ಬೆಂಗಳೂರು, ಜ.7– ನರೇಗಾದಡಿ ವಿನೂತನ ತಂತ್ರಜ್ಞಾನ, ಪಾರದರ್ಶಕತೆ ಕಾಂಗ್ರೆಸ್ಸಿಗರಿಗೆ ದೊಡ್ಡ ಸವಾಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡಿ ಖಜಾನೆಯಿಂದ ಹಣ ಎತ್ತಿಕೊಂಡು ಹೋಗುತ್ತಿದ್ದರು. ಅದು ತಪ್ಪಲಿದೆ ಎಂದರು. ಅದಕ್ಕಾಗಿ ಹೊಟ್ಟೆ ಉರಿಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ನುಡಿದರು.
ಗಾಂಧಿ ಹೆಸರನ್ನು ಅಳಿಸಿದವರು ಯಾರು ಎಂಬುದಕ್ಕೆ ಉದಾಹರಣೆಗಳನ್ನು ನೀಡಿದ ಅವರು, ರಾಜ್ಯದಲ್ಲಿ 25 ಯೋಜನೆಗಳು ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರಿನಲ್ಲಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 55 ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರಿನಲ್ಲಿ 21 ಮತ್ತು ನೆಹರೂ ಹೆಸರಿನಲ್ಲಿ 22 ಇವೆ ಎಂದು ತಿಳಿಸಿದರು.
ಪ್ರತಿಯೊಂದು ಕ್ರೀಡಾಕೂಟದಲ್ಲೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಹೆಸರು, ಇಂದಿರಾ ಗಾಂಧಿ ಹೆಸರು ಇಟ್ಟುಕೊಂಡು ಇವರು ಜನರಿಗೆ ಮೋಸ ಮಾಡಿ ನಿಜವಾದ ಗಾಂಧಿಯನ್ನು ಮರೆತುಬಿಟ್ಟವರು ಎಂದು ಟೀಕಿಸಿದರು.
ಹೊಸದಾಗಿ ನರೇಗಾದಡಿ ಎಲ್ಲ ವರ್ಗದವರಿಗೂ ಅವಕಾಶ ಇದೆ. ಯಾರು ಬೇಕಾದರೂ ಬರಬಹುದು. ಹಾಗೆಂದು ಶ್ರೀಮಂತ ವರ್ಗದವರು ಕೂಲಿ ಕೆಲಸಕ್ಕೆ ಬರುವುದಿಲ್ಲ ಎಂದು ವಿವರಿಸಿದರು.
ಗಾಂಧೀಜಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಡಾ. ಅಂಬೇಡ್ಕರರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರರು ಮೃತಪಟ್ಟಾಗ ಅವರ ಸಮಾಧಿಗೆ ಆರಡಿ ಮೂರಡಿ ಜಾಗವನ್ನೂ ಕೊಡಲಿಲ್ಲ. ಅಪಾರ ಪಾಂಡಿತ್ಯ, ಜ್ಞಾನವಿದ್ದ ಡಾ. ಅಂಬೇಡ್ಕರರಿಗೆ ಅವರ ಜೀವಿತ ಕಾಲದಲ್ಲಿ ಭಾರತರತ್ನ ಕೊಡಲಿಲ್ಲ. ಅವರ ಮನೆ ಮಂದಿಗೆಲ್ಲ ತೆಗೆದುಕೊಂಡರು. ಈ ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರರಿಗೆ ಕೊಡಲಿಲ್ಲ ಎಂಬುದನ್ನು ನಾವು ಹೇಳಬೇಕು ಎಂದರು.
ಇವತ್ತು ನರೇಂದ್ರ ಮೋದಿಜೀ ಅವರು ತಮ ಹೆಸರನ್ನು ಒಂದೇ ಒಂದು ಸಂಸ್ಥೆಗಾಗಲೀ, ಯೋಜನೆಗಾಗಲೀ ಇಟ್ಟುಕೊಂಡಿಲ್ಲ. ಸರಕಾರದ ಹೆಸರೇ ಇದೆ ಎಂದು ವಿವರಿಸಿದರು.
5 ವಿಮಾನನಿಲ್ದಾಣ, ಬಂದರುಗಳಿಗೆ ಇಂದಿರಾಗಾಂಧಿ, ರಾಹುಲ್ ಗಾಂಧಿ, ರಾಜೀವ್ ಗಾಂಧಿ ಹೆಸರು ಇಟ್ಟುಕೊಂಡು ಕುಳಿತಿದ್ದಾರಲ್ಲವೇ? ಇವರಿಗೆ ಮಹಾತ ಗಾಂಧಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಜೀ ಅವರು ವಿಕಸಿತ ಭಾರತಕ್ಕೆ ಪೂರಕ ವಿಬಿ-ಜಿ ರಾಮ್ ಜಿ ಎಂಬ ಯೋಜನೆ ಜಾರಿಗೊಳಿಸಿ, ಭ್ರಷ್ಟಾಚಾರ ತಡೆ, ಆಸ್ತಿ ನಿರ್ಮಾಣ, ಗ್ರಾಮೀಣ ನಿಜವಾದ ಬಡವರಿಗೆ ಕೂಲಿ ಕೆಲಸ ಕೊಡಲು ಅನುಕೂಲ ಆಗುವ ಇದೊಂದು ಹೊಸ ವ್ಯವಸ್ಥೆ ತಂದಿದ್ದಾರೆ. ನರೇಗಾದಲ್ಲಿ ಯಾವುದಕ್ಕೂ ಹೊಣೆಗಾರಿಕೆ ಇರಲಿಲ್ಲ. ಇವತ್ತು ಲೆಕ್ಕ ಕೊಡಬೇಕಲ್ಲವೇ ಎಂಬುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿ ಎಂದು ತಿಳಿಸಿದರು.
