Sunday, September 8, 2024
Homeರಾಜ್ಯನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ : ವಿಧಾನಸಭೆಯಲ್ಲಿ ರೇವಣ್ಣ ಆಕ್ರೋಶ

ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ : ವಿಧಾನಸಭೆಯಲ್ಲಿ ರೇವಣ್ಣ ಆಕ್ರೋಶ

ಬೆಂಗಳೂರು,ಜು.16- ಹಾಸನದ ಪೆನ್‌ಡ್ರೈವ್‌ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ವಾದ-ಪ್ರತಿವಾದಗಳಿಂದಾಗಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ರವರು ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮಗಳ ಕುರಿತು ಚರ್ಚೆ ಮಾಡುವ ವೇಳೆಯಲ್ಲಿ ರಾಜ್ಯಸರ್ಕಾರ ರಚಿಸಿರುವ ಎಸ್‌‍ಐಟಿ ತನಿಖೆಯ ತಾರತಮ್ಯವನ್ನು ಪ್ರಸ್ತಾಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತನಿಖೆ ನಡೆಸುತ್ತಿರುವ ಎಸ್‌‍ಐಟಿ ತಂಡ ಎಫ್‌ಐಆರ್‌ ದಾಖಲಾಗಿ 40 ದಿನಗಳಾದರೂ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರನ್ನು ವಿಚಾರಣೆಗೆ ಕರೆಯುವುದಿಲ್ಲ. ಅದೇ ರೀತಿ ರೇವಣ್ಣನ ಮಗ ಮಾಡಿದ ತಪ್ಪಿಗೆ ರೇವಣ್ಣ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗೆ ತಲಾ 20 ಮಂದಿ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿತ್ತು.

ರೇವಣ್ಣ ಅವರ ಪತ್ನಿ ಭವಾನಿಯವರ ಬಂಧನಕ್ಕೂ ಪ್ರಯತ್ನಿಸಲಾಯಿತು. ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡರು. ನಮ್ಮ ಪಕ್ಷದ ಮಾಜಿ ಶಾಸಕ ಪ್ರೀತಂಗೌಡ ಅವರನ್ನು ಬಂಧಿಸುವ ಯತ್ನಗಳಾದವು. ಎಸ್‌‍ಐಟಿ ಅಧಿಕಾರಿಗಳ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಜೆಡಿಎಸ್‌‍ನ ಹಿರಿಯ ಶಾಸಕರೂ ಆಗಿರುವ ಎಚ್‌.ಡಿ.ರೇವಣ್ಣ, ವಿರೋಧಪಕ್ಷದ ನಾಯಕರು ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸ್ಪಷ್ಟನೆ ನೀಡಲು ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌‍ನ ಶಾಸಕ ಕೃಷ್ಣಪ್ಪ ಅವರು, ರೇವಣ್ಣ ಅವರ ಪುತ್ರ ತಪ್ಪು ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆರ್‌.ಅಶೋಕ್‌ ಅವರು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದರು.

ಚರ್ಚೆಯ ನಡುವೆ ಪದೇಪದೇ ವಿಷಯ ಪ್ರಸ್ತಾಪವಾದಾಗ ಕಾಂಗ್ರೆಸ್‌‍ನ ಶಾಸಕ ರಿಜ್ವಾನ್‌ ಹರ್ಷದ್‌, ಎರಡು ಎಸ್‌‍ಐಟಿ ತಂಡಗಳ ನಡುವೆ ಪದೇ ಪದೇ ಹೋಲಿಕೆ ಮಾಡಿ ಮಾತನಾಡುತ್ತಿರುವುದು ಏಕೆ?, ನೂರಾರು ಮಹಿಳೆಯರ ಮಾನಹರಣವಾಗಿರುವ ಪ್ರಕರಣ ವಾಲ್ಮೀಕಿ ಹಗರಣಕ್ಕಿಂತಲೂ ಕಡಿಮೆ ಎಂಬ ಧೋರಣೆಯೇ?, ಮಹಿಳೆಯರ ಮಾನಕ್ಕೆ ಬೆಲೆ ಇಲ್ಲವೇ? ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್‌‍ನ ಶಾಸಕ ನಾರಾಯಣ ಸ್ವಾಮಿಯವರು ಮಧ್ಯಪ್ರವೇಶ ಮಾಡಿ ಹಣ ಹೋದರೆ ಬರುತ್ತದೆ, ಮಾನ ಹೋದರೆ ಬರುತ್ತದೆಯೇ? ಎಂದು ಪ್ರಶ್ನಿಸಿದರು.ಸಿಟ್ಟಾದ ರೇವಣ್ಣ ಅವರು ನಿಮ ಬಂಡವಾಳ ಗೊತ್ತಿದೆ, ಕುಳಿತುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಪ್ಪ, ನೀವೆಲ್ಲಾ ಶ್ರೀರಾಮಚಂದ್ರರು ಎಂದು ಕಾಂಗ್ರೆಸ್ಸಿಗರನ್ನು ಮೂದಲಿಸಿದರು.ಅವಕಾಶ ಪಡೆದುಕೊಂಡು ಸ್ಪಷ್ಟನೆ ನೀಡಿದ ರೇವಣ್ಣ ಅವರು, ನನಗೆ ಕಾಂಗ್ರೆಸ್‌‍ ಶಾಸಕರಂತೆ ವಾದ ಮಾಡುವಷ್ಟು ಶಕ್ತಿ ಇಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ, ನಾನು ಯಾರ ಪರವಾಗಿಯೂ ವಹಿಸಿಕೊಂಡು ಮಾತನಾಡುತ್ತಿಲ್ಲ. 40 ವರ್ಷ ಸಾರ್ವಜನಿಕ ಜೀವನದಲ್ಲಿದ್ದೇನೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಹೆಣ್ಣು ಮಗಳೊಬ್ಬಳನ್ನು ಪೊಲೀಸ್‌‍ ಮಹಾನಿರ್ದೇಶಕರ ಕಚೇರಿಗೆ ಕರೆಸಿಕೊಂಡು ದೂರು ಬರೆಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ಪೊಲೀಸ್‌‍ ಮಹಾನಿರ್ದೇಶಕನಾಗಲು ಅನರ್ಹ. ಮೂರೂ ಬಿಟ್ಟು ನೀತಿಗೆಟ್ಟ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌‍ ಪಾಳಯದಿಂದ ಆಕ್ಷೇಪಗಳು ವ್ಯಕ್ತವಾದವು. ಸಚಿವ ಪ್ರಿಯಾಂಕ ಖರ್ಗೆ ಸಂತ್ರಸ್ತರ ದೂರು ತೆಗೆದುಕೊಳ್ಳುವುದು ತಪ್ಪೇ? ಎಂದು ಪ್ರಶ್ನಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ರೇವಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಅವರಿಗೆ ಅನ್ಯಾಯವಾಗಿದ್ದರೆ ಪ್ರತ್ಯೇಕವಾಗಿ ನೋಟೀಸ್‌‍ ಕೊಡಲಿ, ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸಲಹೆ ಮಾಡಿದರು.

ನಾನು ನೋಟೀಸ್‌‍ ಕೊಡುತ್ತೇನೆ ಎಂದು ರೇವಣ್ಣ ಪ್ರತ್ಯುತ್ತರಿಸಿದರು. ಈ ನಡುವೆ ಕಾಂಗ್ರೆಸ್‌‍ ಶಾಸಕ ಪೊನ್ನಣ್ಣ ಸ್ಪಷ್ಟನೆ ನೀಡಲು ಬಯಸಿದರಾದರೂ ಸಭಾಧ್ಯಕ್ಷರು ಅವಕಾಶ ಕೊಡಲಿಲ್ಲ.ಒಟ್ಟಾರೆ ಪೆನ್‌ಡ್ರೈವ್‌ ಪ್ರಕರಣ ಕಲಾಪದಲ್ಲಿ ಕೆಲಕಾಲ ಕಾವೇರಿದ ಚರ್ಚೆಗೆ ಗ್ರಾಸವಾಯಿತು.

RELATED ARTICLES

Latest News