ಬೆಂಗಳೂರು,ಜೂ.1– ನಗರ ದಲ್ಲಿ ಮತ್ತೆ ಅನ್ಯಭಾಷಿಗರಿಂದ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ದರ್ಪ ತೋರಿರುವ ಯುವತಿಗೆ ಬೆಳ್ಳಂದೂರು ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಉತ್ತರಭಾರತ ಮೂಲದ ಯುವತಿಯೊಬ್ಬಳು ಬೆಳ್ಳಂದೂರು ವೃತ್ತದಲ್ಲಿ ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ಕನ್ನಡಿಗ ಆಟೋ ಚಾಲಕ ಲೋಕೇಶ್ ಎಂಬುವರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿ ಸಾರ್ವಜನಿಕರ ಎದುರೇ ಅನಾಗರಿಕ ರೀತಿಯಲ್ಲಿ ನಿಂದಿಸಿದ್ದಾರೆ.
ಈ ಬಗ್ಗೆ ಬೆಳ್ಳಂದೂರು ಪೊಲೀಸರಿಗೆ ಲೋಕೇಶ್ ದೂರು ನೀಡಿದ ಹಿನ್ನಲೆಯಲ್ಲಿ ಯುವತಿಯನ್ನು ಪತ್ತೆಹಚ್ಚಿ ಆಕೆಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕೇಶ್ ಅವರು ಬೆಳ್ಳಂದೂರು ವೃತ್ತದ ಬಳಿ ತೆರಳುವಾಗ ಬಲಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವತಿ ವಾಹನ ನಿಲ್ಲಿಸಿ ಏಕಾಏಕಿ ಜಗಳ ತೆಗೆದಿದ್ದಾರೆ. ನನ್ನ ವಾಹನಕ್ಕೆ ನೀನು ಡಿಕ್ಕಿ ಹೊಡೆದಿದ್ದೀಯ ಎಂದು ಆರೋಪ ಮಾಡಿ ಲೋಕೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಈ ನಡುವೆ ಲೋಕೇಶ್ ಅವರು ನಿಮ ವಾಹನಕ್ಕೆ ಆಟೋ ತಗುಲಿಲ್ಲ. ನೀವು ಈ ರೀತಿ ರಸ್ತೆ ಮಧ್ಯೆ ಗಲಾಟೆ ಮಾಡುವುದು ಸರಿಯಲ್ಲ ಎಂದಾಗ ಕೆರಳಿದ ಯುವತಿ, ವಾಗ್ವಾದಕ್ಕಿಳಿದು ಆತನನ್ನು ನಿಂದಿಸಿದ್ದಾರೆ. ಈ ವೇಳೆ ಆಟೋ ಚಾಲಕನ ನೆರವಿಗೆ ಬಂದ ಸ್ಥಳೀಯರು ಸಮಾಧಾನಪಡಿಸಲು ಮುಂದಾದರು.
ಮತ್ತಷ್ಟು ರೊಚ್ಚಿಗೆದ್ದ ಯುವತಿ ಮೊಬೈಲ್ ಕಸಿಯುತ್ತಿದ್ದೀರಾ ಎಂದು ತಮ ಚಪ್ಪಲಿಯಿಂದ ಲೋಕೇಶ್ಗೆ ಹಲವು ಬಾರಿ ಹೊಡೆದಿದ್ದಾರೆ. ಈ ಸಂಬಂದ ಆಟೋ ಚಾಲಕ ಲೋಕೇಶ್ ಅವರು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿ, ಘಟನೆಯ ವಿಡಿಯೋ ತುಣುಕುಗಳನ್ನು ಪೊಲೀಸರಿಗೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಪೊಲೀಸರು ಯುವತಿಯ ವಾಹನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿ ಆಕೆಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.