ಬೆಂಗಳೂರು, ಜೂ.6- ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರು ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್ಸ್ಟೇಬಲ್ನಿಂದ ಹೆಚ್ಚುವರಿ ಆಯುಕ್ತರ ವರೆಗೂ ಒಂದು ತಂಡವಾಗಿ ಸಮನ್ವಯದಿಂದ ನೋಡುತ್ತಿದ್ದ ಅವರನ್ನು ಡೈನಾಮಿಕ್ ಅಧಿಕಾರಿ ಎಂದೇ ಸಾರ್ವಜನಿಕ ವಲಯದಲ್ಲಿ ಹೆಸರುವಾಸಿಯಾಗಿದ್ದರು.
ನಗರದಲ್ಲಿನ ಶೇ. 80 ಪೊಲೀಸ್ ಠಾಣೆಗಳಿಗೆ ಅವರು ಭೇಟಿ ನೀಡಿ ಅಲ್ಲಿನ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಅಪರಾಧ ಪ್ರಕರಣಗಳನ್ನು ತಹಬದಿಗೆ ತಂದಿದ್ದರು.ಪ್ರತಿ ತಿಂಗಳ 2 ಹಾಗೂ 4 ನೇ ಶನಿವಾರದಂದು ಮಾಸಿಕ ಜನಸಂಪರ್ಕ ದಿವಸ್ ಹಾಗೂ ಸಂಚಾರ ಸಂಪರ್ಕ ದಿವಸ್ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಿದ್ದರು. ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುತ್ತಿದ್ದರು.ಸಂಚಾರ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದಾಗ ಆ ಕ್ಷಣವೇ ಸ್ಥಳದಲ್ಲಿ ಸಂಚಾರಿ ಪೊಲೀಸರಿಗೆ ಸಮಸ್ಯೆ ಬಗೆಹರಿಸಲು ಸೂಚಿಸುತ್ತಿದ್ದರು.
ಹಿರಿಯರ ಮಾಸಿಕ ಸಭೆಯಲ್ಲಿ ಡಿಜಿಟಲ್ ಬಗ್ಗೆ ಅವರಿಗೆ ತಿಳುವಳಿಕೆ ನೀಡುತ್ತಿದ್ದರು. ಅಲ್ಲದೇ ಪ್ರತಿ ತಿಂಗಳ ಕೊನೆ ದಿನ ಶಾಲಾ ಕಾಲೇಜುಗಳಿಗೆ ಹೋಗಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದ ದಯಾನಂದ ಅವರು ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನ ಐಪಿಎಸ್ ಅಧಿಕಾರಿಯಾಗಿದ್ದರು.ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದರು.
ಅಪರಾಧ ಪ್ರಕರಣಗಳ ತಡೆಗೆ ನಗರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಶ್ರಮಿಸಿದ್ದಾರೆ.ನಗರದಲ್ಲಿ ಯಾವುದೇ ಘಟನೆಗಳು ನಡೆದ ತಕ್ಷಣ ಸಂಬಂಧಿಸಿದ ಠಾಣೆಯಲ್ಲಿ ಎಫ್ಐಆರ್ ದಾಖಲಿಸುತ್ತಿದ್ದರು. ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರು.
ಲೈವ್ ಬ್ಯಾಂಡ್, ಹುಕ್ಕಾಬಾರ್ ಮುಂತಾದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದ ಆಯುಕ್ತರು ಮಾದಕ ವಸ್ತುಗಳ ಸಾಗಾಟ, ಮಾರಾಟ ತಡೆಗೆ ಹೆಚ್ಚು ಗಮನ ಹರಿಸಿದ್ದರು.ಇವರ ಅಧಿಕಾರದ ಅವಧಿಯಲ್ಲಿ ಅತೀ ಹೆಚ್ಚು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ ಅಪಾರ ಪ್ರಮಾಣದ ಗಾಂಜಾ, ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಯುಕ್ತರ ಕಚೇರಿಗೆ ಬರುವಂತಹ ಸಾರ್ವಜನಿಕರನ್ನು ಸೌಜನ್ಯದಿಂದ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಸ್ಪಂಧಿಸಿ ಬಗೆಹರಿಸುತ್ತಿದ್ದರು. ಹೀಗೆ ಹತ್ತು-ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸುಮಾರು ಎರಡು ವರ್ಷಗಳ ಅವರ ಅಧಿಕಾರ ಅವಧಿಯಲ್ಲಿ ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದಂತೆ ಯಾವುದೇ ಘೋರ ದುರಂತಗಳು ನಡೆದಿರಲಿಲ್ಲ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ , ಬಂಧಿಸಿ ಕಳವು ಮಾಲುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭದ್ರತೆ ನಿರ್ವಹಣೆ ವೈಫಲ್ಯವಾಗಿದೆ ಎಂಬ ಆರೋಪದ ಮೇರೆಗೆ ದಯಾನಂದ ಅವರನ್ನು ಅಮಾನತು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟಾಗಿದೆ.