ಮಂಗಳೂರು, ಜೂ.14– ಪೊಲೀಸ್ ಠಾಣೆಗಳಲ್ಲಿ ಆಯಾ ವ್ಯಾಪ್ತಿಯ ಗ್ರಾಮಗಳ ಅಥವಾ ನಗರಗಳ ಪ್ರತಿಯೊಂದು ಮನೆಯ ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ. ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಅವರು ಕೋಟಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಮಾ ಲೋಚನೆ ನಡೆಸಿ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.ಈ ವೇಳೆ ಪೊಲೀಸ್ ಠಾಣೆಯಲ್ಲಿ ತಮ ವ್ಯಾಪ್ತಿಯಲ್ಲಿರುವ ಪ್ರದೇಶದ ಪ್ರತಿ ಕುಟುಂಬದ ದತ್ತಾಂಶ ಲಭ್ಯವಿದೆಯೇ ಎಂದು ಗೃಹಸಚಿವರು ಪ್ರಶ್ನಿಸಿದರು.
ಅಧಿಕಾರಿಗಳು ಇಲ್ಲ ಎಂದಾಗ ಈ ರೀತಿಯ ಒಂದು ಕ್ರಮ ತೆಗೆದುಕೊಳ್ಳಬೇಕು. ಒಂದು ಪೊಲೀಸ್ ಠಾಣಾ ವ್ಯಾಪ್ತಿಗೆ 30 ಗ್ರಾಮಗಳು ಬರುತ್ತವೆ ಎಂದಾದರೆ ಆಯಾ ಗ್ರಾಮಗಳಲ್ಲಿರುವ ಪ್ರತಿಯೊಂದು ಮನೆಯ ಮುಖ್ಯಸ್ಥ ಯಾರು, ಎಷ್ಟು ಜನ ಇದ್ದಾರೆ, ಅವರ ಉದ್ಯೋಗ ಮತ್ತು ಹಿನ್ನೆಲೆ ಏನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಈ ಮೊದಲು ನಕ್ಸಲ್ ನಿಗ್ರಹ ದಳ ಈ ರೀತಿಯ ದತ್ತಾಂಶ ಸಂಗ್ರಹಿಸಿತ್ತು ಎಂದು ಅಧಿಕಾರಿಗಳು ತಿಳಿಸಿದಾಗ ಅದನ್ನೇ ಬಳಸಿಕೊಂಡು ಖಚಿತಪಡಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.
ಈ ವೇಳೆ ಠಾಣೆಗೆ ಭೇಟಿ ನೀಡಿದವರ ಮತ್ತು ದೂರು ಕೊಟ್ಟವರ ಮಾಹಿತಿಯ ಪುಸ್ತಕವನ್ನು ಖುದ್ದು ಸಚಿವ ಪರಮೇಶ್ವರ್ ಪರಿಶೀಲಿಸಿದರು. ಅದರಲ್ಲಿ 2 ವ್ಯಕ್ತಿಗಳನ್ನು ತಾವೇ ಆಯ್ಕೆ ಮಾಡಿಕೊಂಡು ಠಾಣೆಯ ಸಿಬ್ಬಂದಿಗಳ ಮೊಬೈಲ್ಗೆ ಕರೆ ಮಾಡಿ ಮಾತನಾಡಿದರು.
ಕೃಷ್ಣಮೂರ್ತಿ ಎಂಬುವವರ ಜೊತೆ ಸಚಿವರು ಮಾತನಾಡಿದ ವೇಳೆ , ತಾವು ಆಟೋದಲ್ಲಿ ಪ್ರಯಾಣಿಸಿದ್ದು ಚಾಲಕ ಮೀಟರ್ ಹಾಕಿರಲಿಲ್ಲ. 80 ರೂ. ಹಣ ಕೇಳಿದ್ದ. ಅದನ್ನು ಪ್ರಶ್ನೆ ಮಾಡಿದಾಗ 20 ಜನರನ್ನು ಕರೆತಂದು ತಮಗೆ ಧಮ್ಕಿ ಹಾಕಿದ್ದಾನೆಂದು ಸಚಿವರಲ್ಲಿ ಕೃಷ್ಣಮೂರ್ತಿ ದೂರು ಹೇಳಿದರು.
ಇಂತಹ ಪ್ರಕರಣಗಳನ್ನು ಪೊಲೀಸರು ನಿರ್ಲಕ್ಷಿಸಬಾರದು. 20 ಜನರ ಗುಂಪಿನಲ್ಲಿದ್ದ ಪ್ರಮುಖರನ್ನು ಕರೆತಂದು ಎಚ್ಚರಿಕೆ ಕೊಡಬೇಕು. ಇಲ್ಲವಾದರೆ ಈ ಸಣ್ಣ ಘಟನೆ ಮುಂದೆ ದ್ವೇಷಕ್ಕೆ ಕಾರಣವಾಗುತ್ತದೆ. ಕೊಲೆ, ಗುಂಪು ಗಲಭೆಗೆ ಪ್ರಚೋದನೆ ನೀಡುತ್ತದೆ ಎಂದು ಎಚ್ಚರಿಸಿದರು.
ದೂರು ನೀಡಿದ ಮತ್ತೊಬ್ಬ ಮಹಿಳೆಯ ಜೊತೆಯಲ್ಲೂ ಸಚಿವರು ಈ ವೇಳೆ ಮಾತನಾಡಿದರು.
ತಮ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡ ಅಕೆ ಗಂಡ ಮನೆಗೆ ಬಂದು ಮಗುವನ್ನು ತೆಗೆದುಕೊಂಡು ಹೋಗಲು ಗಲಾಟೆ ಮಾಡುತ್ತಿದ್ದು, ಆತನಿಂದ ತಾವು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆತನಿಂದಾಗುತ್ತಿರುವ ಕಿರುಕುಳವನ್ನು ತಪ್ಪಿಸಿ ಎಂದು ಮಹಿಳೆ ಮನವಿ ಮಾಡಿದ್ದಾರೆ.
ಈ ಕುರಿತು ಸಿಬ್ಬಂದಿಗಳಿಗೆ ಸೂಚನೆ ನೀಡಿದ ಸಚಿವರು, ಕೌಟುಂಬಿಕ ದೌರ್ಜನ್ಯವನ್ನು ನಿರ್ಲಕ್ಷಿಸಬಾರದು.
ದೂರುದಾರರಿಂದ ಸ್ಪಷ್ಟ ಮಾಹಿತಿ ಪಡೆದು ಗಸ್ತು ಸಿಬ್ಬಂದಿಗಳು 2-3 ದಿನ ಈ ಪ್ರಕರಣದ ಮೇಲೆ ನಿಗಾ ವಹಿಸಬೇಕು. ಆಕೆಯ ಗಂಡ ಮತ್ತೆ ಬಂದು ದೌರ್ಜನ್ಯ ಮಾಡುವುದು, ಹೊಡೆಯುವುದು, ಬೆದರಿಕೆ ಹಾಕುವುದು ಕಂಡುಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಇದು ವಿಪರೀತಕ್ಕೆ ಹೋಗುವ, ಕೊಲೆಯಂತಹ ಸಾಧ್ಯತೆಗಳನ್ನೂ ಸೃಷ್ಟಿಸಬಹುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಪೊಲೀಸ್ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸುವ ವೇಳೆ ಸೇವೆಗೆ ಸೇರಿ ಎಷ್ಟು ದಿನವಾಯಿತು ಎಂದು ಪ್ರಶ್ನಿಸಿದರು. 17 ವರ್ಷಗಳಾಗಿದ್ದಾಗಿ ಕಾನ್ಸ್ಟೇಬಲ್ರೊಬ್ಬರು ಹೇಳಿದಾಗ, ಈವರೆಗೂ ಏಕೆ ಬಡ್ತಿ ಸಿಕ್ಕಿಲ್ಲ ಎಂದು ಸಚಿವರು ಕೇಳಿದರು. ಠಾಣೆಯಲ್ಲಿ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳ ಅಗತ್ಯವಿದೆ ಎಂದು ಇದೇ ವೇಳೆ ಸಚಿವರು ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.