ಬೆಂಗಳೂರು,ಮಾ.5- ಉಪಮುಖ್ಯ ಮಂತ್ರಿ ಎಂಬುದನ್ನು ಮರೆತು, ಪಾಳೇಗಾರನಂತೆ ಹೆದರಿಸುವ, ಬೆದರಿಸುವ ಸೊಕ್ಕಿನ ಮಾತುಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಹೇಳಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರದ ದರ್ಪ ತಲೆಗೇರಿದೆ ಎಂದು ಆರೋಪಿಸಿದೆ. ರಾಜ್ಯದ ಮೇಕೆದಾಟು ವಿಚಾರವಾಗಿ ಇಂಡಿ ಕೂಟದ ಕಾಂಗ್ರೆಸ್ ಮಿತ್ರಪಕ್ಷ ತಮಿಳುನಾಡಿನ ಸ್ಟಾಲಿನ್ ಸರ್ಕಾರವನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲದ, ನೀವು ಕನ್ನಡ ಚಿತ್ರರಂಗದ ನಟ-ನಟಿಯರಿಗೆ ಗೊಡ್ಡು ಬೆದರಿಕೆ ಹಾಕುತ್ತೀರಿ ಎಂದು ಟೀಕಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ತಾಳಕ್ಕೆ ಕುಣಿಯದ ಚಿತ್ರರಂಗ ಹಾಗೂ ಕಲಾವಿದರ ಮೇಲೆ ಅಸೂಯೆ, ದ್ವೇಷ ಕಾರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದೆ.ತಮಿಳುನಾಡಿನ ಜೊತೆಗೆ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಿಕೊಂಡು, ರಾಜ್ಯದ ರೈತರಿಗೆ ದೋಹ ಬಗೆಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ಯಾಕೆ ಬೆಂಬಲಿಸಬೇಕು? ಎಂದು ಜೆಡಿಎಸ್ ಟೀಕಾ ಪ್ರಹಾರ ನಡೆಸಿದೆ.