Friday, June 6, 2025
Homeರಾಜ್ಯವಿಜಯೋತ್ಸವ ದುರಂತಕ್ಕೆ ಸರ್ಕಾರದ ಲೋಪ ಕಾಣವೆಂದು ಪರೋಕ್ಷವಾಗಿ ಒಪ್ಪಿಕೊಂಡ ಪ್ರಿಯಾಂಕ್ ಖರ್ಗೆ

ವಿಜಯೋತ್ಸವ ದುರಂತಕ್ಕೆ ಸರ್ಕಾರದ ಲೋಪ ಕಾಣವೆಂದು ಪರೋಕ್ಷವಾಗಿ ಒಪ್ಪಿಕೊಂಡ ಪ್ರಿಯಾಂಕ್ ಖರ್ಗೆ

Priyank Kharge indirectly admits government's negligence in Vijayatsava tragedy

ಬೆಂಗಳೂರು, ಜೂ.5- ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದ ಪ್ರಕರಣದ ಹೊಣೆಗಾರಿಕೆಯನ್ನು ಸರ್ಕಾರವೇ ತೆಗೆದುಕೊಂಡಿದೆ. ನಮ್ಮ ಕಡೆಯಿಂದ ಇನ್ನಷ್ಟು ಉತ್ತಮ ಯೋಜನೆ ಹಾಗೂ ನಿರ್ದೇಶನಗಳು ಹೋಗಬೇಕಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ಸರ್ಕಾರದ ಲೋಪಗಳನ್ನು ದೃಢೀಕರಿಸಿದ್ದಾರೆ.

ಗೃಹಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದುರ್ಘಟನೆ ನಡೆಯಬಾರದಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಈಗಾಗಲೇ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದರು.

18 ವರ್ಷಗಳಿಂದ ಜನ ಕಾಯುತ್ತಿದ್ದ ಹಾಗೆ ಆರ್‌ಸಿಬಿ ಗೆಲುವು ಸಾಧಿಸಿತ್ತು. ಜನರ ನಿರೀಕ್ಷೆಗಳು ಹೆಚ್ಚಿದ್ದವು. ಹೀಗಾಗಿ ಅಂದಾಜು ಮೀರಿ ಸಂಭ್ರಮಾಚರಣೆಗೆ 3 ರಿಂದ 4 ಲಕ್ಷ ಮಂದಿ ಆಗಮಿಸಿದ್ದರು. ಆಗಬಾರದ ಘಟನೆ ನಡೆದಿದೆ ಎಂದರು.

11 ಜನರ ಸಾವಿನ ಘಟನೆಯನ್ನು ಸರ್ಕಾರ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ಯುವಕರು ಮೃತಪಟ್ಟಿದ್ದಾರೆ. ಸರ್ಕಾರ ಮೃತಪಟ್ಟವರ ಕುಟುಂಬ ವರ್ಗದವರ ಜೊತೆಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಸರ್ಕಾರದ್ದು ಎಂದರು.

ಅಧಿಕಾರಿಗಳ ಸಲಹೆಯನ್ನು ನಿರಾಕರಿಸಿ ಆತುರಾತುರವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಎಂಬ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಸಲಹೆ ಕೊಟ್ಟಿದ್ದರೋ ಗೊತ್ತಿಲ್ಲ. ಸರ್ಕಾರವಂತೂ ಕೇಂದ್ರ ಸರ್ಕಾರದಂತೆ ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇವೆ. ಜನರ ಬಳಿ ಕ್ಷಮೆ ಕೇಳಿದ್ದೇವೆ. ಮುಂದೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮ ಆಯೋಜಿಸಲು ಸಮಯ ಕಡಿಮೆಯಿತ್ತು. ಆರ್‌ಸಿಬಿ, ಕೆಸಿಎ ಅವರದೇ ಆದ ನಿಯಮಾವಳಿಗಳನ್ನು ಪಾಲನೆ ಮಾಡುತ್ತಾರೆ. ಆದರೆ ಜನ ಬಂದಾಗ ರಕ್ಷಣೆ ನಮ್ಮ ಹೊಣೆಗಾರಿಕೆ ಎಂದರು.

ಇಂತಹ ಸಂದರ್ಭದಲ್ಲಿ ಬಿಜೆಪಿಯವರ ಮಾತುಗಳಿಗೆ ಮಾನ್ಯತೆ ನೀಡುವ ಅಗತ್ಯವಿಲ್ಲ. ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ವಿಜೇತ ತಂಡವನ್ನು ತೆರೆದ ಬಸ್‌ನಲ್ಲಿ ವಿಜಯಯಾತ್ರೆ ನಡೆಸಬೇಕು ಎಂದು ನಿನ್ನೆ ದುರ್ಘಟನೆಗೂ ಮುನ್ನ ಹೇಳಿ ಸರ್ಕಾರ ಆಟಗಾರರಿಗೆ ಅಪಮಾನ ಮಾಡುತ್ತಿದೆ ಎಂದೆಲ್ಲಾ ಟೀಕೆ ಮಾಡಿದರು. ಕಾಲ್ತುಳಿತವಾಗುತ್ತಿದ್ದಂತೆ ಆ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಸಮಯ ಕಡಿಮೆ ಇದೆ ಎಂಬ ಕಾರಣಕ್ಕಾಗಿ ವಿಜಯಯಾತ್ರೆಗೆ ಅನುಮತಿ ನೀಡಿರಲಿಲ್ಲ. ಲೋಪಗಳಾಗಿರುವುದು ನಿಜ. ಎಲ್ಲದರಲ್ಲೂ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಪ್ರತಿಯೊಂದಕ್ಕೂ ಕೋಮುಬಣ್ಣ ನೀಡುವುದನ್ನು ಬಿಜೆಪಿ ಮೊದಲಿನಿಂದಲೂ ಪಾಲಿಸುತ್ತಿದೆ ಎಂದು ಆರೋಪಿಸಿದರು.

RELATED ARTICLES

Latest News