Friday, April 25, 2025
Homeರಾಜ್ಯತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಪೂರ್ವ ಮುಂಗಾರು ಮಳೆ

ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಪೂರ್ವ ಮುಂಗಾರು ಮಳೆ

Pre-monsoon rains to continue till the end of the month

ಬೆಂಗಳೂರು, ಏ.25- ರಾಜ್ಯದಲ್ಲಿ ಏಪ್ರಿಲ್ ತಿಂಗಳ ಅಂತ್ಯದವರೆಗೂ ಪೂರ್ವ ಮುಂಗಾರು ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಈ ತಿಂಗಳ ಆರಂಭದಿಂದಲೂ ಚದುರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಚೈತನ್ಯ ಸಿಕ್ಕಂತಾಗಿದೆ. ವಾತಾವರಣದಲ್ಲಿ ಆಗಾಗ್ಗೆ ಸಾಕಷ್ಟು ಬದಲಾವಣೆಯಾಗುತ್ತಿರುವ ಪರಿಣಾಮ ಬೇಸಿಗೆ ಮಳೆ ಬಿಟ್ಟುಬಿಟ್ಟು ಬರುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಒಳನಾಡಿನಲ್ಲಿ 0.9 ಕಿ.ಮೀ. ಎತ್ತರದಲ್ಲಿ ಟ್ರಫ್ ನಿರ್ಮಾಣವಾಗಿರುವ ಪರಿಣಾಮ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಕೆಲವೆಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್ .ಪಾಟೀಲ್ ತಿಳಿಸಿದ್ದಾರೆ.

ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಲಿದೆ. ಅಲ್ಲದೆ, ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

ಬೇಸಿಗೆ ಮಳೆ ಏಪ್ರಿಲ್ ಅಂತ್ಯದವರೆಗೂ ಮುಂದುವರೆಯಲಿದೆ. ರಾಜ್ಯದ ಬಹುತೇಕ ಎಲ್ಲಾ ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ. ಆದರೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ. ಚದುರಿದಂತೆ ಮಾತ್ರ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಏ.28 ರಿಂದ 30 ರವರೆಗೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಮುನ್ಸೂಚನೆಗಳಿವೆ. ಹೀಗಾಗಿ ಎಲ್ಲರೂ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಗುಡುಗು, ಮಿಂಚಿನ ವಾತಾವರಣ ಕಂಡುಬಂದಾಗ ಸುರಕ್ಷಿತವಾದ ಪಕ್ಕಾ ಮನೆಯಲ್ಲಿರುವುದು ಕ್ಷೇಮ. ನೀರಿನ ಮೂಲ, ವಿದ್ಯುತ್ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರ ಇರಬೇಕು. ಕಿಟಕಿ, ಬಾಗಿಲು ಸೇರಿದಂತೆ ಯಾವುದೇ ರೀತಿಯ ಲೋಹಗಳನ್ನು ಸ್ಪರ್ಶಿಸಬಾರದು. ಎತ್ತರವಾದ ಮರಗಳ ಕೆಳಗೆ ನಿಲ್ಲಬಾರದು. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಸಂಪರ್ಕವಿರುವ ಸಾಧನಗಳನ್ನು ಅನ್‌ಪ್ಲಗ್ ಮಾಡಬೇಕು. ಈ ಸಂದರ್ಭದಲ್ಲಿ ಸಿಡಿಲು ಬಡಿಯುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಸಲಹೆ ಮಾಡಿದ್ದಾರೆ.

RELATED ARTICLES

Latest News