ಬೆಂಗಳೂರು,ಜೂ.26– ಸುಮಾರು 50 ಕೋಟಿ ರೂ.ಗಳಷ್ಟು ಮೌಲ್ಯದ ಮಾದಕ ವಸ್ತುಗಳನ್ನು ಇಂದು ನಾಶಪಡಿಸಲಾಗಿದೆ. ಗೃಹಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ 66ನೇ ಅಂತಾರಾಷ್ಟ್ರೀಯ ಮಾದಕದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಆಚರಣೆ ನಡೆಯಿತು.
ಶಾಸಕರಾದ ರಿಜ್ವಾನ್ ಅರ್ಷದ್, ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ, ಸೈಬರ್ ಸೆಲ್ನ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ಮಹಾಂತಿ, ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್, ಆದರ್ಶ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಜಯಶಂಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೈಟ್ಫೀಲ್ಡ್ ಉಪವಿಭಾಗದಿಂದ 45 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ನಾಶಪಡಿಸಲು ಗೃಹಸಚಿವರು ಇದೇ ವೇಳೆ ಅನುಮತಿ ನೀಡಿದರು. ಬೃಹತ್ ಪ್ರಮಾಣದ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ವೈಟ್ಫೀಲ್ಡ್ ನ ಡಿಸಿಪಿ ಶಿವಶಂಕರ್ರವರನ್ನು ಅಭಿನಂದಿಸಿದರು. 1000 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಮಾದಕವಸ್ತುಗಳನ್ನು ನಾಶಪಡಿಸಲಾಯಿತು. ಪೊಲೀಸ್ ಮಾರ್ಷಲ್ ವ್ಯವಸ್ಥೆಯನ್ನು ಉತ್ತಮವಾಗಿ ಜಾರಿಗೊಳಿಸಿದ 14 ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು.
ಮಾದಕವಸ್ತುಗಳ ವಿರುದ್ಧದ ಜೀವನಶೈಲಿಗೆ ಸಚಿವರು ಪ್ರತಿಜ್ಞಾವಿಧಿ ಬೋಧಿಸಿದರು. ಸುಮಾರು 55 ಸಾವಿರ ಮಂದಿ ವಿದ್ಯಾರ್ಥಿಗಳು ಭೌತಿಕ ಹಾಗೂ ವರ್ಚುಯಲ್ ಮಾದರಿಯಲ್ಲಿ ಹಾಜರಿದ್ದು, ಪ್ರತಿಜ್ಞಾವಿಧಿ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಹಿಂದೆ ಪಂಜಾಬ್ನಲ್ಲಿ ಮಾದಕವಸ್ತುಗಳ ಹಾವಳಿ ತೀವ್ರವಾಗಿತ್ತು. ಉಡ್ತಾ ಪಂಜಾಬ್ ಎಂಬ ಅಪಕೀರ್ತಿ ಬಂದಿತ್ತು. ಅದೇ ರೀತಿ ಉಡ್ತಾ ಕರ್ನಾಟಕ, ಉಡ್ತಾ ಬೆಂಗಳೂರು ಎಂಬ ಕೆಟ್ಟ ಹೆಸರು ಬರಬಾರದು ಎಂಬ ಕಾರಣಕ್ಕೆ ರಾಜ್ಯಸರ್ಕಾರ ಮಾದಕ ವಸ್ತುಗಳ ವಿರುದ್ಧ ಗಂಭೀರ ಕಾರ್ಯಾಚರಣೆಯನ್ನು ಆರಂಭಿಸಿತು.
ಕರ್ನಾಟಕವನ್ನು ಮಾದಕವಸ್ತುಗಳ ಮುಕ್ತ ರಾಜ್ಯವನ್ನಾಗಿಸುವ ಗುರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ ಎಂದರು.ಮಾದಕವಸ್ತುಗಳ ಬಳಕೆ, ಸಾಗಾಣಿಕೆ, ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ 6.5 ಲಕ್ಷ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ್ದಾರೆ ಮತ್ತು ಆಯಾ ಶಾಲಾ-ಕಾಲೇಜುಗಳಲ್ಲಿನ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ ಎಂದು ಹೇಳಿದರು.
100 ಕೋಟಿ ರೂ. ಮೌಲ್ಯದ 4.5 ಸಾವಿರ ಕೋಟಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮಿದುಳಿನ ಮೇಲೆ ಪರಿಣಾಮ ಬೀರುವ ಸಿಂಥೆಟಿಕ್ (ಸೈಕೊಟ್ರೋಫಿಕ್) ಡ್ರಗ್್ಸಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರಬರಾಜು ಸರಪಳಿಯನ್ನು ಕಡಿತ ಮಾಡಲು ಗಂಭೀರವಾದ ಕ್ರಮ ತೆಗೆದುಕೊಳ್ಳಲಾಗಿದೆ. ಸರಬರಾಜುದಾರರಿಂದ ಮಾಹಿತಿ ಕಲೆ ಹಾಕಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಆಗಮಿಸಿ ಮಾದಕವಸ್ತುಗಳ ಚಟುವಟಿಕೆಯಲ್ಲಿ ತೊಡಗಿದ್ದ 200 ಜನರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.
ಇಂದು ಬಿಡುಗಡೆಯಾಗಿರುವ ರಕ್ಷ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರು ತಮ ಶಾಲಾ-ಕಾಲೇಜಿನ ಸುತ್ತಮುತ್ತಲಿನಲ್ಲಿ ನಡೆಯುವ ಮಾದಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದು. ಪೊಲೀಸರ ಜೊತೆಗೆ ವಿದ್ಯಾರ್ಥಿಗಳು ಜಾಗೃತರಾಗಿ ಮಾದಕವಸ್ತುಗಳ ನಿಗ್ರಹಕ್ಕೆ ಸಹಕಾರ ನೀಡಬೇಕು. ಉತ್ತಮ ಭವಿಷ್ಯ ಹೊಂದಿರುವ ವಿದ್ಯಾರ್ಥಿಗಳು ಮಾದಕ ಚಟಗಳಿಗೆ ಬಲಿಯಾಗಬಾರದು. ನಿಮ ಭವಿಷ್ಯ ನಿಮ ಕೈಯಲ್ಲೇ ಇದೆ, ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದರು.