ಬೆಂಗಳೂರು,ಆ.9- ರಾಜ್ಯ ರಾಜಧಾನಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಾಗೂ ನಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದು, ಬಿಜೆಪಿ ಕಾರ್ಯಕರ್ತರ ಹುಮಸ್ಸು ನೂರ್ಮಡಿಗೊಂಡಿದೆ.
ಮೋದಿ ಅವರು ಆಗಮಿಸುವ ಪ್ರಮುಖ ರಸ್ತೆಗಳಲ್ಲಿ ದಾರಿಯುದ್ದಕ್ಕೂ ಅವರಿಗೆ ಸ್ವಾಗತ ಕೋರಲು ಆಳೆತ್ತರದ ಕಟೌಟ್ ಗಳನ್ನು ಆಳವಡಿಲಾಗಿದೆ. ಬಹುತೇಕ ಕಡೆ ಬಿಜೆಪಿಯ ಬಾವುಟಗಳು ರಾರಾಜಿಸುತ್ತಿದ್ದು, ಬೆಂಗಳೂರು ಒಂದು ರೀತಿ ಕೇಸರಿಮಯವಾಗಿದೆ. ನಾಳೆ ಬೆಳಗ್ಗೆ 7.50ಕ್ಕೆ ದೆಹಲಿಯಿಂದ ವಿಮಾನ ಮೂಲಕ ಹೊರಟು 10.30ಕ್ಕೆ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 10.35ಕ್ಕೆ ಎಚ್ಎಎಲ್ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಏರ್ ಫೋರ್ಸ್ ಕಮಾಂಡೊ ತರಬೇತಿ ಕೇಂದ್ರಕ್ಕೆ 10.55ಕ್ಕೆ ಆಗಮಿಸುವರು.
ತರಬೇತಿ ಕೇಂದ್ರದಿಂದ 11 ಗಂಟೆಗೆ ರಸ್ತೆ ಮೂಲಕ ಹೊರಟು 11.10 ಕೆಆರ್ಎಸ್-2 ರಾಯಣ್ಣ ನಿಲ್ದಾಣ ತಲುಪುವರು. ಅಲ್ಲಿ 11.15ರಿಂದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್್ಸಪ್ರೆಸ್ ಜತೆಗೆ ಅಮೃತಸರ-ಶ್ರೀಮಾತಾ ವೈಷ್ಟೋ ದೇವಿ ಕಟ್ರಾ ಮತ್ತು ನಾಗಪುರ-ಪುಣೆ (ವರ್ಚುವೆಲ್) ರೈಲು ಸಂಚಾರ ಸೇವೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಿದ್ದಾರೆ.
ಅನಂತರ 11.30ರಿಂದ 11.40ರ ವರೆಗೆ ರಸ್ತೆ ಮೂಲಕ ಆರ್ ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ಸ್ಟೇಷನ್ಗೆ ಆಗಮಿಸುವರು. 11.45 ರಿಂದ 12.50ರವರೆಗೆ 1, 2 ಮಾರ್ಗದಲ್ಲಿ ಆರ್ ವಿ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಪ್ರಧಾನಮಂತ್ರಿ ಅವರು ಸಂಚರಿಸಲಿದ್ದಾರೆ. ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಐಐಟಿ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೋ ಹಂತ-3ರ ಅಡಿಗಲ್ಲು ಹಾಕುವುದು ಹಾಗೂ ಆರ್ ವಿ ರಸ್ತೆಯಿಂದ ಬೊಮಸಂದ್ರವರೆಗಿನ ಹಳದಿ ಮಾರ್ಗಕ್ಕೆ ಚಾಲನೆ ನೀಡುವರು.
ಮೆಟ್ರೊ ಹಳದಿ ಮಾರ್ಗಕ್ಕೆ ಚಾಲನೆ :
ನಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲು ಸಂಚಾರದಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ಸಿಲ್ಕ್ ಬೋರ್ಡ್ ಸಂಚಾರ ದಟ್ಟಣೆ ಸಮಸ್ಯೆಯನ್ನು ಬಹುಮಟ್ಟಿಗೆ ಪರಿಹರಿಸಲಿದೆ. ಸಾರ್ವಜನಿಕ ಸಾರಿಗೆ ಬಳಕೆ ಮಾತ್ರವೇ ಸಂಚಾರ ದಟ್ಟಣೆ ಇಳಿಕೆಗೆ ಉತ್ತಮ ಪರಿಹಾರವಾಗಿದೆ. ಆರಂಭದಲ್ಲಿ ಲೋಕೋ ಪೈಲಟ್ಗಳೇ ರೈಲನ್ನು ಓಡಿಸಲಿದ್ದಾರೆ. ಆರ್ ವಿ ರಸ್ತೆಯಿಂದ ಬೊಮಸಂದ್ರ ಸಂಪರ್ಕಿಸುವ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋಗ (ಸಿಎಂಎಸ್ಆರ್) ಅನುಮತಿ ನೀಡಿದೆ.
ಮೆಟ್ರೊ ರೈಲು ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್ ಮಧುಕರ್ ಚೌಧರಿ ನೇತೃತ್ವದ ತಂಡವು ಜುಲೈ 22ರಿಂದ 25ರವರೆಗೆ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು.19.15 ಕಿ.ಮೀ ಉದ್ದದ ಹಳದಿ ಮಾರ್ಗಕ್ಕೆ ಈಗಾಗಲೇ ಮೂರು ರೈಲುಗಳು ಬಂದಿವೆ.
2014ರಲ್ಲಿ ಆರಂಭವಾದ ಈ ಯೋಜನೆ ಕಾಮಗಾರಿ 2021ಕ್ಕೆ ಪೂರ್ಣಗೊಂಡು ಜನರಿಗೆ ಲಭ್ಯವಾಗಬೇಕಿತ್ತು. ಆದರೆ ಉದ್ಘಾಟನೆಯ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ಚೀನಾ ಮೂಲದ ಸಿಆರ್ಆರ್ಸಿ ಸಂಸ್ಥೆ ಹಾಗೂ ಕೋಲ್ಕೊತ್ತಾದ ಬಳಿ ತನ್ನ ಉತ್ಪಾದನಾ ಘಟಕ ಹೊಂದಿರುವ ಟಿಟಾಗರ್ ರೈಲ್ ಸಿಸ್ಟಮ್ಸೌ ಲಿಮಿಟೆಡ್ ಬಿಎಂಆರ್ಸಿಎಲ್ಗೆ 216 ಕೋಚ್ಗಳನ್ನು (36 ರೈಲು ಸೆಟ್ಗಳು) ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿದೆ.
2019ರಲ್ಲಿ ಸಿಆರ್ಆರ್ಸಿ 216 ಕೋಚ್ಗಳಿಗೆ 1,578 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿತ್ತು. ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿಯು ವಿಫಲವಾದ ಹಿನ್ನೆಲೆಯಲ್ಲಿ ರೈಲು ಬೋಗಿಗಳ ವಿತರಣೆ ಸ್ಥಗಿತಗೊಳಿಸಿತು. ಬಳಿಕ ಕಂಪನಿಯು ಕೋಲ್ಕೊತ್ತಾದ ಟಿಟಾಗರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಬೋಗಿಗಳನ್ನು ನಿರ್ಮಿಸುತ್ತಿದೆ.
ಸದ್ಯ ನಮ ಮೆಟ್ರೋ 77 ಕಿ.ಮೀ ಸಂಚಾರ ನಡೆಸುತ್ತಿದ್ದು, ಇದಕ್ಕೆ ಹಳದಿ ಮಾರ್ಗದ 19.15 ಕಿ.ಮೀ ಸೇರ್ಪಡೆಯಾಗಲಿದೆ. ಇದರಿಂದಾಗಿ ಮೆಟ್ರೋ ಜಾಲ ಒಟ್ಟು 96 ಕಿ.ಮೀ.ಗೆ ವಿಸ್ತಾರವಾಗಲಿದೆ. ದೇಶದಲ್ಲಿ ಅತಿ ಉದ್ದದ ಮೆಟ್ರೋ ಜಾಲ ಹೊಂದಿದ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ದಿಲ್ಲಿ ಮೆಟ್ರೋ (395 ಕಿ.ಮೀ) ಮೊದಲ ಸ್ಥಾನದಲ್ಲಿದೆ.
ಮಾರ್ಗದಲ್ಲಿ ಓಡಲಿದೆ ಚಾಲಕ ರಹಿತ ರೈಲು:
ಈ ಮಾರ್ಗದಲ್ಲಿ ಚಾಲಕ ರಹಿತ ರೈಲು ಕಾರ್ಯಾಚರಣೆ ನಡೆಸಲಿದೆ. 2024ರ ಏಪ್ರಿಲ್ನಲ್ಲಿ ಮೊದಲ ಚಾಲಕ ರಹಿತ ಎಂಜಿನ್ ಹೊಂದಿರುವ ಪ್ರೊಟೊಟೈಪ್ (ಮೂಲ ಮಾದರಿ) ಪರೀಕ್ಷೆಗಳನ್ನು ಕೂಡ ಬಿಎಂಆರ್ಸಿಎಲ್ ನಡೆಸಿದೆ. ಇದೇ ಸಂದರ್ಭದಲ್ಲಿಚಾಲಕರಹಿತ ಎಂಜಿನ್ ಕೋಚ್ನಲ್ಲಿ ಸಂಚರಿಸಿ ಟ್ರ್ಯಾಕ್ಷನ್ ಮತ್ತು ಬ್ರೇಕಿಂಗ್ ಪರೀಕ್ಷೆ ನಡೆಸಲಾಯಿತು. ಅದೇ ವರ್ಷ ಸೆಪ್ಟೆಂಬರ್ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್ಡಿಎಸ್ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ನಡೆಸಿತ್ತು.
ಹಳದಿ ಮಾರ್ಗದ ಟಿಕೆಟ್ ದರ ಎಷ್ಟು?:
ಕನಿಷ್ಠ ದರ -10 ರೂ.
ಗರಿಷ್ಠ ದರ – 60 ರೂ.
ಟೋಕನ್ -60 ರೂ.
ಸ್ಮಾರ್ಟ್ ಕಾರ್ಡ್- 57 ರೂ.
ಸ್ಮಾಟ್ರ್ಕಾರ್ಡ್ ನಾನ್ಪೀಕವರ್- 54 ರೂ.
ಗುಂಪು ಟಿಕೆಟ್ -51 ರೂ.
ಸಂಚಾರ ಅವಧಿ: 35 ರಿಂದ 45 ನಿಮಿಷ
ಮಾರ್ಗದ ಉದ್ದ – 19.15 ಕಿ.ಮೀ
ನಿಲ್ದಾಣಗಳು – 16
ಬೆಳಗಾವಿ-ಬೆಂಗಳೂರು ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ
ಬೆಳಗಾವಿ-ಬೆಂಗಳೂರು ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು – ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಹೋಲಿಸಿದರೆ ಈ ರೈಲಿನ ಟಿಕೆಟ್ ದರ ತುಸು ಕಡಿಮೆ ಇದೆ. ಬುಧವಾರ ಹೊರತು ಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ. ನಿತ್ಯ ಬೆಳಿಗ್ಗೆ ಬೆಳಗಾವಿಯಿಂದ ಸಂಚಾರ ಆರಂಭಿಸಿ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಮತ್ತೆ ರಾತ್ರಿಯೊಳಗೆ ಬೆಳಗಾವಿ ತಲುಪಿದೆ.
ಈಗಾಗಲೇ ಬೆಂಗಳೂರು ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದ್ದು, ಆ ರೈಲಿನ ಟಿಕೆಟ್ ಹೋಲಿಸಿದರೆ ಬೆಳಗಾವಿ ಬೆಂಗಳೂರು ರೈಲಿನ ಟಿಕೆಟ್ ದರವು 200 ರೂಪಾಯಿಯಷ್ಟು ಅಗ್ಗವಿದೆ.
ಹುಬ್ಬಳ್ಳಿ ವಂದೇ ಭಾರತ್ನಲ್ಲಿ ಬೆಂಗಳೂರು ದಾವಣಗೆರೆ ಚೇರ್ಕಾರ್ ಟಿಕೆಟ್ 1000 ರೂ. ದಾಟಿದೆ. ಆದರೆ, ಬೆಳಗಾವಿ ವಂದೇ ಭಾರತ್ನಲ್ಲಿ 676 ರೂ. ಇದೆ. ಇನ್ನು ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, 6 ಜಿಲ್ಲಾ ಕೇಂದ್ರಗಳಲ್ಲಿ ನಿಲುಗಡೆಯಾಗಲಿದೆ.
ಕಿತ್ತೂರು ಕರ್ನಾಟಕ ದಕ್ಷಿಣ ಕರ್ನಾಟಕ ನಡುವೆ ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಸಂಪರ್ಕ ವೇಗ, ಸುಲಭವಾಗಲಿದೆ. ಪ್ರತಿದಿನ ಬೆಳಿಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣಕ್ಕೆ ತಲುಪಲಿದೆ.
ಮಧ್ಯಾಹ್ನ 2.20ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ವಾಪಸ್ ಹೊರಡಲಿದ್ದು, ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ.ಬೆಳಗಾವಿಯಿಂದ ಬರುವಾಗ ಬೆಳಿಗ್ಗೆ 7.08ಕ್ಕೆ ಧಾರವಾಡ, 7.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ, 8.35ಕ್ಕೆ ಎಸ್ಎಂಎಂ ಹಾವೇರಿ, ಬೆಳಿಗ್ಗೆ 9.25ಕ್ಕೆ ದಾವಣಗೆರೆ, ಮಧ್ಯಾಹ್ನ 12.15ಕ್ಕೆ ತುಮಕೂರು, ಮಧ್ಯಾಹ್ನ 1.03ಕ್ಕೆ ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 2.28ಕ್ಕೆ ಯಶವಂತಪುರ 3.03ಕ್ಕೆ ತುಮಕೂರು, ಸಂಜೆ 5.48ಕ್ಕೆ ದಾವಣಗೆರೆ, ಸಂಜೆ 6.48ಕ್ಕೆ ಎಸ್ಎಂಎಂ ಹಾವೇರಿ, ರಾತ್ರಿ 8ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ರಾತ್ರಿ 8.25ಕ್ಕೆ ಧಾರವಾಡದಲ್ಲಿ ನಿಲುಗಡೆ ಹೊಂದಲಿದೆ.
ವಂದೇ ಭಾರತ್ ರೈಲು 8 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ಮೋಟರ್ ಕಾರ್, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್ಗಳನ್ನು ಹೊಂದಿದೆ. ಟಿಕೆಟ್ ಕಾಯ್ದಿರಿಸಲು ಮತ್ತು ಇತರ ವಿಚಾರಣೆಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ (http://indianrailways.gov.in)ಗೆ ಭೇಟಿ ನೀಡಬಹುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಉದ್ಘಾಟನೆ ದಿನ ಬೆಳಗಾವಿಗೆ ಸಂಚಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬಳಿಕ ಬೆಳಿಗ್ಗೆ 11.15ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ವಂದೇ ಭಾರತ್ ಎಕ್್ಸಪ್ರೆಸ್ ಹೊರಡಲಿದೆ. ರಾತ್ರಿ 8ಕ್ಕೆ ಬೆಳಗಾವಿಗೆ ತಲುಪಲಿದೆ.
ಮೆಟ್ರೋ ನಿಲ್ದಾಣದಲ್ಲಿ ಕಾರ್ಯಕರ್ತರ ಭೇಟಿ :
ಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮಾರ್ಗದ ಪ್ರತಿಯೊಂದು ನಿಲ್ದಾಣದಲ್ಲಿಯೂ ಸ್ವಾಗತ ಕೋರಲು ಬಿಜೆಪಿ ತಯಾರಿ ಮಾಡಿಕೊಂಡಿದೆ.
ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್ಎಂಡ್ ವೃತ್ತ ಹಾಗೂ ನಮ ಮೆಟ್ರೋ ಹಳದಿ ಮಾರ್ಗದ ಎಲ್ಲಾ 16 ನಿಲ್ದಾಣಗಳ ಬಳಿ ಸಾವಿರಾರು ಕಾರ್ಯಕರ್ತರು ಪ್ರಧಾನಿಯವರನ್ನು ಸ್ವಾಗತಿಸಲಿದ್ದಾರೆ.
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬಿಜೆಪಿಯಿಂದ ಹಮ್ಮಿಕೊಂಡಿದ್ದ ರೋಡ್ ಶೋವನ್ನು ಸಮಯದ ಕೊರತೆಯಿಂದ ರದ್ದು ಮಾಡಲಾಗಿದೆ. ಹೀಗಾಗಿ, ಪ್ರತಿ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಮೋದಿಗೆ ಸ್ವಾಗತ ಕೋರಲು ನಿರ್ಧರಿಸಲಾಗಿದೆ.
ಬ್ಯಾರಿಕೇಡ್ ಅಳವಡಿಕೆ:
ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್ ಉದ್ಘಾಟನೆ ಹಿನ್ನೆಲೆ ಮೆಜೆಸ್ಟಿಕ್ ಸುತ್ತಮುತ್ತ ಫ್ಲೆಕ್್ಸ, ಬ್ಯಾನರ್ ಅಳವಡಿಕೆ ಮಾಡಲಾಗಿದೆ.