Sunday, July 7, 2024
Homeರಾಷ್ಟ್ರೀಯ'ಚಾರ್‌ ಸೌ ಪಾರ್‌' ಬಿಜೆಪಿಯ ಸೈಕಾಲಜಿಕಲ್‌ ಗೇಮ್‌, ಈ ಬಾರಿಯೂ ಅವರದ್ದೇ ಅಧಿಕಾರ ; ಪ್ರಶಾಂತ್‌...

‘ಚಾರ್‌ ಸೌ ಪಾರ್‌’ ಬಿಜೆಪಿಯ ಸೈಕಾಲಜಿಕಲ್‌ ಗೇಮ್‌, ಈ ಬಾರಿಯೂ ಅವರದ್ದೇ ಅಧಿಕಾರ ; ಪ್ರಶಾಂತ್‌ ಕಿಶೋರ್‌

ನವದೆಹಲಿ,ಮೇ21- ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳುತ್ತಲೇ ಬಂದಿದ್ದಾರೆ. ಚಾರ್‌ ಸೋ ಪಾರ್‌ ಎನ್ನುವುದು ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಿ ನೀಡಿರುವ ಘೋಷಣೆಯಷ್ಟೇ. ಇದು ಬಿಜೆಪಿಯ ನಿಗೂಢ ಆಟ, ಇದನ್ನು ಸೈಕಾಲಜಿಕಲ್‌ ಗೇಮ್‌ ಎಂದೂ ಕರೆಯಬಹುದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ.

ಮೋದಿಯವರ ಈ ಘೋಷಣೆ ಬೂತ್‌ ಮಟ್ಟದ ಬಿಜೆಪಿ ಕಾರ್ಯಕರ್ತರಿಗೆ ತಲುಪಬೇಕಿತ್ತು. ಅದು ತಲುಪಿದೆ ಎಂದು ಹೇಳಿದ್ದಾರೆ. ಬಿಜೆಪಿ 272ರ ಗಡಿ ದಾಟದಿದ್ದರೆ ಪ್ಲ್ಯಾನ್‌ ಬಿ ಏನು? ಅಮಿತ್‌ ಶಾ ಸ್ವಾರಸ್ಯಕರ ಉತ್ತರ ಕಳೆದ ಐದಾರು ವರ್ಷಗಳಲ್ಲಿ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಿಲ್ಲ, ಆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರೆ ಅದು ವಿಪಕ್ಷಗಳ ಹಿನ್ನಡೆ. ಮೋದಿಯವರನ್ನು ಎದುರಿಸುವ ಸಮರ್ಥ ನಾಯಕರ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಸರಳ ಬಹುಮತಕ್ಕೆ 272 ಸೀಟ್‌ ಬಂದರೆ ಸಾಕು, 400 ಬೇಡ. ಆದರೂ ಬಿಜೆಪಿ 400 ಪ್ಲಸ್‌‍ ಎಂದು ಹೇಳಿಕೊಂಡು ಬರುತ್ತಿದೆ. ದೇಶದಲ್ಲಿ ಬಿಜೆಪಿ 400 ಸೀಟ್‌ ಗೆಲ್ಲುತ್ತೆ ಎನ್ನುವ ಚರ್ಚೆ ನಡೆಯುತ್ತಿದೆಯೇ ಹೊರತೂ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ ಎನ್ನುವ ಚರ್ಚೆ ಅಷ್ಟಾಗಿ ನಡೆಯುತ್ತಿಲ್ಲ.

ರಾಮ ಮಂದಿರದ ಪ್ರಾಣಪ್ರತಿಷ್ಠೆಯ ವೇಳೆ ಬಿಜೆಪಿಗಿದ್ದ ಅನುಕೂಲಕರ ವಾತಾವರಣ ಈಗ ಅಷ್ಟಾಗಿಲ್ಲ. ರಾಮ ಮಂದಿರ ಚುನಾವಣಾ ವಿಷಯವಾಗಿ ಉಳಿದಿಲ್ಲ, ಆದರೆ ಒಂದು ವರ್ಗದ ಜನರ ಬೆಂಬಲ ಬಿಜೆಪಿಗೆ ಇದ್ದೇ ಇದೆ. ಜನರಿಗೆ ಮೋದಿಯ ಮೇಲೆ ಅಸಮಾಧಾನವಿದೆಯೇ ಹೊರತು ಸಿಟ್ಟು ಇಲ್ಲ ಎಂದು ಪ್ರಶಾಂತ್‌ ಕಿಶೋರ್‌ ವಿಶ್ಲೇಷಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಜನರಿಗೆ ಮೋದಿ ಮೇಲೆ ಇದ್ದಷ್ಟು ನಂಬಿಕೆ ಈಗ ಇಲ್ಲ. ಅದೇ ರೀತಿ, ರಾಹುಲ್‌ ಗಾಂಧಿ ಕೂಡಾ ಕಳೆದ ವರ್ಷಗಳಲ್ಲಿ ಮೋದಿಗೆ ಪೈಪೋಟಿ ನೀಡುವಷ್ಟು ಬೆಳೆದಿಲ್ಲ ಎನ್ನುವುದೂ ಒಪ್ಪಿಕೊಳ್ಳಬೇಕಾದ ವಿಚಾರ. ಹಾಗಾಗಿ, ಮೋದಿಗೆ ವಿರುದ್ದವಾಗಿ ವಿಪಕ್ಷಗಳಲ್ಲಿ ನಿಲ್ಲುವ ನಾಯಕನಾರು ? ಈ ಪ್ರಶ್ನೆಯೇ ಬಿಜೆಪಿಯನ್ನು ದಡ ಸೇರಿಸಲು ಅನುಕೂಲ ಮಾಡಿಕೊಡುವ ಅಂಶ ಅವರು ವ್ಯಾಖ್ಯಾನಿಸಿದ್ದಾರೆ.

ನನ್ನ ಪ್ರಕಾರ ಬಿಜೆಪಿ (ಮೈತ್ರಿಕೂಟವಲ್ಲ) ಮಾತ್ರ ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ. ಕರ್ನಾಟಕ, ರಾಜಸ್ಥಾನ, ಬಿಹಾರ ಮುಂತಾದ ಕಡೆ ಕೆಲವೊಂದು ಸೀಟ್‌ ಅನ್ನು ಬಿಜೆಪಿ ಕಳೆದುಕೊಳ್ಳಬಹುದು. ಅದನ್ನು ಪೂರ್ವ ಮತ್ತು ದಕ್ಷಿಣದ ರಾಜ್ಯಗಳಿಂದ ಬಿಜೆಪಿ ಪಡೆದುಕೊಳ್ಳಲಿದೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ವೈಎಸ್‌‍ಆರ್‌ ಕಾಂಗ್ರೆಸ್‌‍ ಪಕ್ಷದ ಸರ್ಕಾರದ ಅವಧಿ ಮುಗಿಯಲಿದೆ, ಅಲ್ಲಿ ಬಿಜೆಪಿಯ ಸಾಧನೆಯೂ ಉತ್ತಮವಾಗಲಿದೆ. ಇನ್ನು, ಕೇರಳ ಮತ್ತು ತಮಿಳುನಾಡಿನಲ್ಲೂ ಬಿಜೆಪಿ ಅಕೌಂಟ್‌ ಓಪನ್‌ ಮಾಡಲಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಗೆಲ್ಲುವ ಸೀಟ್‌ ಸಂಖ್ಯೆ ಹೆಚ್ಚಾಗಲಿದೆ ಎಂದು ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿದಿದ್ದಾರೆ.

RELATED ARTICLES

Latest News