೇ ಹೆಚ್ಚುವರಿ ಜವಾಬ್ದಾರಿಗಳ ಹೊರೆಯಿಂದ ಬಳಲಿರುವ ಶಿಕ್ಷಕರು, ಇನ್ನಷ್ಟು ತೀವ್ರ ಸವಾಲುಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ.

ಕೆಲವೆಡೆ ಗಣತಿದಾರರಿಗೆ ಸ್ಥಳ ನಿಯುಕ್ತಿ ಸೇರಿದಂತೆ ಸಮೀಕ್ಷೆಯ ಮಾಹಿತಿ ಸಂಗ್ರಹಿಸಲು ನಿಗದಿಪಡಿಸಿರುವ ಅಪ್ಲಿಕೇಷನ್‌ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ನೆಟ್ವರ್ಕ್‌ ಸರಿಯಾಗಿ ಲಭ್ಯವಾಗದೆ ಇರುವುದರಿಂದ ಗಣತಿದಾರ ಶಿಕ್ಷಕರು ಸಮಸ್ಯೆಗೀಡಾಗಿದ್ದಾರೆ.

ಸಮೀಕ್ಷೆಗೆ ಸರಿಯಾದ ಪೂರ್ವ ತಯಾರಿ. ಯೋಜನೆ ಮತ್ತು ತಾಂತ್ರಿಕ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾಗಿರುವ ಶಂಕೆ ಮೂಡುತ್ತಿದೆ. ಪ್ರಾಯೋಗಿಕವಾಗಿ ಟ್ರಯಲ್‌ ನಡೆಸಿ, ಅದರ ಅನುಭವದ ಮೇಲೆ ಸಂಪೂರ್ಣ ಸಮೀಕ್ಷಾ ಕಾರ್ಯವನ್ನು ವಿಸ್ತರಿಸಬೇಕಾಗಿತ್ತು. ಆದರೆ ಇಲ್ಲಿ ಇದ್ಯಾವುದನ್ನೂ ಮಾಡದೆ ಇರೋದು ಕಂಡುಬಂದಿದೆ. ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಎದುರಿಸುತ್ತಿರುವ ಸವಾಲುಗಳು ತೀವ್ರ ಗಂಭೀರವಾಗಿದ್ದು , ಈ ಸವಾಲುಗಳನ್ನು ಬಗೆಹರಿಸಿ ಎಂದು ಕೋರಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾರ್ಯನಿರ್ವಹಣೆಯ ಪ್ರಕ್ರಿಯೆಯಲ್ಲಿ ಹಲವಾರು ಗಂಭೀರ ಸವಾಲುಗಳು ಎದುರಾಗುತ್ತಿವೆ. ಈ ಸಮೀಕ್ಷೆಯನ್ನು ನಿರ್ವಹಿಸುತ್ತಿರುವ ಶಿಕ್ಷಕ ಗಣತಿದಾರರು ತಾಂತ್ರಿಕ ಹಾಗೂ ಪ್ರಾಯೋಗಿಕ ತೊಂದರೆಗಳಿಂದಾಗಿ ಗೊಂದಲಕ್ಕೀಡಾಗಿದ್ದಾರೆ. ಸಮೀಕ್ಷೆಯ ಸಮರ್ಪಕ ಪೂರ್ವತಯಾರಿ ಹಾಗೂ ತಾಂತ್ರಿಕ ಸೌಲಭ್ಯಗಳ ಕೊರತೆಯಿಂದ, ನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಮನೆಗಳ ನಿಖರವಾದ ಸರಣಿ ಜೋಡಣೆ ಮಾಡಲಾಗದಿರುವುದು ಗಣತಿದಾರರಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ. ಕೆಲವೊಮೆ ಒಂದೇ ಮನೆಯನ್ನು ಎರಡು ಬಾರಿ ದಾಖಲು ಮಾಡುವ ಪರಿಸ್ಥಿತಿಯೂ ಎದುರಾಗುತ್ತಿದೆ ಮತ್ತು ಕೆಲವು ಮನೆಗಳು ತಪ್ಪಿಹೋಗುತ್ತಿರುವುದು ಕಂಡುಬಂದಿದೆ.ಮನೆ ಗುರುತಿಸಲು ನೀಡಲಾಗಿರುವ ಯು.ಎಚ್‌.ಐ.ಡಿ ಸಂಖ್ಯೆಯ ಮೂಲಕ ಮಾಹಿತಿ ಹುಡುಕುವಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಇದು ಗಣತಿದಾರರ ಸಮಯ ಮತ್ತು ಶ್ರಮವನ್ನು ವ್ಯರ್ಥಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಮೀಕ್ಷೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ವ್ಯವಸ್ಥೆಗೆ ಅವಲಂಬಿಸಿರುವುದರಿಂದ, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್‌ ಸೌಲಭ್ಯ ಕೊರತೆ ತೀವ್ರ ಸಮಸ್ಯೆಯಾಗಿದೆ. ಅನೇಕ ಸಂದರ್ಭಗಳಲ್ಲಿ ಸಮೀಕ್ಷೆಯ ಕೆಲಸ ಮಧ್ಯದಲ್ಲೇ ನಿಲ್ಲುತ್ತಿದೆ. ಗಣತಿದಾರರ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ಸಮೀಕ್ಷೆ ಗಣತಿದಾರರ ಕೆಲಸವನ್ನು ಅವರ ಕಾರ್ಯಸ್ಥಳಕ್ಕಿಂತ ದೂರದ ಪ್ರದೇಶಗಳಲ್ಲಿ ಹಂಚಿರುವುದರಿಂದ ಸಂಚಾರದಲ್ಲಿ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ., ಸಮೀಕ್ಷೆಗೆ ಸಂಬಂಧಿಸಿದ ಮನೆಗಳ ವಿಳಾಸ ಪಟ್ಟಿ ನೀಡದಿರುವುದು, ಹಾಗೂ ಸದಸ್ಯರನ್ನು ಸೇರಿಸುವುದು ಅಥವಾ ತೆಗೆದುಹಾಕುವ ಆಯ್ಕೆಯ ಕೊರತೆಯಿಂದ ಗೊಂದಲ ಹೆಚ್ಚಾಗಿದೆ.

ಒಂದೇ ದಿನ ಹಲವು ಗಂಟೆಗಳ ಕಾಲ ಮೊಬೈಲ್‌ ಬಳಸಿ ಮಾಹಿತಿಯನ್ನು ದಾಖಲಿಸುವುದರಿಂದ ಶಿಕ್ಷಕರು ಕಣ್ಣಿನ ತೊಂದರೆ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ನ್ಯೂನ್ಯತೆ ಹೊಂದಿರುವವರು, ಅನಾರೋಗ್ಯ ಪೀಡಿತರು ಹಾಗೂ ವಯೋವೃದ್ಧ ಶಿಕ್ಷಕರಿಗೆ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಕಷ್ಟಕರವಾಗಿದೆ. ಒಬ್ಬಂಟಿ ಮಹಿಳಾ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಸಾಮಾಜಿಕ ಮುಜುಗರದ ಸಮಸ್ಯೆಗಳು ಎದುರಾಗುತ್ತಿವೆ. ಕೆಲ ಶಿಕ್ಷಕರಿಗೆ ಮೊಬೈಲ್‌ ಹಾಗೂ ತಾಂತ್ರಿಕ ಉಪಕರಣಗಳ ಬಳಕೆಯಲ್ಲಿನ ಪರಿಣತಿ ಕೊರತೆಯಿಂದ ಸಮೀಕ್ಷಾ ಕಾರ್ಯ ಇನ್ನಷ್ಟು ಕಷ್ಟಕರವಾಗಿದೆ ಎಂದು ಗಮನ ಸೆಳೆದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ, ಜನ ಜೀವನ ತತ್ತರ

ಬೆಂಗಳೂರು,ಸೆ.27- ರಾಜ್ಯದ ನಾನಾ ಕಡೆ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಹಾನಿ ಸಂಭವಿಸಿದ್ದು, ಬಾಗಲಕೋಟೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಬಾಗಲಕೋಟೆ, ಬೀದರ್‌, ಕಲಬುರಗಿ, ಬೆಳಗಾವಿ, ವಿಜಯಪುರ, ಸೇರಿದಂತೆ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.

ಈ ನಡುವೆ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಸರ್ಕಾರ ಸೂಚಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ ಸೇರಿದಂತೆ ಇಡೀ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಿರಂತರ ಮಳೆಗೆ ಮನೆಯ ತಗಡಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ನಾಗಪ್ಪ ಲಾತೂರ್‌ ಮಗ ದರ್ಶನ್‌ ಲಾತೂರ್‌ (11) ಮೃತಪ್ಟಿದ್ದಾನೆ.

ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಭಂಭವಿಸಿದೆ. ಘಟನೆಯಲ್ಲಿ ಇನ್ನೊಬ್ಬ ಬಾಲಕ ಶ್ರೀಶೈಲ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಲ್ಲಿ ಭಾರೀ ಮಳೆಯಿಂದ ಎಲ್ಲೆಡೆ ಪ್ರವಾಹ ಉಂಟಾಗಿದೆ. ಹಲವು ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಗ್ರಾಮಗಳ ಸಂಪರ್ಕ ಕಡಿದುಕೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಜೇವರ್ಗಿ ಪಟ್ಟಣದ ಕಟ್ಟಿಸಂಗಾರಿ ಸೇತುವೆ ಮುಳುಗಡೆಯಾಗಿದೆ. ಎರಡು ದಿನ ನಿರಂತರ ಮಳೆಯಾಗುತ್ತಿರುವುದರಿಂದ ಕರ್ಚಾಖೇಡ ಗ್ರಾಮಕ್ಕೆ ನೀರು ನುಗ್ಗಿ ಅನೇಕ ಮನೆಗಳು ಜಲಾವೃತಗೊಂಡಿವೆ. ದೇವಸ್ಥಾನಕ್ಕೆ ಹಳ್ಳದ ನೀರು ಹರಿದ ಪರಿಣಾಮ ಜನರು ಪರದಾಡುವಂತಾಗಿದೆ. ತಾಲ್ಲೂಕಿನ ಯಂಕಂಚಿ ಗ್ರಾಮದ ಬಸವೇಶ್ವರ ಹಾಗೂ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಪ್ರವಾಹದ ಭೀತಿ ಎದುರಾಗಿದೆ.

ಸನ್ನತಿ ಬ್ಯಾರೇಜ್‌ನಿಂದ ಯಾದಗಿರಿ ಕಡೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಭೀಮಾನದಿ ಪ್ರವಾಹಕ್ಕೆ ರೈತರ ಬದುಕು ಅಕ್ಷರಶಃ ನಲುಗಿ ಹೋಗಿದೆ. ನಾಯ್ಕಲ್‌ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಹಾನಿಗೊಂಡಿವೆ. ಈ ಪ್ರದೇಶದ ಒಂದು ಕಿ.ಮೀ ಸುತ್ತ ನೀರು ನುಗ್ಗಿರುವುದರಿಂದ ಬೆಳೆದಿದ್ದ ಭತ್ತ, ಹತ್ತಿ ಬೆಳೆಗಳು ಮುಳುಗಡೆಯಾಗಿವೆ.

ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಹಿನ್ನೆಲೆ ದಸರಾ ರಜೆ ನಡುವೆಯೂ ಕೆಲವು ಆಡಳಿತ ಮಂಡಳಿಯವರು ಶಾಲೆ ನಡೆಸುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಸದರಿ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಿ ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ ಆದೇಶ ಹೊರಡಿಸಿದ್ದಾರೆ.

ಚಂದ್ರಂಪಳ್ಳಿ ಜಲಾಶಯಕ್ಕೆ 7,500 ಕ್ಯೂಸೆಕಗೂ ಅಧಿಕ ಒಳ ಹರಿವಿದ್ದು ಮೂರು ಗೇಟುಗಳನ್ನು ತಲಾ 10 ಅಡಿ ತೆರೆದು ನೀರು ಬಿಡಲಾಗಿದೆ. ಇದರಿಂದ ಚಂದ್ರಂಪಳ್ಳಿ ಕೂಡು ಸೇತುವೆ ಸಂಪೂರ್ಣ ಮುಳುಗಿದೆ. ಗ್ರಾಮ ಸಂಪರ್ಕ ಕಡಿದುಕೊಂಡಿದ್ದು ಗ್ರಾಮಸ್ಥರು ಜಾಗೃತರಾಗಿರಲು ಯೋಜನಾಧಿಕಾರಿ ಚೇತನ ಕಳಸ್ಕರ ಮನವಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಜೋರು ಮಳೆ ಸುರಿಯುತ್ತಿದ್ದು ಕುಂಭ ದ್ರೋಣ ಮಳೆಗೆ ಜನರು ತಲ್ಲಣಗೊಂಡಿದ್ದಾರೆ. ಚಂದಾಪುರ, ಗಾರಂಪಳ್ಳಿ, ಅಣವಾರ, ಕಲ್ಲೂರು, ಕನಕಪುರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ.

ಬೀದರ್‌ನಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ನದಿಗಳು, ಹಳ್ಳಕೊಳ್ಳಗಳು, ತೊರೆಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ನದಿಗಳಿಗೆ ವ್ಯಾಪಕ ಪ್ರಮಾಣದ ನೀರು ಹರಿದುಬಂದಿದೆ.

ಕೆಲವು ಕಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲಾಡಳಿತ ನದಿ ಪಕ್ಕದ ಜನರನ್ನು ಬಲವಂತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬಿಟ್ಟೂ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹುಲಸುರು, ಬೀದರ್‌ ತಾಲೂಕು, ಭಾಲ್ಕಿಯಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಹುಲಸೂರು ತಾಲೂಕಿನ ಇಂಚುರು ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿದು ರಸ್ತೆ ಸಂಚಾರ ಬಂದಾಗಿದೆ.

ಹುಲಸೂರು ಇಂದ ಭಾಲ್ಕಿ ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುತ್ತಿದ್ದು ಬೀದರ್‌ ತಾಲೂಕಿನ ಚಿಲ್ಲರ್ಗಿ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಚಾರ ಬಂದಾಗಿದೆ. ಸೇತುವೆ ಮೇಲೆ ನೀರು ಹರಿದು ಪರಿಣಾಮ ರಸ್ತೆ ಸಂಚಾರ ಬಂದಾಗಿದ್ದು, ಚಿಲ್ಲರ್ಗಿ ಟು ಚಿಮಕೋಡ್‌, ಗಾದಗಿ ರಸ್ತೆ ಸಂಚಾರ ಬಂದಾಗಿದೆ. ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುತ್ತಿದ್ದರೆ, ಕೆಲವರು ನೀರು ತುಂಬಿದ ರಸ್ತೆ ಮೇಲೆಯ ನಡೆದುಕೊಂಡು ಸೇತುವೆ ದಾಟುತ್ತಿದ್ದಾರೆ.

ಇನ್ನೂ ಕಮಲನಗರದ ಗ್ರಾಮವೊಂದರಲ್ಲಿ ರಸ್ತೆ ಮೇಲೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ದಾಟಲು ಎಮೆಗಳು ಪರದಾಡಿವೆ. ಮಾಂಜ್ರಾನದಿಗೆ ಲಕ್ಷ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮಾಂಜ್ರಾನದಿ ದಡದಲ್ಲಿರುವ ಲಕ್ಷಾಂತರ ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಬೆಳಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಧಾರಾಕಾರ ಮಳೆ ಹಾಗೂ ಮಾಂಜ್ರಾನದಿ ಎಫೆಕ್ಟ್‌ ಜಿಲ್ಲೆಯ ಜನ್ರ ಜೀವನ ಮೂರಾಬಟ್ಟೆಯಾಗಿದ್ದು ಇಂದು ಕೂಡಾ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್‌ ಘೋಷಣೆಮಾಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ಮನೆಗಳು ಜಲಾವೃತಗೊಂಡಿದೆ. ಪ್ರವಾಹ ಸ್ಥಿತಿಯ ನಡುವೆಯೂ ತೋಟದಲ್ಲಿ ಕುಟುಂಬಗಳು ವಾಸವಿದ್ದರು. ತೋಟದ ಮನೆಗಳಲ್ಲಿದ್ದ 8 ಜನರನ್ನು ಬೋಟ್‌ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಕಲಬುರಗಿ : ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ

ಗುಲ್ಬರ್ಗ,ಸೆ.27-ಮಳೆ ಹಾಗೂ ಪ್ರವಾಹ ಪೀಡಿತ ಚಿತ್ತಾಪುರ ತಾಲೂಕಿನ ಹಳೆ ಹೆಬ್ಬಾಳ ಗ್ರಾಮಕ್ಕೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.ಈ ಸಂದರ್ಭದಲ್ಲಿ ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇಟ್ಟಾಗ, ಗ್ರಾಮಸ್ಥರಿಗೆ ಸ್ಪಂದಿಸಿದ ಸಚಿವರು, ಮಳೆ ತುಸು ಕಡಿಮೆಯಾದ ನಂತರ ಗ್ರಾಮಕ್ಕೆ ಮತ್ತೆ ಭೇಟಿ ನೀಡಿ ಬೇಡಿಕೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ಗ್ರಾಮದ ಸ್ಥಳಾಂತರಕ್ಕೆ ತಾವು ಮುಂದಾಗಿರುವುದಾಗಿ ಹೇಳಿದ ಸಚಿವರು, ಎಷ್ಟು ಕುಟುಂಬಗಳು ಸ್ಥಳಾಂತರಗೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಈ ನಡುವೆ ಗ್ರಾಮಸ್ಥರೊಂದಿಗೆ ಗ್ರಾಮಸಭೆ ನಡೆಸುವಂತೆ ಸ್ಥಳದಲ್ಲಿದ್ದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಎಸಿ ಸಾಹಿತ್ಯ ಅವರಿಗೆ ಸೂಚಿಸಿದರು.
ಗ್ರಾಮಸ್ಥರಿಗೆ ಬೇಕಾಗುವ ಸೌಲಭ್ಯ ಒದಗಿಸುವಂತೆ ಕಾಳಗಿ ತಹಸೀಲ್ದಾರ್‌ ಅವರಿಗೆ ಸೂಚಿಸಿದರು.

ನಿರಂತರ ಮಳೆಯಿಂದ ಬೆಣ್ಣೆತೊರ ಜಲಾಶಯದಿಂದ ನೀರು ಹರಿಬಿಟ್ಟಿದ್ದರಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಒಂದೇ ದಿನ 90 ಕೋಟಿ ಗಳಿಸಿದ ಪವನ್‌ ಕಲ್ಯಾಣ್‌ ನಟನೆಯ OG ಚಿತ್ರ

ನವದೆಹಲಿ, ಸೆ.27- ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ನಟನೆಯ ದಿ ಕಾಲ್‌ ಹಿಮ್‌ ಒಜಿ ಚಿತ್ರವು ಬಾಕ್ಸ್ ಆಫೀಸ್‌‍ನಲ್ಲಿ ಬಿರುಗಾಳಿ ಎಬ್ಬಿಸಿದೆ. ವಾಟ್‌್ಸ ಹ್ಯಾಪನಿಂಗ್‌ ಸುಜೀತ್‌ ನಿರ್ದೇಶನದ ಗ್ಯಾಂಗ್‌ಸ್ಟರ್‌ ಆಕ್ಷನ್‌ ಥ್ರಿಲ್ಲರ್‌ ಚಿತ್ರ ಬಿಡುಗಡೆಯಾದ ಮೊದಲ ದಿನವೇ 90 ಕೋಟಿ ಲೂಟಿ ಮಾಡಿದ್ದು 100 ಕೋಟಿ ಕ್ಲಬ್‌ ಸೇರುವತ್ತ ಮುನ್ನಡೆದಿದೆ.

ಪ್ರೀಮಿಯರ್‌ ಶೋಗಳಿಂದ 25 ಕೋಟಿ ರೂ. ಸೇರಿದಂತೆ ಭಾರತದಲ್ಲಿ ಮೊದಲ ದಿನ ಅಂದಾಜು 90 ಕೋಟಿ ರೂ. ಗಳಿಸಿರುವ ಈ ಚಿತ್ರ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಕೂಲಿ ಚಿತ್ರವನ್ನು ಹಿಂದಿಕ್ಕಿದೆ ಮತ್ತು ತೆಲುಗು ಚಿತ್ರವೊಂದಕ್ಕೆ ಏಳನೇ ಅತಿದೊಡ್ಡ ಆರಂಭಿಕ ಮತ್ತು ದೇಶೀಯವಾಗಿ ಎಂಟನೇ ಅತಿದೊಡ್ಡ ಆರಂಭಿಕ ಸ್ಥಾನವನ್ನು ಪಡೆದುಕೊಂಡಿದೆ.

ಆದಾಗ್ಯೂ, ದಾಖಲೆಯ ಆರಂಭದ ನಂತರ, ಚಿತ್ರವು ಎರಡನೇ ದಿನದಂದು ಸಂಗ್ರಹದಲ್ಲಿ ತೀವ್ರ ಕುಸಿತ ಕಂಡಿದೆ. ಸಕ್ನಿಲ್ಕ್ ಪ್ರಕಾರ, ದಿ ಕಾಲ್‌ ಹಿಮ್‌ ಒಜಿ ಚಿತ್ರವು ತನ್ನ ಎರಡನೇ ದಿನದಲ್ಲಿ 19.6 ಕೋಟಿ ರೂ. ನಿವ್ವಳ ಗಳಿಸಿದೆ. ಇದು ಶೇಕಡಾ 69.25 ರಷ್ಟು ಕುಸಿತವನ್ನು ಸೂಚಿಸುತ್ತದೆ.

ಮೊದಲ ದಿನವೇ ವಿಶ್ವದಾದ್ಯಂತ 144 ಕೋಟಿ ರೂ. ಕಲೆಕ್ಷನ್‌ ಮಾಡಿ, ಪ್ರಭಾಸ್‌‍ ಅವರ ಸಾಹೋ ಚಿತ್ರವನ್ನು ಹಿಂದಿಕ್ಕಿದೆ. ಇದರಲ್ಲಿ 42.50 ಕೋಟಿ ರೂ. ವಿದೇಶಿ ಮಾರುಕಟ್ಟೆಗಳಿಂದ ಬಂದಿತ್ತು. ಆರಂಭಿಕ ಚಿತ್ರ ಜೂನಿಯರ್‌ ಎನ್‌ಟಿಆರ್‌ ಅವರ ದೇವರ ಮತ್ತು ದಳಪತಿ ವಿಜಯ್‌ ಅವರ ಲಿಯೋ ಚಿತ್ರಗಳನ್ನು ಮೀರಿಸಿದೆ, ಇವೆರಡೂ ವಿಶ್ವಾದ್ಯಂತ ಸುಮಾರು 142 ಕೋಟಿ ರೂ. ಗಳಿಸಿದ್ದವು.

ದ ಕಾಲ್‌ ಹಿಮ್‌ ಒಜಿ ಚಿತ್ರದಲ್ಲಿ ಪವನ್‌ ಕಲ್ಯಾಣ್‌ ಓಜಸ್‌‍ ಗಂಭೀರ ಎಂಬ ಕ್ರೂರ ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದಾರೆ, ಅವರು ತಮ್ಮ ಸಾಮ್ರಾಜ್ಯವನ್ನು ಮರಳಿ ಪಡೆಯಲು ಮತ್ತು ತೆಲುಗು ಚೊಚ್ಚಲ ಚಿತ್ರದಲ್ಲಿ ಇಮ್ರಾನ್‌ ಹಶ್ಮಿ ನಿರ್ವಹಿಸಿದ ಓಮಿ ಭೌ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ.ಈ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್‌, ಪ್ರಕಾಶ್‌ ರಾಜ್‌, ಅರ್ಜುನ್‌ ದಾಸ್‌‍, ಶ್ರೀಯಾ ರೆಡ್ಡಿ ಮತ್ತು ಶಾಮ್‌ ಕೂಡ ನಟಿಸಿದ್ದಾರೆ, ಜಾಕಿ ಶ್ರಾಫ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿಂಸಾಚಾರ ಪೀಡಿತ ಲಡಾಖ್‌ನಲ್ಲಿ ಕರ್ಫ್ಯೂ ಮುಂದುವರಿಕೆ

ಲೇಹ್‌, ಸೆ. 27 (ಪಿಟಿಐ) ಹಿಂಸಾಚಾರ ಪೀಡಿತ ಲಡಾಖ್‌ನಲ್ಲಿ ಇಂದೂ ಕೂಡ ಕರ್ಫ್ಯೂ ಜಾರಿಯಲ್ಲಿದೆ. ಹವಾಮಾನ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌‍ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌‍ಎ) ಅಡಿಯಲ್ಲಿ ಹಿಂದಿನ ದಿನ ಬಂಧಿಸಿದ ನಂತರ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಗಸ್ತು ಮತ್ತು ತಪಾಸಣೆಯನ್ನು ತೀವ್ರಗೊಳಿಸಿವೆ ಹಾಗೂ ಕಳೆದ ಮೂರು ದಿನಗಳಿಂದ ಇರುವ ಕರ್ಫ್ಯೂ ಮುಂದುವರೆಸಿದ್ದಾರೆ.

ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಆಡಳಿತವು ವಾಂಗ್‌ಚುಕ್‌ ಬಂಧನವನ್ನು ಸಮರ್ಥಿಸಿಕೊಂಡಿದೆ ಮತ್ತು ನೇಪಾಳ ಆಂದೋಲನ ಮತ್ತು ಅರಬ್‌ ವಸಂತವನ್ನು ಉಲ್ಲೇಖಿಸಿ ಅವರ ಪ್ರಚೋದನಕಾರಿ ಭಾಷಣಗಳ ಸರಣಿಯು ಬುಧವಾರದ ಹಿಂಸಾಚಾರಕ್ಕೆ ಕಾರಣವಾಯಿತು ಮತ್ತು ನಾಲ್ವರು ಸಾವನ್ನಪ್ಪಿದರು ಮತ್ತು ಹಲವಾರು ಇತರರು ಗಾಯಗೊಂಡರು ಎಂದು ಹೇಳಿದೆ.

ಶಾಂತಿ ಪ್ರಿಯ ಲೇಹ್‌ ಪಟ್ಟಣದಲ್ಲಿ ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಲು ಮತ್ತು ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆಗೆ ಪೂರ್ವಾಗ್ರಹ ಪೀಡಿತವಾಗಿ ಅವರು ಮುಂದೆ ಈ ರೀತಿ ವರ್ತಿಸುವುದನ್ನು ತಡೆಯಲು ವಾಂಗ್‌ಚುಕ್‌‍ ಬಂಧನವು ಮುಖ್ಯ ಎಂದು ಅದು ಹೇಳಿದೆ.
ಕಳೆದ 24 ಗಂಟೆಗಳಲ್ಲಿ ಲಡಾಖ್‌ನಲ್ಲಿ ಎಲ್ಲಿಂದಲಾದರೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನಿರ್ಬಂಧಗಳು ಜಾರಿಯಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಲೆಫ್ಟಿನೆಂಟ್‌ ಗವರ್ನರ್‌ ಕವಿಂದರ್‌ ಗುಪ್ತಾ ಶೀಘ್ರದಲ್ಲೇ ರಾಜಭವನದಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕರ್ಫ್ಯೂ ಸಡಿಲಿಸುವ ಯಾವುದೇ ನಿರ್ಧಾರವನ್ನು ಅದಕ್ಕೆ ತಕ್ಕಂತೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಂದ ಗಸ್ತು ಮತ್ತು ತಪಾಸಣೆ ತೀವ್ರಗೊಳಿಸಲಾಗಿದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕೌನ್ಸಿಲರ್‌ ಸೇರಿದಂತೆ ಪರಾರಿಯಾಗಿರುವ ಗಲಭೆಕೋರರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ ಎಂದು ಅಧಿಕಾರಿ ಹೇಳಿದರು.

ಘರ್ಷಣೆಯ ನಂತರ 50 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ಆದರೆ ಕಾರ್ಗಿಲ್‌ ಸೇರಿದಂತೆ ಕೇಂದ್ರಾಡಳಿತ ಪ್ರದೇಶದ ಇತರ ಪ್ರಮುಖ ಪಟ್ಟಣಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸುವ ನಿಷೇಧಿತ ಆದೇಶಗಳ ಅಡಿಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಲ್ಲಿವೆ.ಲಡಾಖ್‌ನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ಡಿಐಪಿಆರ್‌) ತಡರಾತ್ರಿ ಹೇಳಿಕೆಯಲ್ಲಿ ಹೀಗೆ ಹೇಳಿದೆ: ವಾಂಗ್‌ಚುಕ್‌‍ ರಾಜ್ಯದ ಭದ್ರತೆಗೆ ಹಾನಿಕರ ಮತ್ತು ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ ಮತ್ತು ಸಮುದಾಯಕ್ಕೆ ಅಗತ್ಯವಾದ ಸೇವೆಗಳಿಗೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪದೇ ಪದೇ ಕಂಡುಬಂದಿದೆ.ಉನ್ನತ ಅಧಿಕಾರ ಸಮಿತಿಯ ಸಭೆಯ ಬಗ್ಗೆ ಸರ್ಕಾರದಿಂದ ಸ್ಪಷ್ಟ ಸಂವಹನ ಮತ್ತು ಮುಂದೆ ಪೂರ್ವ ಸಭೆಗಳನ್ನು ನೀಡುವ ಪ್ರಸ್ತಾಪದ ಹೊರತಾಗಿಯೂ, ವಾಂಗ್ಚುಕ್‌ ತನ್ನ ಗುಪ್ತ ಉದ್ದೇಶದಿಂದ ಸೆಪ್ಟೆಂಬರ್‌ 10 ರಿಂದ ಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾನೆ ಎಂದು ಅದು ಹೇಳಿದೆ.

ಅವರ ಪ್ರಚೋದನಕಾರಿ ಭಾಷಣಗಳ ಸರಣಿ, ನೇಪಾಳ ಚಳವಳಿಗಳು, ಅರಬ್‌ ವಸಂತ ಇತ್ಯಾದಿಗಳ ಉಲ್ಲೇಖಗಳು ಮತ್ತು ದಾರಿತಪ್ಪಿಸುವ ವೀಡಿಯೊಗಳು ಸೆಪ್ಟೆಂಬರ್‌ 24 ರಂದು ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು, ಅಲ್ಲಿ ಸಂಸ್ಥೆಗಳು, ಕಟ್ಟಡಗಳು ಮತ್ತು ವಾಹನಗಳನ್ನು ಸುಟ್ಟುಹಾಕಲಾಯಿತು, ಮತ್ತು ಅದರ ಪರಿಣಾಮವಾಗಿ, ಪೊಲೀಸ್‌‍ ಸಿಬ್ಬಂದಿಯ ಮೇಲೆ ದಾಳಿ ಮಾಡಲಾಯಿತು, ಇದು ನಾಲ್ವರು ವ್ಯಕ್ತಿಗಳ ದುರದೃಷ್ಟಕರ ಸಾವಿಗೆ ಕಾರಣವಾಯಿತು.ಸರ್ಕಾರದೊಂದಿಗಿನ ಮಾತುಕತೆಯನ್ನು ಅದೇ ಕಾರ್ಯಸೂಚಿಯಲ್ಲಿ ಪುನರಾರಂಭಿಸಿದಾಗ ಅವರು ಉಪವಾಸ ಸತ್ಯಾಗ್ರಹವನ್ನು ರದ್ದುಗೊಳಿಸುವ ಮೂಲಕ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಮೀರಿ ಮೇಲೇರಲು ಸಾಧ್ಯವಿದ್ದರೆ ಇಡೀ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಂಜಾಬ್‌ನ ಪೆಟ್ರೋಲ್‌ ಬಾಂಬ್‌ ದಾಳಿಯ ಉಗ್ರನನ್ನು ಯುಎಇಯಿಂದ ಭಾರತಕ್ಕೆ ಕರೆತರುವಲ್ಲಿ ಸಿಬಿಐ ಯಶಸ್ವಿ

ನವದೆಹಲಿ,ಸೆ.27- ಮಹತ್ವದ ಬೆಳೆವಣಿಗೆಯಲ್ಲಿ ಪಂಜಾಬ್‌ನ ಪೆಟ್ರೋಲ್‌ ಬಾಂಬ್‌ ದಾಳಿಯಲ್ಲಿ ಭಾಗಿಯಾಗಿದ್ದ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಭಯೋತ್ಪಾದಕನನ್ನು ಸಿಬಿಐ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಸಿಬಿಐ ಹಾಗೂ ಪಂಜಾಬ್‌ ಪೊಲೀಸರ ಸಮನ್ವಯದೊಂದಿಗೆ ಉಗ್ರನನ್ನು ಯುಎಇಯಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು.

ನಿರ್ಮಲ್‌ ಸಿಂಗ್‌ ಅಲಿಯಾಸ್‌‍ ಪಿಂಡಿ ಕರೆಯಲ್ಪಡುತ್ತಿದ್ದ ಪರ್ಮಿಂದರ್‌ ಸಿಂಗ್‌ ಭಾರತದ ಅನೇಕ ಕಡೆ ಭಯೋತ್ಪಾದನೆಯ ಕೃತ್ಯ ನಡೆಸಿ ಯುಇಎನಲ್ಲಿ ತಲೆಮರೆಸಿಕೊಂಡಿದ್ದ. ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಹಣವನ್ನು ಸಂಗ್ರಹಿಸುವುದು, ಕೊಲೆ ಯತ್ನ, ಸುಲಿಗೆ, ಕ್ರಿಮಿನಲ್‌ ಬೆದರಿಕೆ ಸೇರಿದಂತೆ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.

ಭಾರತದಿಂದ ಈತ ಪಲಾಯನ ಮಾಡಿದ ನಂತರ ವಿದೇಶದಲ್ಲಿ ಅಡಗಿಕೊಂಡಿದ್ದ.ಸಿಬಿಐನ ಅಂತಾರಾಷ್ಟ್ರೀಯ ಪೊಲೀಸ್‌‍ ಸಹಕಾರ ಘಟಕ (ಐಪಿಸಿಯು), ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ, ಅಬುಧಾಬಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ಸಿಬಿ) ಮತ್ತು ಪಂಜಾಬ್‌ ಪೊಲೀಸರ ಸಮನ್ವಯದೊಂದಿಗೆ ಈ ಸಂಪೂರ್ಣ ಕಾರ್ಯಾಚರಣೆಯನ್ನು ನಡೆಸಿತು. ಸೆಪ್ಟೆಂಬರ್‌ 26ರಂದು ಪಂಜಾಬ್‌ ಪೊಲೀಸ್‌‍ ತಂಡವು ಆತನನ್ನು ಭಾರತಕ್ಕೆ ಕರೆತಂದಿದೆ.

ಇದಕ್ಕೂ ಮೊದಲು, ಜೂನ್‌ 13 ರಂದು, ಪಂಜಾಬ್‌ ಪೊಲೀಸರ ಕೋರಿಕೆಯ ಮೇರೆಗೆ, ಸಿಬಿಐ ಇಂಟರ್ಪೋಲ್‌ ಮೂಲಕ ರೆಡ್‌ ನೋಟಿಸ್‌‍ ಹೊರಡಿಸಿತ್ತು. ತರುವಾಯ, ಯುಎಇ ಏಜೆನ್ಸಿಗಳು ಆರೋಪಿಯನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದವು.ಪಂಜಾಬ್‌ ಪೊಲೀಸರ ಕೋರಿಕೆಯ ಮೇರೆಗೆ ರೆಡ್‌ ಕಾರ್ನರ್‌ ನೋಟಿಸ್‌‍ (ಆರ್‌ಸಿಎನ್‌) ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಹಿರಿಯ ಪೊಲೀಸ್‌‍ ಅಧಿಕಾರಿಯ ನೇತೃತ್ವದ ನಾಲ್ವರು ಸದಸ್ಯರ ತಂಡವು ಸೆ.24ರಂದು ಯುಎಇಗೆ ಪ್ರಯಾಣ ಬೆಳೆಸಿ ಅಲ್ಲಿ ಆರೋಪಿಗಳನ್ನು ಸ್ವದೇಶಕ್ಕೆ ಮರಳಿ ಕರೆತಂದಿತು.

ಕಳೆದ ಕೆಲವು ವರ್ಷಗಳಲ್ಲಿ, ಸಿಬಿಐ 130ಕ್ಕೂ ಹೆಚ್ಚು ವಿದೇಶಗಳಿಂದ ಪರಾರಿಯಾಗಿದ್ದ ಕೈದಿಗಳನ್ನು ಯಶಸ್ವಿಯಾಗಿ ಹಸ್ತಾಂತರಿಸಿ ಗಡೀಪಾರು ಮಾಡಿದೆ.ಪರ್ಮಿಂದರ್‌ ಸಿಂಗ್‌ ಅವರನ್ನು ಹಸ್ತಾಂತರಿಸುವುದು ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ ದೊರೆತ ಪ್ರಮುಖ ಗೆಲುವು ಎಂದು ಪಂಜಾಬ್‌ ಪೊಲೀಸರು ಹೇಳಿದ್ದಾರೆ.

ಪರ್ಮಿಂದರ್‌ ಸಿಂಗ್‌ ನಿಯೋಜಿತ ಭಯೋತ್ಪಾದಕ ಹರ್ವಿಂದರ್‌ ಸಿಂಗ್‌ ರಿಂಡಾ ಅವರ ಆಪ್ತ ಸಹಚರನಾಗಿದ್ದಾನೆ. ಫೆಬ್ರವರಿ 2023ರಲ್ಲಿ ಗೃಹ ಸಚಿವಾಲಯವು ರಿಂಡಾನನ್ನು ಪಟ್ಟಿ ಮಾಡಿದ ಭಯೋತ್ಪಾದಕ ಎಂದು ಘೋಷಿಸಿತು. ಲಾಹೋರ್‌ನಲ್ಲಿ ನೆಲೆಸಿರುವ ರಿಂಡಾ ಬಿಕೆಐ ಮುಖ್ಯಸ್ಥನಾಗಿದ್ದು, ಐಎಸ್‌‍ಐ ನಿರ್ದೇಶನದ ಮೇರೆಗೆ ರಿಂಡಾ ಮತ್ತು ಹ್ಯಾಪಿ ಪಾಸಿಯಾ ಅವರು ಪಂಜಾಬ್‌ನಲ್ಲಿ 13 ಗ್ರೆನೇಡ್‌ ದಾಳಿಗಳನ್ನು ನಡೆಸಿರುವುದನ್ನು ತನಿಖೆಯಲ್ಲಿ ಬಹಿರಂಗಗೊಂಡಿದೆ.

ರೆಡ್‌ ನೋಟಿಸ್‌‍ ಎಂದರೇನು?
ರೆಡ್‌ ನೋಟಿಸ್‌‍ ಎಂದರೆ ಪರಾರಿಯಾದವರನ್ನು ಸೆರೆಹಿಡಿಯಲು ಸಹಾಯ ಮಾಡಲು ವಿಶ್ವದಾದ್ಯಂತ ಪೊಲೀಸ್‌‍ ಸಂಸ್ಥೆಗಳಿಗೆ ಇಂಟರ್ಪೋಲ್‌ ನೀಡುವ ಎಚ್ಚರಿಕೆ.ಭಾರತದಲ್ಲಿ ಇಂಟರ್ಪೋಲ್‌ಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಸಿಬಿಐ ರಾಷ್ಟ್ರೀಯ ಕೇಂದ್ರೀಯ ಬ್ಯೂರೋ (ಎನ್ಸಿಬಿ) ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಇಂಟರ್ಪೋಲ್‌ ನೆಟ್ವರ್ಕ್‌ ಮೂಲಕ ವಿವಿಧ ಭಾರತೀಯ ಏಜೆನ್ಸಿಗಳನ್ನು ಸಂಪರ್ಕಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇಂಟರ್ಪೋಲ್‌ಗಳ ಸಹಾಯದಿಂದ, 130ಕ್ಕೂ ಹೆಚ್ಚು ಪರಾರಿಯಾದವರನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ.

ಇಂಟರ್ಪೋಲ್‌ ಏಷ್ಯನ್‌ ಸಮಿತಿಗೆ ಭಾರತ ಆಯ್ಕೆ
ಇಂಟರ್ಪೋಲ್‌ ಏಷ್ಯನ್‌ ಸಮಿತಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತವು ಅಂತರರಾಷ್ಟ್ರೀಯ ಕಾನೂನು ಜಾರಿಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸಿಂಗಾಪುರದಲ್ಲಿ ನಡೆದ 25 ನೇ ಏಷ್ಯನ್‌ ಪ್ರಾದೇಶಿಕ ಸಮೇಳನದ ಸಂದರ್ಭದಲ್ಲಿ ಈ ಚುನಾವಣೆ ನಡೆದಿದ್ದು, ಕಠಿಣ ಬಹು-ಹಂತದ ಮತದಾನ ಪ್ರಕ್ರಿಯೆಯ ನಂತರ ಭಾರತ ಯಶಸ್ವಿಯಾಗಿ ಹೊರಹೊಮಿತು.

ಜಾಗತಿಕ ಪೊಲೀಸ್‌‍ ಮತ್ತು ಭದ್ರತಾ ಸಹಯೋಗದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವಲ್ಲಿ ಈ ಬೆಳವಣಿಗೆ ಒಂದು ನಿರ್ಣಾಯಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಏಷ್ಯನ್‌ ಸಮಿತಿಯು ಪ್ರಮುಖ ಸಲಹಾ ಕಾರ್ಯವನ್ನು ನಿರ್ವಹಿಸುತ್ತದೆ, ಅಪರಾಧವನ್ನು ಎದುರಿಸಲು ಕಾರ್ಯತಂತ್ರದ ಆದ್ಯತೆಗಳನ್ನು ನಿಗದಿಪಡಿಸುವ ಮೂಲಕ ಮತ್ತು ಪ್ರದೇಶದಾದ್ಯಂತ ವರ್ಧಿತ ಪೊಲೀಸ್‌‍ ಸಹಕಾರವನ್ನು ಬೆಳೆಸುವ ಮೂಲಕ ಏಷ್ಯನ್‌ ಪ್ರಾದೇಶಿಕ ಸಮೇಳನಕ್ಕೆ ಸಹಾಯ ಮಾಡುತ್ತದೆ.

ಗ್ರೇಟರ್‌ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಮಹತ್ವದ ಕೋರ್‌ ಕಮಿಟಿ ಸಭೆ

ಬೆಂಗಳೂರು,ಸೆ.27- ಮುಂಬರುವ ಜಿಬಿಎ (ಗ್ರೇಟರ್‌ ಬೆಂಗಳೂರು ಅಥಾರಟಿ ) ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸುವ ಕುರಿತು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸಂಜೆ ಬಿಜೆಪಿಯ ಮಹತ್ವದ ಕೋರ್‌ ಕಮಿಟಿ ಸಭೆ ನಡೆಯಲಿದೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಕೋರ್‌ ಕಮಿಟಿ ಸಭೆಗೆ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಅಗರ್‌ವಾಲ್‌, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌‍.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗಿಯಾಗುವರು. ಮುಂಬರುವ ಜಿಬಿಎ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿ ಐದು ಪಾಲಿಕೆಗಳಲ್ಲೂ ಗೆಲ್ಲಲೇಬೇಕಾದ ರೂಪಿಸಲಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್‌, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರಿಗೆ ಹೊಂದುಕೊಂಡಿರುವ ಚಿಕ್ಕಬಳ್ಳಾಪುರ ಸೇರಿದಂತೆ ಐದು ಕ್ಷೇತ್ರಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಮತದಾರರು ಬಿಜೆಪಿಗೆ ಒಲವು ತೋರಿರುವುದರಿಂದ ಮೊದಲ ಬಾರಿಗೆ ಬಿಬಿಎಂಪಿ ವಿಭಜನೆಗೊಂಡು ಐದು ಮಹಾನಗರ ಪಾಲಿಕೆಯಾಗಿ ಗ್ರೇಟರ್‌ ಬೆಂಗಳೂರು ಅಥಾರಟಿ ಎಂಬ ಹೆಸರಿನೊಂದಿಗೆ ಅಸ್ತಿತ್ವಕ್ಕೆ ಬಂದಿದೆ.ಐದಕ್ಕೆ 5 ಪಾಲಿಕೆಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ನಗರದ ಜನತೆಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳು, ಮುಚ್ಚದೇ ಇರುವ ಗುಂಡಿಗಳು, ಹೆಚ್ಚುತ್ತಿರುವ ಅಪಘಾತ, ಬೆಂಗಳೂರು ಬಿಟ್ಟು ಕೆಲವು ಬಹುರಾಷ್ಟ್ರೀಯ ಕಂಪನಿಗಳು ಹೊರರಾಜ್ಯಕ್ಕೆ ಹೋಗಲು ಮುಂದಾಗಿರುವುದು, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಹೀಗೆ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲಿದೆ.

ಇನ್ನು ಕೋರ್‌ ಕಮಿಟಿ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚುನಾವಣೆಯನ್ನು ಡಿಸೆಂಬರ್‌ ನಂತರ ನಡೆಸಲು ಸರ್ಕಾರ ಉದ್ದೇಶಿಸಿದೆ.ಇದೇ ಸಂದರ್ಭದಲ್ಲಿ ಚುನಾವಣೆ ಎದುರಾದರೆ ಹೆಚ್ಚಿನ ಸ್ಥಾನ ಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಪ್ರಮುಖರು ಚರ್ಚೆ ನಡೆಸಲಿದ್ದಾರೆ.

ಸರ್ಕಾರ ಪ್ರತಿದಿನ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಿದ್ದು, ಜಾತಿ ಜನಗಣತಿಯಿಂದ ಉಂಟಾಗಿರುವ ಗೊಂದಲ, ಹಿಂದೂ ಧರ್ಮದ ಉಪಜಾತಿಗಳ ಜೊತೆ ಕ್ರಿಶ್ಚಿಯನ್‌ ಧರ್ಮದ ಸೇರ್ಪಡೆ, ಸರ್ಕಾರದ ಮೇಲೆ ಕೇಳಿ ಬರುತ್ತಿರುವ ಹಗರಣಗಳು, ಅಭಿವೃದ್ದಿ ಕುಂಠಿತ ಹೀಗೆ ಸಾಲು ಸಾಲು ವೈಫಲ್ಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಗೊತ್ತಾಗಲಿದೆ.

ತನ್ನ ಸಹಪಾಠಿಯ ತಾಯಿಯನ್ನೇ ವಿವಾಹದ ವಿದ್ಯಾರ್ಥಿ

ಟೋಕಿಯೋ, ಸೆ.27-ಯುವಕನೊಬ್ಬ ತನ್ನ ಸಹಪಾಠಿಯ ತಾಯಿಯನ್ನೇ ವಿವಾಹವಾಗಿರುವ ವಿಚಿತ್ರ ಘಟನೆ ಜಪಾನ್‌ನಲ್ಲಿ ನಡೆದಿದೆ. 33 ವರ್ಷದ ಇಸಾಮು ಟೊಮಿಯೋಕಾ ತನ್ನ ಸಹಪಾಠಿ ತಾಯಿಯಾಗಿದ್ದ 54 ವರ್ಷದ ಮಿಡೋರಿಯಾ ಅವರನ್ನು ಮದುವೆಯಾಗಿದ್ದಾರೆ.ತನ್ನ ಶಾಲಾ ದಿನಗಳಲ್ಲಿ ಪೇರೆಂಟ್‌್ಸ, ಟೀಚರ್‌ ಮೀಟಿಂಗ್‌ನಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಭೇಟಿಯಾಗಿದ್ದ ಯುವಕ ದಶಕಗಳ ಬಳಿಕ ತನ್ನ ಹಳೆಯ ಸಹಪಾಠಿ ನಡೆಸುತ್ತಿದ್ದ ಬ್ಯೂಟಿ ಸಲೂನ್‌ನಲ್ಲಿ ನಡೆದ ಆಕಸ್ಮಿಕ ಭೇಟಿಯು ಇವರ ಪ್ರೀತಿಗೆ ಕಾರಣವಾಗಿತ್ತು.

ನಾನು ಆಕೆಯನ್ನು ನೋಡಿದಾಕ್ಷಣ ಪ್ರೀತಿಯಲ್ಲಿ ಬಿದ್ದೆ ಎಂದು ಮಿಡೋರಿಯಳನ್ನು ಭೇಟಿಯಾದ ದಿನವನ್ನು ನೆನಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಕೆ ಗಂಡನಿಂದ ವಿಚ್ಛೇದನ ಪಡೆದಿದ್ದರು. ತನ್ನನ್ನು ಇಷ್ಟು ಸಣ್ಣವನು ಇಷ್ಟಪಡುತ್ತಿರುವ ಬಗ್ಗೆ ಖುಷಿ ಎನಿಸಿದರೂ ತುಂಬಾ ಆಶ್ಚರ್ಯ ಕೂಡಾ ಆಗಿತ್ತು ಎಂದು ಮಿಡೋರಿ ಹೇಳಿದ್ದಾರೆ.

ಇಬ್ಬರೂ ಪ್ರವಾಸಕ್ಕೆ ಹೋಗಿ ಜತೆಗೆ ಸಮಯ ಕಳೆದಿದ್ದರು. ಬಲೂನ್‌ಗಳು, ಹೂವುಗಳಿಂದ ತುಂಬಿದ ಹೋಟೆಲ್‌ ಕೊಠಡಿ ಆತ ಕೊಟ್ಟ ಸರ್ಪ್ರೈಸ್‌‍ಗಳಿಂದ ಆತನ ಪ್ರೀತಿಯಲ್ಲಿ ಬೀಳದೆ ಇರಲು ಕಾರಣವೇ ಇರಲಿಲ್ಲ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಮಿಡೋರಿ ಕುಟುಂಬದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದವು.ಮಿಡೋರಿಗೆ ಈಗ 54 ವರ್ಷ ನೀವು ನಿಮ್ಮದೇ ಆದ ಸ್ವಂತ ಮಗುವನ್ನು ಹೊಂದಲು ಸಾಧ್ಯವಿಲ್ಲ, ನಿನಗಿನ್ನೂ 30 ವರ್ಷ ನಿನ್ನ ವಯಸ್ಸಿನವಳನ್ನೇ ಮದುವೆಯಾಗಬಹುದಲ್ಲಾ ಎಂದು ಇಸಾಮುಗೆ ಹಲವರು ಬುದ್ಧಿವಾದ ಹೇಳಿದ್ದರು.

ಆತ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಟೋಮಿಯೋಕಾದಲ್ಲಿ ಮನೆಯನ್ನು ಖರೀದಿಸಿ, ಮಿಡೋರಿ ಪೋಷಕರೆದುರು ಆಕೆಯನ್ನು ಮದುವೆ ಮಾಡಿಕೊಡುವಂತೆ ಧೈರ್ಯದಿಂದ ಕೇಳಿದ್ದ, ಅಂತಿಮವಾಗಿ ಇಬ್ಬರೂ ಹಿರಿಯರ ಆಶೀರ್ವಾದ ಸಿಕ್ಕಿದೆ. 2024ರ ಜುಲೈನಲ್ಲಿ ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಂಡರು.ಟೊಮಿಯೋಕಾ ಮಿಡೋರಿಯ ಮಗಳಿಗೆ ಮಲತಂದೆ ಮಾತ್ರವಲ್ಲದೆ ಅವರ ನಾಲ್ವರು ಮೊಮ್ಮಕ್ಕಳಿಗೆ ಅಜ್ಜನೂ ಆಗಿದ್ದಾರೆ.

‘ನಾನು ವೀಕೆಂಡ್‌ ರಾಜಕಾರಣಿ ಅಲ್ಲ’ : ನಟ ವಿಜಯ್‌ ಕಾಲೇಳೆದ ಉದಯನಿಧಿ

ಚೆನ್ನೈ,ಸೆ. 27 (ಪಿಟಿಐ) ನಾನು ವೀಕೆಂಡ್‌ ರಾಜಕಾರಣಿ ಅಲ್ಲ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರು ನಟ ಕಮ್‌ ರಾಜಕಾರಣಿ ವಿಜಯ್‌ಗೆ ಟಾಂಗ್‌ ನೀಡಿದ್ದಾರೆ.

ನಾನು ಕೆಲವರಂತೆ ಶನಿವಾರ ಮಾತ್ರ ಪ್ರಚಾರ ಅಥವಾ ಪಕ್ಷದ ಕೆಲಸಕ್ಕೆ ಹೋಗುವುದಿಲ್ಲ ಅವರಿಗೆ ಸಿದ್ಧಾಂತದ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಅವರು ವಿಜಯ್‌ ಕಾಲು ಎಳೆದಿದ್ದಾರೆ.

ನಮ ಡಿಎಂಕೆ ಪಕ್ಷ ಕಾಂಗ್ರೆಸ್‌‍ ಪಕ್ಷದ ಮೈತ್ರಿಕೂಟದ ಭಾಗವಾಗಿ ಮುಂದುವರಿಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.ಡಿಎಂಕೆ ನಾಯಕ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು, ವಿರೋಧ ಪಕ್ಷದ ನಾಯಕ ಈಗ ನೆನಪಿಸಿಕೊಳ್ಳುತ್ತಿರುವುದು ಬಿಜೆಪಿ ಉನ್ನತ ನಾಯಕ ಅಮಿತ್‌ ಶಾ ಅವರನ್ನು ಮತ್ತು ಅವರು ಎಐಎಡಿಎಂಕೆ ಸಂಸ್ಥಾಪಕ ನಾಯಕ ಎಂಜಿ ರಾಮಚಂದ್ರನ್‌ ಅವರನ್ನು ಸಹ ಮರೆತಿದ್ದಾರೆ ಎಂದು ಹೇಳಿದರು.

ನಾನು ಪ್ರತಿ ಶನಿವಾರ ಮಾತ್ರ ಹೊರಗೆ ಬರುವುದಿಲ್ಲ ಎಂದು ಇಲ್ಲಿ ನಡೆದ ಡಿಎಂಕೆ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಅವರು ಗುಡುಗಿನ ಚಪ್ಪಾಳೆಯೊಂದಿಗೆ ಹೇಳಿದರು.ಇದಲ್ಲದೆ, ಉಪಮುಖ್ಯಮಂತ್ರಿ ಅವರು ತಮ್ಮ ಕೆಲಸವನ್ನು ಮಾಡಲು ವಾರದ ದಿನವನ್ನು ನೋಡುವುದಿಲ್ಲ ಮತ್ತು ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳುತ್ತಾರೆ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಪ್ರವಾಸ ಆರಂಭಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್‌‍, ಇದುವರೆಗೆ ಶನಿವಾರ ಮಾತ್ರ ಪ್ರಚಾರ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ, ವಿಜಯ್‌ ತಮ್ಮ ಪ್ರಚಾರ ವೇಳಾಪಟ್ಟಿಯಲ್ಲಿ ಆಯ್ದ ಭಾನುವಾರಗಳನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

.ಮುಂದಿನ 6 ತಿಂಗಳ ಕಾಲ, ಪದಾಧಿಕಾರಿಗಳು ಪ್ರತಿದಿನ ಜನರನ್ನು ಭೇಟಿ ಮಾಡಬೇಕು ಮತ್ತು ಪ್ರಚಾರವನ್ನು ವೇಗಗೊಳಿಸಬೇಕು. ತಿನ್ನೈ ಪ್ರಚಾರಂ (ಮನೆ-ಮನೆಗೆ ಪ್ರಚಾರ) ವನ್ನು ಕೈಗೆತ್ತಿಕೊಳ್ಳಬೇಕು ಮತ್ತು ಡಿಎಂಕೆ ಆಡಳಿತದ ಸಾಧನೆಗಳನ್ನು ಸಾರ್ವಜನಿಕರಿಗೆ ವಿವರಿಸಬೇಕು.ಟಿವಿಕೆಯನ್ನು ಗುರಿಯಾಗಿಸಿಕೊಂಡು, ಅದರ ನೇರ ಹೆಸರನ್ನು ಹೇಳದೆ, ಉಪ ಮುಖ್ಯಮಂತ್ರಿ ಹೇಳಿದರು.

ಕೆಲವು ಪಕ್ಷಗಳು ಹೊಸದಾಗಿ ಹುಟ್ಟಿಕೊಂಡಿವೆ ಮತ್ತು ಅಂತಹ ಸಂಘಟನೆಗಳ ಸದಸ್ಯರಿಗೆ ಸಿದ್ಧಾಂತದ ಬಗ್ಗೆ ತಿಳಿದಿಲ್ಲ; ಸಿದ್ಧಾಂತ ಏನೆಂಬುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ.ಆದ್ದರಿಂದ, ಡಿಎಂಕೆ ಪದಾಧಿಕಾರಿಗಳು ಪಕ್ಷದ ಸಿದ್ಧಾಂತ ಮತ್ತು ರಾಜ್ಯದ ಹಕ್ಕುಗಳು ಮತ್ತು ತಮಿಳು ಭಾಷೆಯ ರಕ್ಷಣೆಗಾಗಿ ಪಕ್ಷವು ಮಾಡಿದ ತ್ಯಾಗಗಳ ಕುರಿತು ಪ್ರಚಾರ ಮಾಡಬೇಕು.

ನೀವು ನಮ್ಮ ಸಿದ್ಧಾಂತದ ಬಗ್ಗೆ ಯುವಕರನ್ನು ತಲುಪಬೇಕು, ನೀವು ಅದನ್ನು ಮಾಡುತ್ತೀರಾ? ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ವಿದ್ಯಾರ್ಥಿಗಳೊಂದಿಗೆ ಮಾತನಾಡಬೇಕು; ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಿದ್ಧಾಂತದ ಬಗ್ಗೆ ತಿಳಿದಿಲ್ಲದ ಕಾರಣ. ಡಿಎಂಕೆ ಕೇವಲ ಚುನಾವಣೆಗಳಲ್ಲಿ ಹೋರಾಡುವ ಸಲುವಾಗಿ ಸ್ಥಾಪಿಸಲಾದ ಪಕ್ಷವಲ್ಲ. ಇದು ಜನರ ಹಕ್ಕುಗಳಿಗಾಗಿ ಹೋರಾಡಲು ಸ್ಥಾಪಿಸಲಾದ ಪಕ್ಷವಾಗಿದೆ ಎಂದು ಅವರು ಹೇಳಿದರು.

ಕಾಶ್ಮೀರ : ಉಗ್ರನ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಎನ್‌ಐಎ

ನವದೆಹಲಿ, ಸೆ. 26 (ಪಿಟಿಐ) ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುವಲ್ಲಿ ತೊಡಗಿರುವ ಹಿಜ್ಬುಲ್‌ ಮುಜಾಹಿದ್ದೀನ್‌ (ಎಚ್‌ಎಂ) ಭಯೋತ್ಪಾದಕನ ಸ್ಥಿರ ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಟ್ಟುಗೋಲು ಹಾಕಿಕೊಂಡಿದೆ.

ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಏಪ್ರಿಲ್‌ನಲ್ಲಿ ಬಂಧಿಸಲ್ಪಟ್ಟ ಆರೋಪಪಟ್ಟಿಯಲ್ಲಿ ಆರೋಪಿಯಾಗಿರುವ ತಾರಿಕ್‌ ಅಹ್ಮದ್‌ ಮಿರ್‌ ಅವರ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಮಾಲ್ಡೇರಾ ಗ್ರಾಮದಲ್ಲಿ 780 ಚದರ ಅಡಿ ಅಳತೆಯ ಭೂಮಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್‌ ಹಾಗೂ ಒಂದೇ ಅಂತಸ್ತಿನ ವಸತಿ ಕಟ್ಟಡ ಮತ್ತು ಹಣ್ಣಿನ ತೋಟದ ರೂಪದಲ್ಲಿ ಎಂಟು ಮಾರ್ಲಾ ಅಳತೆಯ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಸೇರಿವೆ ಎಂದು ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ ಸದಸ್ಯ ಸೈಯದ್‌ ನವೀದ್‌ ಮುಷ್ತಾಕ್‌ ನ ಸಹಚರ ಮಿರ್‌ ವಿರುದ್ಧ 2024 ರ ಅಕ್ಟೋಬರ್‌ನಲ್ಲಿ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಯಿತು.

ಭಾರತದ ಶಾಂತಿ, ಸ್ಥಿರತೆ ಮತ್ತು ಸಾಮರಸ್ಯವನ್ನು ಭಂಗಗೊಳಿಸುವ ಉದ್ದೇಶದಿಂದ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ನಡೆಸುತ್ತಿರುವ ಕ್ರಮದ ಭಾಗವಾಗಿ ಇಂದಿನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.